ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಕೋಮು ಸೌಹಾರ್ದತೆಯ ಕೇಂದ್ರವಾಗಿದ್ದ ಕರಾವಳಿಯಲ್ಲಿ ನಿರಂತರ ಕೋಮು ದ್ವೇಷ ಹರಡುವ ರೀತಿಯಲ್ಲಿ ಸರಣಿ ಕೊಲೆಗಳು ನಡೆಯುತ್ತಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಇಕ್ಬಾಲ್ ಅಹಮ್ಮದ್ ಮೂಲ್ಕಿ ಆಗ್ರಹಿಸಿದ್ದಾರೆ.ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಂಡಿರುವ ಕರಾವಳಿಯಲ್ಲಿ ವಾಣಿಜ್ಯ ಅಭಿವೃದ್ಧಿಗೆ ಇಂತಹ ಘಟನೆಗಳಿಂದ ತೀವ್ರ ಅಡಚಣೆಯಾಗಿದೆ. ಅಮಾಯಕರನ್ನು ಹಾಡುಹಗಲೆ ನಿರ್ಧಾಕ್ಷಿಣ್ಯವಾಗಿ ಕೊಲೆ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಶಾಂತಿ ಸುವ್ಯವಸ್ಥೆ ಕಾನೂನು ಹಾಳುಗೆಡಹುವ ಕಾರ್ಯವನ್ನು ಸರ್ಕಾರ ಹತ್ತಿಕ್ಕಲು ವಿಫಲವಾಗಿದೆ. ಸರ್ಕಾರ ಇಂತಹ ಕೃತ್ಯಗಳನ್ನು ತಡೆ ಹಿಡಿಯದಿದ್ದಲ್ಲಿ ಕರಾವಳಿಯ ಅಭಿವೃದ್ಧಿ ಅಸಾಧ್ಯ. ಕರಾವಳಿಗೆ ಮುಂದೆ ಯಾವುದೇ ಉದ್ದಿಮೆಗಳು ಕಾಲಿಡದು. ಸಾಮಾನ್ಯ ಜನರ ಪಾಡು ಹೇಳತೀರದು. ಬ್ಯಾಂಕಿಂಗ್, ಶಿಕ್ಷಣ ಕ್ಷೇತ್ರಕ್ಕೆ ಇಂತಹ ಘಟನೆಗಳು ಮಾರಕವಾಗಿದೆ.ಕರಾವಳಿಯಲ್ಲಿ ಮಾತ್ರ ಕಾನೂನು ಸುವ್ಯವಸ್ಥೆ ಅಸಾಧ್ಯ ಏಕೆ. ಸರ್ಕಾರದ ಗುಪ್ತಚರ ವೈಫಲ್ಯವೂ ಇದಕ್ಕೆ ಕಾರಣವಾಗಿದ್ದು, ಜನಸಾಮಾನ್ಯರು ಆತಂಕಕ್ಕೊಳಗಾಗಿದ್ದಾರೆ. ಜನರ ಸುಲಲಿತ ಜನಜೀವನಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸುವುದು ಅನಿವಾರ್ಯವಾಗಿದೆ. ಇದು ಅಸಾಧ್ಯವಾದರೆ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲೆಂದು ಇಕ್ಬಾಲ್ ಅಹಮ್ಮದ್ ಮೂಲ್ಕಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.