29 ಅಂಶಗಳ ಕಾರ್ಯಕ್ರಮದ ಪೈಕಿ ಪ್ರಮುಖವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯ ವಿಷಯಗಳ ಬೋಧನೆ ಪೂರ್ಣಗೊಳಿಸಲಾಗಿದೆ. ಪ್ರತಿದಿನ ಶಾಲೆ ಅವಧಿಯ ಮೊದಲು ಮತ್ತು ನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ನಡೆಸಲಾಗುತ್ತಿದೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ 29 ಅಂಶದ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೊಳಿಸಿದ್ದು, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತು ನೀಡಲಾಗಿದೆ.2024- 25ರಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆಯು 17ನೇ ಸ್ಥಾನ ಗಳಿಸಿತ್ತು. ಪರೀಕ್ಷೆಗೆ ಹಾಜರಾದ 15,545 ವಿದ್ಯಾರ್ಥಿಗಳ ಪೈಕಿ 11,621 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. 74.76ರಷ್ಟು ಫಲಿತಾಂಶ ದಾಖಲಾದರೆ 2025ರ ಫಲಿತಾಂಶದ ಪ್ರಕಾರ ಜಿಲ್ಲೆಯು ಶೇ. 67.7ರಷ್ಟು ಉತ್ತೀರ್ಣ ಪ್ರಮಾಣದೊಂದಿಗೆ 17ನೇ ಸ್ಥಾನವನ್ನು ಉಳಿಸಿಕೊಂಡಿದೆ. ಈ ವರ್ಷ ರಾಜ್ಯಮಟ್ಟದಲ್ಲಿ ಟಾಪ್ 10ನೊಳಗೆ ಸ್ಥಾನ ಪಡೆಯಲು 29 ಅಂಶದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ.
2026ರ ಪರೀಕ್ಷೆಯಲ್ಲಿ ಬರೆಯುವ ವಿದ್ಯಾರ್ಥಿಗಳ ತಾಲೂಕುವಾರು ಮಾಹಿತಿ ಹೀಗಿದೆ. ಗದಗ 4865, ಮುಂಡರಗಿ 1906, ನರಗುಂದ 1416, ರೋಣ 3783, ಶಿರಹಟ್ಟಿ 2698 ಒಟ್ಟು 14665 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.ಶಿಕ್ಷಕರಿಂದ ವೇಕ್ ಅಪ್ ಕಾಲ್: 29 ಅಂಶಗಳ ಕಾರ್ಯಕ್ರಮದ ಪೈಕಿ ಪ್ರಮುಖವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯ ವಿಷಯಗಳ ಬೋಧನೆ ಪೂರ್ಣಗೊಳಿಸಲಾಗಿದೆ. ಪ್ರತಿದಿನ ಶಾಲೆ ಅವಧಿಯ ಮೊದಲು ಮತ್ತು ನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಓದಿನಲ್ಲಿ ತೊಡಗುತ್ತಿರುವುದನ್ನು ಪರಿಶೀಲಿಸಲು ಪ್ರತಿದಿನ ಮುಂಜಾನೆ ಮತ್ತು ಸಂಜೆ ಶಿಕ್ಷಕರು ವೇಕ್ ಆಪ್ ಕಾಲ್ ಮಾಡುತ್ತಿದ್ದಾರೆ.
ಕಲಿಕೆಯಲ್ಲಿ ಸರಾಸರಿ ಹಾಗೂ ಸರಾಸರಿಗಿಂತ ಕಡಿಮೆ ಮತ್ತು ಸರಾಸರಿಗಿಂತ ಉತ್ತಮವಾಗಿರುವ ವಿದ್ಯಾ ರ್ಥಿಗಳ ಗುಂಪುಗಳನ್ನು ಪ್ರತ್ಯೇಕವಾಗಿ ರಚಿಸಿ ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಒಪ್ಪಿಸುವ ಕಾರ್ಯವನ್ನು ಪ್ರೌಢಶಾಲಾ ಶಿಕ್ಷಕರು ಮಾಡುತ್ತಿದ್ದಾರೆ.ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಜಾರಿಗೊಳಿಸಿದ್ದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾದರಿಯನ್ನು ಅನುಸರಿಸಿ ಯಾವ್ಯಾವ ಶಾಲೆಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆಯೋ ಅಲ್ಲೆಲ್ಲ ಘಟಕ ಪರೀಕ್ಷೆಗಳನ್ನು ವೆಬ್ ಕಾಸ್ಟಿಂಗ್ ಮೂಲಕವೇ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳ ಸಂಯೋಜನೆ: ಕಲಿಕೆಯಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳನ್ನು ಉತ್ತಮವಾಗಿ ಓದುವ ಅಥವಾ ಕಲಿಕಾ ಪ್ರಗತಿ ಸಾಧಿಸಿರುವ ವಿದ್ಯಾರ್ಥಿಗಳೊಂದಿಗೆ ಸಂಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ದಿನ 2 ಪುಟಗಳನ್ನು ಬರೆಸುವುದು ಮತ್ತು ಗಟ್ಟಿಯಾಗಿ ಓದಿಸುವ ಅಭ್ಯಾಸ ಮಾಡಿಸುತ್ತಿದ್ದು, ನಿರಂತರವಾಗಿ ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಕೇಸ್ ಸ್ಟಡಿ ನಡೆಸಿ ಪರಿಹಾರ ಕ್ರಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ತರುವ ನಿಟ್ಟಿನಲ್ಲಿ 29 ಅಂಶದ ಕಾರ್ಯಕ್ರಮಗಳು ರೂಪಿಸಲಾಗಿದೆ. ಪ್ರತಿದಿನ ಎರಡರಿಂದ ಮೂರು ಶಾಲೆಗಳಿಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸುತ್ತಿದ್ದೇನೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ನೀಡಲಾಗಿದೆ ಎಂದು ಡಿಡಿಪಿಐ ರೇಣುಕಪ್ಪ ಎಸ್ ಬುರಡಿ ತಿಳಿಸಿದರು.