ಸಾರಾಂಶ
ಗೋವಾ ರಾಜ್ಯಕ್ಕೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿಳಂಬವಾಗಿರುವ ಎರಡೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಂಸದ ಜಗದೀಶ ಶೆಟ್ಟರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗೋವಾ ರಾಜ್ಯಕ್ಕೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿಳಂಬವಾಗಿರುವ ಎರಡೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಂಸದ ಜಗದೀಶ ಶೆಟ್ಟರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ-ಖಾನಾಪುರ-ರಾಮನಗರ-ಅನಮೋಡ ಮಾರ್ಗವಾಗಿ ಗೋವಾ ಬಾರ್ಡರ್ (84 ಕಿ.ಮೀ)ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಬೆಳಗಾವಿ-ಜಾಂಬೋಟಿ-ಕಣಕುಂಬಿ ಚೋರ್ಲಾ ಘಾಟ್ವರೆಗೆ ಅಲ್ಫಾಲ್ಟ್ ರಸ್ತೆ (43 ಕಿ.ಮೀ) ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತು ಅನುದಾನ ಸಹ ಬಿಡುಗಡೆಯಾಗಿದೆ ಎಂದರು.
ಪ್ರಸ್ತಾಪಿತ ಎರಡು ರಸ್ತೆಗಳು ಬೆಳಗಾವಿಯಿಂದ ಗೋವಾ ಸಂಪರ್ಕ ಕಲ್ಪಿಸುವ ಬಹುಮುಖ್ಯವಾದ ರಸ್ತೆಗಳು ವ್ಯಾಪಾರ, ವಹಿವಾಟು ಮತ್ತು ಸರಕು ಸಾಗಾಣಿಕೆಗೆ ತುಂಬಾ ಉಪಯುಕ್ತ. ಆದರೆ ಇವೆರಡೂ ರಸ್ತೆಗಳು ತುಂಬಾ ಹಾಳಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಕುಂಠಿತಗೊಂಡಿದೆ. ಜತೆಗೆ ಸಾರ್ವಜನಿಕರಿಂದ ಹಾಗೂ ವ್ಯಾಪಾರಸ್ಥರಿಂದ ಅನೇಕ ದೂರುಗಳು ಕೇಳಿ ಬರುತ್ತಿವೆ. ಪ್ರಸ್ತಾಪಿತ ಎರಡು ರಸ್ತೆಗಳ ಕಾಮಗಾರಿಗಳನ್ನು ಕೂಡಲೇ ಆರಂಭಿಸುವಂತೆ ಸೂಚಿಸಿದರು.ಬೆಳಗಾವಿ (ಶಗಣಮಟ್ಟಿ) ಹುನಗುಂದ ಮಾರ್ಗವಾಗಿ ರಾಯಚೂರು ನಡುವಿನ ನಿರ್ಮಾಣ ಪ್ರಾಥಮಿಕ ಹಂತದಲ್ಲಿರುವ ರಸ್ತೆ ಕಾಮಗಾರಿ ಬಗ್ಗೆ ಪ್ರಗತಿಯ ಬಗ್ಗೆ ವಿವರ ಸಹ ಅಧಿಕಾರಿಗಳಿಂದ ಪಡೆದರು. ಸಭೆಯಲ್ಲಿ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಭುವನೇಶ್ವರ ಕುಮಾರ, ಪವನ್ ಹಾಗೂ ಭೂಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪೂರ, ಚವ್ಹಾಣ್ ಇದ್ದರು.