ಏ. 1ರಿಂದ ಅಬ್ಬಿಗೇರಿಯಲ್ಲಿ ಸಮುದಾಯ ಕಾಮಗಾರಿ ಆರಂಭಿಸಿ: ರಿಯಾಜ್‌ ಖತೀಬ್‌

| Published : Mar 19 2024, 12:47 AM IST

ಏ. 1ರಿಂದ ಅಬ್ಬಿಗೇರಿಯಲ್ಲಿ ಸಮುದಾಯ ಕಾಮಗಾರಿ ಆರಂಭಿಸಿ: ರಿಯಾಜ್‌ ಖತೀಬ್‌
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ತಾಲೂಕಿನ ಅಬ್ಬಿಗೇರಿ ಗ್ರಾಪಂನಲ್ಲಿ ಸೋಮವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪೂರ್ವಭಾವಿ ಕಾಯಕ ಬಂಧುಗಳ ಸಭೆ ನಡೆಯಿತು.

ರೋಣ: ಹಿಂದಿನ ವರ್ಷದಂತೆ ಈ ಬಾರಿಯೂ 2024-25ನೇ ಸಾಲಿನಲ್ಲಿ ಏ. 1ನೇ ವಾರದಿಂದ ಸಮುದಾಯ ಕಾಮಗಾರಿ ಆರಂಭವಾಗುತ್ತಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವ ಜತೆಗೆ ಗುಣಮಟ್ಟದ ಕೆಲಸ ನಿರ್ವಹಿಸುವಂತೆ ತಾಪಂ ಸಹಾಯಕ ನಿರ್ದೇಶಕ (ಗ್ರಾ. ಉ) ರಿಯಾಜ್‌ ಖತೀಬ್ ಹೇಳಿದರು.

ತಾಲೂಕಿನ ಅಬ್ಬಿಗೇರಿ ಗ್ರಾಪಂನಲ್ಲಿ ಸೋಮವಾರ ನಡೆದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪೂರ್ವಭಾವಿ ಕಾಯಕ ಬಂಧುಗಳ ಸಭೆಯಲ್ಲಿ ಅವರು ಮಾತನಾಡಿ, ರೋಣ ತಾಲೂಕಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಪಂಚಾಯಿತಿಯಲ್ಲಿ ಅಬ್ಬಿಗೇರಿ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವೂ ಏಪ್ರಿಲ್‌ನಲ್ಲಿ ಅಬ್ಬಿಗೇರಿ ಗ್ರಾಮದಲ್ಲಿ ಕೂಲಿಕಾರರ ಬೇಡಿಕೆ ಆಧರಿಸಿ ನಮೂನೆ-6 ಪಡೆಯುವ ಮೂಲಕ ಉದ್ಯೋಗ ಪ್ರಾರಂಭಿಸಲಿದ್ದು, ಕಾಯಕ ಬಂಧುಗಳಾದ ತಾವು ತಮ್ಮ ಕೂಲಿಕಾರರ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆ ಸಂಖ್ಯೆ ಲಿಂಕ್ ಹಾಗೂ ಉದ್ಯೋಗ ಚೀಟಿ ಎನ್.ಸಿ.ಪಿ.ಐ. ಲಿಂಕ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಹಣ ಜಮಾ ಆಗುವುದಿಲ್ಲ. ಅದಕ್ಕೆ ಕೆಲಸ ಮಾಡಿದ ಕೂಲಿಕಾರರಿಗೆ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಇನ್ನು ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. 6 ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಗ್ರಾಪಂನಿಂದ ಕೂಸಿನ ಮನೆ ಆರಂಭ ಮಾಡಿದ್ದು, ತಾವು ತಮ್ಮ ಮಕ್ಕಳನ್ನು ಅಲ್ಲಿಯೇ ಬಿಟ್ಟು ಹೋಗಬೇಕು ಮತ್ತು ಈ ವಿಷಯವಾಗಿ ವ್ಯಾಪಕ ಪ್ರಚಾರ ಮಾಡಲು ತಿಳಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ. ಮಾತನಾಡಿ, ಕೆಲಸದ ಸ್ಥಳದಲ್ಲಿ ಕೂಲಿಕಾರರ ಹಾಜರಾತಿಯನ್ನು ಎರಡು ಹಂತದಲ್ಲಿ ಎನ್.ಎಂ.ಎಂ.ಎಸ್. ಆ್ಯಪ್‌ನಲ್ಲಿ ಸೆರೆ ಹಿಡಿಯಬೇಕು, ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಎಬಿಪಿಎಸ್ ಆಗದೇ ಇರುವ ಕೂಲಿಕಾರರು ಕೂಡಲೇ ಎಬಿಪಿಎಸ್ ಮತ್ತು ಎನ್.ಸಿ.ಪಿ.ಐ. ಲಿಂಕ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿ.ಎಫ್‌.ಟಿ., ಜಿ.ಕೆ‌.ಎಂ. ಮತ್ತು ಕಾಯಕ ಬಂಧುಗಳು ಮತ್ತು ಪಂಚಾಯಿತಿ ಸಿಬ್ಬಂದಿ ಇದ್ದರು.