ಶಿರಡಿ ಮಾರ್ಗವಾಗಿ ಹುಬ್ಬಳ್ಳಿ- ಮನ್ಮಾಡ ರೈಲು ಆರಂಭಿಸಿ

| Published : May 26 2024, 01:32 AM IST

ಶಿರಡಿ ಮಾರ್ಗವಾಗಿ ಹುಬ್ಬಳ್ಳಿ- ಮನ್ಮಾಡ ರೈಲು ಆರಂಭಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಟ್‌ಫಾರ್ಮ್‌ಗಳಲ್ಲಿರುವ ಪ್ರದರ್ಶನ ಫಲಕದಲ್ಲಿ ರೈಲು ಆಗಮಿಸುವ ಕೊನೆ ಗಳಿಗೆಯಲ್ಲಿ ರೈಲು ಯಾವ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದೆ ಎಂದು ಪ್ರದರ್ಶಿಸುತ್ತಾರೆ. ಇದರಿಂದ ಕೊನೆಗಳಿಗೆಯಲ್ಲಿ ಪ್ರಯಾಣಿಕರು ತಮ್ಮ ಮಕ್ಕಳು, ಬ್ಯಾಗ್‌ ಹೊತ್ತುಕೊಂಡು ರೈಲು ತಲುಪಲು ಪರದಾಡಬೇಕಾಗುತ್ತದೆ.

ಹುಬ್ಬಳ್ಳಿ:

ಶಿರಡಿ ಭಕ್ತರಿಗೆ ಅನುಕೂಲವಾಗುವಂತೆ ಹುಬ್ಬಳ್ಳಿಯಿಂದ ಮನ್ಮಾಡಕ್ಕೆ ಹೊಸ ರೈಲನ್ನು ಓಡಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯರ ನಿಯೋಗವು ನೈಋತ್ಯ ರೈಲ್ವೆ ವಲಯವನ್ನು ಆಗ್ರಹಿಸಿದೆ.

ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಅವರನ್ನು ಭೇಟಿ ಮಾಡಿದ ನಿಯೋಗವೂ ವಿವಿಧ ಬೇಡಿಕೆಗಳುಳ್ಳ ಮನವಿ ಸಲ್ಲಿಸಿತು. ಜತೆಗೆ ಬೇಡಿಕೆಗಳ ಕುರಿತು ಮನದಟ್ಟು ಮಾಡಿಕೊಟ್ಟಿತು.

ಏನೇನು ಬೇಡಿಕೆ?:

ಹುಬ್ಬಳ್ಳಿಯಿಂದ ಬೆಳಗಾವಿ, ಪುಣಾ, ಕೊಪರಗಾಂವ (ಶಿರಡಿ) ಮಾರ್ಗವಾಗಿ ಮನ್ಮಾಡ್‌ಗೆ ಹೊಸ ರೈಲು ಪ್ರಾರಂಭಿಸಬೇಕು. ಶಿರಡಿ ಒಂದು ಮಹತ್ವದ ಯಾತ್ರಾಸ್ಥಳವಾಗಿದ್ದು, ಸಾವಿರಾರು ಭಕ್ತರು ಶಿರಡಿಗೆ ಆಗಮಿಸುತ್ತಾರೆ. ಹುಬ್ಬಳ್ಳಿಯಿಂದ ಶಿರಡಿಗೆ ನೇರ ರೈಲು ಸೇವೆ ಇಲ್ಲದ ಕಾರಣ ಪ್ರಯಾಣ ದುಸ್ತರವಾಗಿದೆ. ಹೆಚ್ಚಿನ ಭಕ್ತರು ಬಹು ಸಾರಿಗೆ ವಿಧಾನಗಳನ್ನು ಒಳಗೊಂಡ ದೀರ್ಘ ಮತ್ತು ದಣಿದ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಅದರಿಂದ ವಯಸ್ಸಾದವರಿಗೆ, ಮಕ್ಕಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಶಿರಡಿಗೆ ಸಮೀಪದ ರೈಲು ನಿಲ್ದಾಣಗಳಾದ ಕೋಪರಗಾಂವ ಮೂಲಕ ಹುಬ್ಬಳ್ಳಿಯಿಂದ ಮನ್ಮಾಡಗೆ ನೇರ ರೈಲು ಸೇವೆ ಆರಂಬಿಸಬೇಕು. ಈ ಹೊಸ ರೈಲು ನಿತ್ಯ ಸಂಜೆ ಹುಬ್ಬಳ್ಳಿಯಂದ ಹೊರಡುವಂತಾಗಬೇಕು ಎಂದು ಒತ್ತಾಯಿಸಿದರು.

07311/07312 ಹುಬ್ಬಳ್ಳಿ- ಅಹಮದಾಬಾದ್‌ ಸಾಪ್ತಾಹಿಕ ವಿಶೇಷ ರೈಲನ್ನು ಒಂದು ತಿಂಗಳ ಅವಧಿ ವರೆಗೆ ಮರು ಪರಿಚಯಿಸಿರುವುದು ಸಂತಸಕರ. ಈ ರೈಲನ್ನು ಜು. 2024ರ ವರೆಗೆ ವಿಸ್ತರಿಸಬೇಕು.

ಪ್ರತಿಯೊಂದು ಪ್ರಮುಖ ರೈಲು ನಿಲ್ದಾಣಗಳಲ್ಲಿ ಎಸ್ಕ್‌ಲೆಟರ್‌ಗಳನ್ನು ಆಳವಡಿಸಲಾಗಿದೆ. ಆದರೆ ಹುಬ್ಬಳ್ಳಿ, ಬೆಂಗಳೂರು ಮತ್ತು ಇನ್ನು ಕೆಲವೊಂದು ರೈಲು ನಿಲ್ದಾಣಗಳಲ್ಲಿ ಎಸ್ಕ್‌ಲೇಟರಗಳ ಕಾರ್ಯನಿರ್ವಹಿಸುತ್ತಿಲ್ಲ. ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಸರಾಗವಾಗಿ, ಶೀಘ್ರವಾಗಿ ಚಲಿಸಲು ಅನನುಕೂಲವಾಗಿದೆ. ಅವುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ಲಾಟ್‌ಫಾರ್ಮ್‌ಗಳಲ್ಲಿರುವ ಪ್ರದರ್ಶನ ಫಲಕದಲ್ಲಿ ರೈಲು ಆಗಮಿಸುವ ಕೊನೆ ಗಳಿಗೆಯಲ್ಲಿ ರೈಲು ಯಾವ ಸಂಖ್ಯೆಯ ಪ್ಲಾಟ್‌ಫಾರ್ಮ್‌ಗೆ ಆಗಮಿಸುತ್ತಿದೆ ಎಂದು ಪ್ರದರ್ಶಿಸುತ್ತಾರೆ. ಇದರಿಂದ ಕೊನೆಗಳಿಗೆಯಲ್ಲಿ ಪ್ರಯಾಣಿಕರು ತಮ್ಮ ಮಕ್ಕಳು, ಬ್ಯಾಗ್‌ ಹೊತ್ತುಕೊಂಡು ರೈಲು ತಲುಪಲು ಪರದಾಡಬೇಕಾಗುತ್ತದೆ. ಕಾರಣ ರೈಲು ಆಗಮಿಸುವ 15 ನಿಮಿಷಗಳ ಮೊದಲು ಪ್ಲಾಟ್‌ಫಾರ್ಮ್‌ನ ಸಂಖ್ಯೆ ಪ್ರದರ್ಶಿಸಬೇಕು. ಪ್ರಮುಖ ರೈಲುಗಳನ್ನು ಪ್ಲಾಟ್‌ಫಾರ್ಮ್‌ ನಂ. 1ರಿಂದ ಹೊರಡಿಸಬೇಕು ಎಂಬುದೂ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ನೈಋತ್ಯ ರೈಲ್ವೆ ವಲಯದ ಬಳಕೆದಾರರ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗದಲ್ಲಿ ಮಹಾವೀರ ಲಿಂಬ್‌ ಸೆಂಟರ್‌ನ ಅಧ್ಯಕ್ಷ ಹಾಗೂ ರೈಲ್ವೆ ಸಲಹಾ ಸಮಿತಿ ಸದಸ್ಯ ಗೌತಮ ಗುಲೇಚಾ, ಪ್ರಕಾಶ ಕಟಾರಿಯಾ, ಕಾಂತಿಲಾಲ ಬೊಹರಾ, ವರ್ಧಮಾನ, ಸುಭಾಷ ಡಂಕ ಸೇರಿದಂತೆ ಹಲವರಿದ್ದರು.