ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಾಲೂಕಿನ ನಾನಾ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಆಶೀರ್ವಾದ ಪಡೆದರು. ಹಲಸಳ್ಳಿ ಗವಿಮಠಕ್ಕೆ ಭೇಟಿ ನೀಡಿ ಶ್ರೀ ಷಡಕ್ಷರಿ ಸ್ವಾಮಿ ಹಾಗೂ ಹೆಬ್ಣಿ ಪ್ರಭುಲಿಂಗಸ್ವಾಮಿ, ಶಂಭುಲಿಂಗಸ್ವಾಮೀಜಿ, ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದ ಅಧ್ಯಕ್ಷ ಶ್ರೀ ನಂಜುಂಡಸ್ವಾಮಿ, ಬಿ.ಜಿ.ಪುರ ಹೊರಮಠದ ಚಂದ್ರಶೇಖರ್ ಮಹಾಸ್ವಾಮೀಜಿ, ಮಂಟೇಸ್ವಾಮಿ ಮಠದ ಜ್ಞಾನೇಶ್ ಮಹಾಸ್ವಾಮೀಜಿಯ ಭೇಟಿ ಮಾಡಿ ಆಶೀರ್ವಾದ ಪಡೆದರು. ಸಮಾಜದ ಏಳಿಗೆಯಲ್ಲಿ ಮಠಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಶೈಕ್ಷಣಿಕ ಕ್ರಾಂತಿ ಉಂಟುಮಾಡುವಲ್ಲಿ ಮಠಗಳ ಪಾತ್ರ ಅಗಾಧವಾಗಿದೆ. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಶಾಲಾ, ಕಾಲೇಜುಗಳ ಉನ್ನತೀಕರಿಸುವ ಕನಸು ಕಂಡಿದ್ದು, ಇದಕ್ಕೆ ಮಠಾಧೀಶರ ಆಶೀರ್ವಾದ ಬೇಕೆಂದು ಕೋರಿದರು. ಇದೇ ವೇಳೆ ತಾಲೂಕಿನ ಉಪ್ಪಾರ ಸಮಾಜ, ಸವಿತಾ ಸಮಾಜ, ಮಡಿವಾಳ, ಬೆಸ್ತ ಸಮಾಜ, ಕ್ರೈಸ್ತ ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದರು.
ರಾಜಕೀಯ ನನಗೇನೂ ಹೊಸದಲ್ಲ: ಚಂದ್ರುನನಗೆ ರಾಜಕೀಯ ಹೊಸದಲ್ಲ. ಇಷ್ಟು ದಿನ ತೆರೆ ಹಿಂದೆ ಇದ್ದು ಈಗ ನೇರವಾಗಿ ಚುಣಾವಣಾ ಕಣಕ್ಕಿಳಿದಿದ್ದೇನೆ. ಜನರು ಸೇವೆ ಮಾಡಲು ಆಶೀರ್ವಾದ ಮಾಡಲಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ವಿಶ್ವಾಸ ವ್ಯಕ್ತಪಡಿಸಿದರು. ಬಿ.ಜಿ.ಪುರ ಹೊರಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಜನಸೇವೆ ಮಾಡಲು ಅವಕಾಶ ಸಿಕ್ಕಿದೆ. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ, ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತಂದು ನೀರಾವರಿ ಸಮಸ್ಯೆ ನಿವಾರಣೆಗೆ ಯತ್ನಿಸಲಾಗುವುದು ಎಂದರು. ಪ್ರಚಾರಕ್ಕೆ ಹೋದ ಕಡೆ ನನಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ನಾನು ಮಂಡ್ಯದ ಮಣ್ಣಿನ ಮಗ. ನನ್ನ ಗೆಲುವು ರೈತರ ಗೆಲುವು. ಇದು ನನ್ನ ಕರ್ಮಭೂಮಿ. ಜನ ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ನರೇಂದ್ರಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ಮಾಜಿ ಜಿಪಂ ಸದಸ್ಯ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್, ಮಳವಳ್ಳಿ ಕಾಂಗ್ರೆಸ್ ಖಜಾಂಜಿ ಮಹದೇವ್, ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಕುಂದೂರು ಪ್ರಕಾಶ್, ಮಹೇಶ್, ಅನಿಲ್ ಕುಮಾರ್ ಸೇರಿ ಹಲವರು ಉಪಸ್ಥಿತರಿದ್ದರು.