ಉಪಚುನಾವಣೆ ಅಂತಿಮ ಕಣ ಸಿದ್ಧ: 3 ಕ್ಷೇತ್ರದಲ್ಲಿ 45 ಮಂದಿ ಸ್ಪರ್ಧಿಗಳು

| Published : Oct 31 2024, 02:06 AM IST

ಸಾರಾಂಶ

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ 19 ಮಂದಿ ಉಮೇದುವಾರಿಕೆ ಹಿಂಪಡೆದಿದ್ದು, ಒಟ್ಟು 47 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ/ಹಾವೇರಿ/ಸಂಡೂರು

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ 19 ಮಂದಿ ಉಮೇದುವಾರಿಕೆ ಹಿಂಪಡೆದಿದ್ದು, ಒಟ್ಟು 47 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ.

ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಬುಧವಾರ ಚನ್ನಪಟ್ಟಣದಿಂದ 7, ಶಿಗ್ಗಾಂವಿಯಿಂದ 11 ಮತ್ತು ಬಳ್ಳಾರಿಯಿಂದ ಒಬ್ಬರು ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಚನ್ನಪಟ್ಟಣದಲ್ಲಿ 31, ಶಿಗ್ಗಾಂವಿ 8 ಹಾಗೂ ಸಂಡೂರಿನಲ್ಲಿ 6 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಹೈವೋಲ್ಟೇಜ್‌ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಮಂದಿ ಅಂದರೆ ಬರೊಬ್ಬರಿ 50 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ನಾಮ ಪತ್ರಪರಿಶೀಲನೆ ವೇಳೆ 12 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದವು. ಬಳಿಕ ಒಟ್ಟು 38 ಮಂದಿ ಕಣದಲ್ಲಿ ಉಳಿದಿದ್ದರು. ಇದೀಗ 7 ಮಂದಿ ನಾಮಪತ್ರ ಹಿಂಪಡೆದಿರುವ ಕಾರಣ ಒಟ್ಟು 31 ಮಂದಿ ಸ್ಪರ್ಧಾಳುಗಳು ಚುನಾವಣೆ ಎದುರಿಸಲಿದ್ದಾರೆ. ಈ ಮೂರೂ ಕ್ಷೇತ್ರಗಳಿಗೆ ನ.13ರಂದು ಮತದಾನ ನಡೆಯಲಿದ್ದು, ನ.23ರಂದು ಮತಎಣಿಕೆ ನಡೆಯಲಿದೆ.

ಅಂತಿಮ ಕಣದಲ್ಲಿರುವ ಪ್ರಮುಖರು: ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ(ಬಿಜೆಪಿ), ಯಾಸೀರ್‌ ಅಹ್ಮದ್‌ ಖಾನ್‌ ಪಠಾಣ್‌(ಕಾಂಗ್ರೆಸ್‌), ಖಾಜಾಮೊಹಿದ್ದೀನ್ ಗುಡಗೇರಿ(ಸೋಶಿಯಲಿಸ್ಟ್ ಪಾರ್ಟಿ (ಇಂಡಿಯಾ), ರವಿ ಕೃಷ್ಣರೆಡ್ಡಿ(ಕರ್ನಾಟಕ ರಾಷ್ಟ್ರ ಸಮಿತಿ) ಇತರರು.

ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌(ಕಾಂಗ್ರೆಸ್‌), ನಿಖಿಲ್‌ ಕುಮಾರಸ್ವಾಮಿ(ಜೆಡಿಎಸ್‌-ಬಿಜೆಪಿ ಮೈತ್ರಿ), ಎಸ್‌.ಅಭಿಷೇಕ್‌(ಉತ್ತಮ ಪ್ರಜಾಕೀಯ ಪಕ್ಷ), ಇತರರು.

ಸಂಡೂರಿನಲ್ಲಿ ಈ.ಅನ್ನಪೂರ್ಣ(ಕಾಂಗ್ರೆಸ್‌), ಬಂಗಾರು ಹನುಮಂತು(ಬಿಜೆಪಿ), ಅಂಜಿನಪ್ಪ ಎನ್.(ಕರ್ನಾಟಕ ಜನತಾ ಪಕ್ಷ), ಇತರರು.

-----

ಶಿಗ್ಗಾಂವಿ: ಯಾಸೀರ್‌ ಪಠಾಣ್‌ ವರ್ಸಸ್‌ ಭರತ್‌ ಬೊಮ್ಮಾಯಿಸಂಡೂರು: ಈ.ಅನ್ನಪೂರ್ಣ ವರ್ಸಸ್‌ ಬಂಗಾರು ಹನುಮಂತುಚನ್ನಪಟ್ಟಣ: ಸಿ.ಪಿ.ಯೋಗೇಶ್ವರ್‌ ವರ್ಸಸ್‌ ನಿಖಿಲ್‌ ಕುಮಾರಸ್ವಾಮಿ

-----