ಜೀವಜಲ ಸಂರಕ್ಷಿಸಲು ಪಣ ತೊಡಿ: ಪಿಡಿಒ

| Published : Apr 18 2024, 02:22 AM IST

ಸಾರಾಂಶ

ಮತದಾನ ನಮ್ಮೇಲ್ಲರ ಹಕ್ಕು, ಮತ ಚಲಾಯಿಸಿ ಪ್ರಜಾಪ್ರಭುತ್ವ ಮೆರೆಸೋಣ.

ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ

ಕನ್ನಡಪ್ರಭ ವಾರ್ತೆ ಕುಕನೂರು

ಜೀವಜಲ ಸಂರಕ್ಷಿಸಲು ಪಣ ತೊಡೋಣ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ ಹೇಳಿದರು.

ತಾಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ನಡೆದ ರೋಜಗಾರ ದಿನಾಚರಣೆ, ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಉದ್ಯೋಗ ಖಾತ್ರಿ ದುಡಿಮೆಯ ಖಾತ್ರಿ ಅಭಿಯಾನ, ಮತದಾನ ಜಾಗೃತಿ ಕಾರ್ಯಕ್ರಮ (ಸ್ವೀಪ್‌) ಉದ್ದೇಶಿಸಿ ಮಾತನಾಡಿದ ಅವರು, ಮತದಾನ ನಮ್ಮೇಲ್ಲರ ಹಕ್ಕು, ಮತ ಚಲಾಯಿಸಿ ಪ್ರಜಾಪ್ರಭುತ್ವ ಮೆರೆಸೋಣ. ನಾವೆಲ್ಲರೂ ನನ್ನ ಭೂಮಿ, ನನ್ನ ಗ್ರಾಮ, ನನ್ನ ದೇಶ ಎಂಬ ಅಭಿಮಾನದಿಂದ ಕೆಲಸ ಮಾಡೋಣ, ಅಂತರ್ಜಲ ಕಾಪಾಡೋಣ ಎಂದರು.

ಆಸೆ, ಆಮಿಷಗಳು ಮತ್ತು ಜಾತಿ, ಮತ ಮರೆತು ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ಮತ ಹಾಕಿ ಸುಭದ್ರ ರಾಷ್ಟ್ರ ಕಟ್ಟಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ಇರುವ ಒಂದು ವರ. ಸ್ವಾವಲಂಬನೆಯಿಂದ ಕೆಲಸ ಮಾಡಿ, ಗ್ರಾಮೀಣ ಬದುಕನ್ನು ಹಸನಾಗಿಸಲು ಇರುವ ಒಂದು ಮಹಾತ್ವಾಕಾಂಕ್ಷಿ ಯೋಜನೆ. ಇಲ್ಲಿ ಎಲ್ಲರಿಗೂ ಸಮಾನ ಕೂಲಿ ಇದೆ. ಮಹಿಳಾ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೆಲಸ ಮಾಡಬೇಕು. ಏಕೆಂದರೆ ಸಾಮಾನ್ಯವಾಗಿ ಮಹಿಳೆಯರಿಗೆ ಕೂಲಿ ಕಡಿಮೆ ಇರುತ್ತದೆ. ಆದರೆ ನರೇಗಾ ಯೋಜನೆಯಲ್ಲಿ ಸಮಾನ ಕೂಲಿ ಇದೆ. ವೈಯಕ್ತಿಕ ಕಾಮಗಾರಿಗಳನ್ನೂ ಸಹ ಯೋಜನೆಯಲ್ಲಿ ಅನುಷ್ಠಾನ ಮಾಡಲು ಅವಕಾಶ ಇದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಗ್ರಾಮ ಕಾಯಕ ಮಿತ್ರರಾದ ಗೀತಾ ಈಳಿಗೇರಿ, ಕಾಯಕ ಬಂಧುಗಳಾದ ಕೋಟೇಶ್‌, ಮಾರುತಿ, ಮಲ್ಲಿಕಾರ್ಜುನ, ದೇವೇಂದ್ರಪ್ಪ ಹಾಗೂ ಕೂಲಿಕಾರರು ಇದ್ದರು.