ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವ ಮೇ 4 ರಂದು ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಗಳಿಂದ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕ್ರೈಸ್ತ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.ವಾರ್ಷಿಕೋತ್ಸವ ಅಂಗವಾಗಿ ಮೇ 1ರ ಗುರುವಾರ ಧ್ವಜಾರೋಹಣವನ್ನು ಬಳ್ಳಾರಿ ಧರ್ಮಕ್ಷೇತ್ರದ ಹಟ್ಟಿ ಪವಿತ್ರ ದೇವಾಲಯದ ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್, ಆರಾಧನೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ವಂ.ಗುರುಗಳಾದ ರೇ.ಫಾ.ವಿಜಯಕುಮಾರ್, ಆನಂದ್ ಪ್ರಸಾದ್, ಅನಿಲ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.
2ರಂದು ಸಂಜೆ ಬೆಂಗಳೂರು ಹೋಲಿ ಘೋಸ್ಟ್ ದೇವಾಲಯದ ಧರ್ಮಗುರುಗಳಾದ ಸಿಲುವೈ ಮುತ್ತು ಅವರು ವಿಶೇಷ ಪೂಜೆ ಪ್ರಬೋಧನೆಯನ್ನು ನೀಡಿದರು.3ರಂದು ಸಂಜೆ 5.30 ಕ್ಕೆ ಮೈಸೂರಿನ ಪುಷ್ಪಗಿರಿ ಬಾಲಯೇಸುವಿನ ದೇವಾಲಯದ ಧರ್ಮಗುರುಗಳಾದ ಮರಿಯ ಕ್ಷೇವಿಯರ್ ಹಾಗೂ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ಜೆರಾಲ್ಡ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಆಡಂಬರ ದಿವ್ಯ ಬಲಿಪೂಜೆ ಪ್ರಬೋಧನೆ ಮತ್ತು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸಂಸ್ಕಾರ ವಿತರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾದಿಗಳು ಸಲ್ಲಿಸಿದರು.ಭಾನುವಾರ ಸಂಜೆ 5.30 ಕ್ಕೆ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ಹಾಗೂ ಕ್ರೈಸ್ತ ಭಕ್ತಾದಿಗಳು ಕನ್ನಡ ವೃತ್ತದಲ್ಲಿ ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಮಹಾ ಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಡಾ. ಬರ್ನಾಡ್ ಮೋರಸ್ ಅವರನ್ನು ಕನ್ನಡ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆದೊಯ್ಯಲಾಯಿತು. ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಡಾ. ಬರ್ನಾಡ್ ಮೋರಸ್ ಹಬ್ಬದ ಆಡಂಬರ ಗಾಯನ ದಿವ್ಯ ಬಲಿಪೂಜೆ ಹಾಗೂ ಮಕ್ಕಳಿಗೆ ಧೃಢೀಕರಣ ಸಂಸ್ಕಾರವನ್ನು ನೇರವೇರಿಸಿದರು. ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಫಾದರ್ ಜಾರ್ಜ್ ದೀಪಕ್, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಲಯದ ಶ್ರೇಷ್ಠ ಧರ್ಮ ಗುರುಗಳಾದ ಜೇಮ್ಸ್ ಡೋಮಿನಿಕ್ ಇತರೇ ಧರ್ಮ ಕೇಂದ್ರಗಳಿಂದ ಆಗಮಿಸಿದ್ದ ಧರ್ಮಗುರುಗಳು ಒಗ್ಗೂಡಿ ಆಡಂಬರ ಬಲಿಪೂಜೆಯನ್ನು ನೆರವೇರಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಒಳಾಂಗಣವನ್ನು ಬಣ್ಣ ಹೂಗಳು, ಬಂಟಿಂಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ, 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್), ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ರೇ. ಫಾ. ಮಾರ್ಟಿನ್, ಮಾದಾಪುರ ದೇವಾಲಯದ ರೇ.ಫಾ.ಸೂಸೈರಾಜ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ರೇ. ಪಾ. ಅವಿನಾಶ್, ರಾಯಲ್ ಕ್ರಾಸ್ತಾ, ಹ್ಯಾರಿಟೇರಿ, ಪುಷ್ಪಗಿರಿ ಬಾಲ ಯೇಸು ದೇವಾಲಯದ ಮರಿಯನ್ ಕ್ಸೇವಿಯರ್, ರೇ.ಪಾ.ಚಾಲ್ಸ್ ಹಾಗೂ ಸಂತ ಅಂತೋಣಿ ದೇವಾಲಯದ ಫಾದರ್ ವಿಜಯಕುಮಾರ್ ಮತ್ತಿತರರು ಇದ್ದರು.
ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು, ಕುಶಾಲನಗರ, ಹೊಸಕೋಟೆ, ಸೋಮವಾರಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಕನ್ಯಾಸ್ತ್ರೀಯರು ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಪ್ರತಿಮೆಯನ್ನು ಇರಿಸಿ ಬ್ಯಾಂಡ್ಸೆಟ್ ನೊಂದಿಗೆ ಧರ್ಮಗುರುಗಳು, ಕ್ರೈಸ್ತ ಸನ್ಯಾಸಿನಿಯರು ಮತ್ತು ಸುಂಟಿಕೊಪ್ಪ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಹಾಗೂ ಭಕ್ತಿ ಗಾಯನಗಳನ್ನು ಹಾಡುತ್ತ ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು. ನಂತರ ದೇವಾಲಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ಆಶೀರ್ವಚನದೊಂದಿಗೆ ವಾರ್ಷಿಕೋತ್ಸವವು ಸಂಪನ್ನಗೊಂಡಿತು.
ನಗರದ ಇಕ್ಕೆಲೆಗಳಲ್ಲಿ ಹಬ್ಬದ ವಾತವರಣ, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಮೆರವಣಿಗೆಯ ವೈಭವ ಕಣ್ಣು ತುಂಬಿಕೊಂಡರು. ಆಗಮಿಸಿದ ಭಕ್ತಾದಿಗಳಿಗೆ ಭೋಜನವನ್ನು ಏರ್ಪಡಿಸಲಾಗಿತ್ತು.