ವಕ್ಫ್‌ ನೋಟಿಸ್‌ ಪಡೆಯಲು ಸರ್ಕಾರ ಆದೇಶ

| Published : Nov 10 2024, 01:44 AM IST / Updated: Nov 10 2024, 01:45 AM IST

ಸಾರಾಂಶ

ಕೆಲವು ರೈತರು ಹಾಗೂ ಇತರ ಆಸ್ತಿಗಳನ್ನು ವಕ್ಫ್‌ ಹೆಸರಿಗೆ ಖಾತೆ ಮಾಡುವ ಸಂಬಂಧ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಸೂಚಿಸಿ ಕಂದಾಯ ಇಲಾಖೆಯು ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ?

- ರೈತರು, ಇತರೆ ಆಸ್ತಿಗಳನ್ನು ವಕ್ಫ್‌ ಹೆಸರಿಗೆ ಖಾತೆ ಮಾಡುವ ಸಂಬಂಧ ನೀಡಿರುವ ಎಲ್ಲ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು- ಖಾತೆ ಬದಲಾವಣೆ ಕುರಿತು ಯಾವುದೇ ಕಚೇರಿ, ಪ್ರಾಧಿಕಾರದಿಂದ ನೀಡಿದ ನಿರ್ದೇಶನಗಳನ್ನೂ ಕೂಡಲೇ ವಾಪಸ್‌ ಪಡೆಯಬೇಕು- ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರ ವಿರುದ್ಧ ಕ್ರಮ ಜರುಗಿಸಬಾರದು- ನೋಟಿಸ್‌ ಹಿಂಪಡೆಯಲು ಸಿಎಂ ಆದೇಶಿಸಿದ ಹೊರತಾಗಿಯೂ 2ನೇ ನೆನಪೋಲೆ ಹೊರಡಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ - ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಿಂದ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶ

--

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲವು ರೈತರು ಹಾಗೂ ಇತರ ಆಸ್ತಿಗಳನ್ನು ವಕ್ಫ್‌ ಹೆಸರಿಗೆ ಖಾತೆ ಮಾಡುವ ಸಂಬಂಧ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಸೂಚಿಸಿ ಕಂದಾಯ ಇಲಾಖೆಯು ಎಲ್ಲಾ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.

ಖಾತೆ ಬದಲಾವಣೆ ಕುರಿತು ಯಾವುದೇ ಕಚೇರಿ ಅಥವಾ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದ ಹಿಂಪಡೆಯಬೇಕು. ಜತೆಗೆ ವಕ್ಫ್‌ ಆಸ್ತಿ ಕುರಿತ ಮ್ಯುಟೇಷನ್‌ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಬಾರದು ಎಂದು ಕಂದಾಯ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ (ಭೂ ಮಂಜೂರಾತಿ ಮತ್ತು ಸುಧಾರಣೆ) ಡಾ.ಬಿ.ಉದಯಕುಮಾರ್‌ ಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಎಲ್ಲಾ ರೀತಿಯ ನೋಟಿಸ್‌ ಹಿಂಪಡೆಯುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿದ ಹೊರತಾಗಿಯೂ ಮೇಲಧಿಕಾರಿಗಳ ಅನುಮತಿ ಹಾಗೂ ಅನುಮೋದನೆ ಇಲ್ಲದೆ ನ.7ರ ಎರಡನೇ ನೆನಪೋಲೆ ಹೊರಡಿಸಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲೇ ಸ್ಪಷ್ಟಪಡಿಸಲಾಗಿದೆ.