ಹಳಿಯಾಳ ಠಾಣೆಯ ಆವರಣದಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಎಂಬ ಅಭಿಯಾನದ ಜಾಗೃತಿ ಮೂಡಿಸಲು ಹಮ್ಮಿಕೊಂಡ ಬೈಕ್ ರ್ಯಾಲಿಗೆ ಶಾಸಕ ಆರ್.ವಿ. ದೇಶಪಾಂಡೆ ಹಸಿರು ನಿಶಾನೆ ತೋರಿಸಿದರು.
ಆಪರೇಷನ್ ರೈಸ್, ಬೇಡ ಬ್ರೋ ಅಭಿಯಾನಕ್ಕೆ ಶಾಸಕ ಹಸಿರು ನಿಶಾನೆಕನ್ನಡಪ್ರಭ ವಾರ್ತೆ ಹಳಿಯಾಳ
ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರು ಸಹಿತ ಕಿತ್ತು ಹಾಕಲು ಪಣತೊಟ್ಟಿರುವ ರಾಜ್ಯ ಸರ್ಕಾರ ಎರಡು ವರ್ಷದೊಳಗೆ ಮಾದಕ ವಸ್ತು ಮುಕ್ತ ಕರ್ನಾಟಕವನ್ನಾಗಿ ಮಾಡುವ ಗುರಿ ಹೊಂದಿದೆ. ಈ ಗುರಿಯನ್ನು ಸಾಧಿಸಲು ಸರ್ವರೂ ಸಹಕರಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.ಸೋಮವಾರ ಹಳಿಯಾಳ ಠಾಣೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಎಂಬ ಅಭಿಯಾನದ ಜಾಗೃತಿ ಮೂಡಿಸಲು ಹಮ್ಮಿಕೊಂಡ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಯುವಜನರು ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನಶೈಲಿ ಅಳವಡಿಸಿಕೊಳ್ಳಲು ಈ ಅಭಿಯಾನವು ಪ್ರೇರೆಪಿಸುತ್ತಿದೆ ಎಂದರು. ಸಮಾಜದ ಹಿತದೃಷ್ಟಿಯಿಂದ ಅತೀ ಅವಶ್ಯಕವಾದ ಭವ್ಯ ಆರೋಗ್ಯಯುತ ಸದೃಢ ದೇಶದ ನಿರ್ಮಾಣಕ್ಕಾಗಿ ಈ ಅಭಿಯಾನದಲ್ಲಿ ಸರ್ವರೂ ಮುಕ್ತ ಮನಸ್ಸಿನಿಂದ ಸಹಭಾಗಿಯಾಗಿ ಎಂದರು.ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಪಿಎಸ್ಐ ಕೃಷ್ಣಗೌಡ ಅರಕೇರಿ, ಪ್ರಕಾಶ ಮಾಳಿ, ಸಿಬ್ಬಂದಿ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ವಿಷ್ಣು ಮಿಶಾಳೆ, ಅಜರ್ ಹಲಸಿ ಹಾಗೂ ಇತರರು ಇದ್ದರು.
ತದನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಬೈಕ್ ರ್ಯಾಲಿಯು ನಡೆಯಿತು. ರ್ಯಾಲಿಯಲ್ಲಿ ಪುರಸಭೆ, ಕಂದಾಯ, ವಿವಿಧ ಇಲಾಖೆಯ ಸಿಬ್ಬಂದಿ ಪಾಲ್ಗೊಂಡರು.