ರಾಜ್ಯ ಸರ್ಕಾರ ಶೂನ್ಯ ಅಭಿವೃದ್ಧಿ ಸರ್ಕಾರ: ನಿರಂಜನ್‌ಕುಮಾರ್

| Published : May 21 2024, 12:39 AM IST / Updated: May 21 2024, 02:34 PM IST

ರಾಜ್ಯ ಸರ್ಕಾರ ಶೂನ್ಯ ಅಭಿವೃದ್ಧಿ ಸರ್ಕಾರ: ನಿರಂಜನ್‌ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್ ಅಸಮರ್ಥ ಸರ್ಕಾರವಾಗಿದ್ದು, ಒಂದು ಶೂನ್ಯ ಅಭಿವೃದ್ಧಿ ಸರ್ಕಾರವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಆರೋಪಿಸಿದರು.

 ಚಾಮರಾಜನಗರ :  ರಾಜ್ಯ ಕಾಂಗ್ರೆಸ್ ಅಸಮರ್ಥ ಸರ್ಕಾರವಾಗಿದ್ದು, ಒಂದು ಶೂನ್ಯ ಅಭಿವೃದ್ಧಿ ಸರ್ಕಾರವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 11 ತಿಂಗಳಲ್ಲಿ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದು ಕಂಡುಬರುತ್ತಿದೆ. 

ರಾಜ್ಯ ಸರ್ಕಾರವು ಜನರನ್ನು ಭಯದ ವಾತಾವರಣದಲ್ಲಿ ಬದುಕುವ ದಾರುಣ ಸ್ಥಿತಿಗೆ ತಲುಪಿಸಿದೆ. ಪದೇ ಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ. ಸರ್ಕಾರದ ಅಸಮರ್ಥ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕೆಂಬ ಸಾಮರ್ಥ್ಯವೇ ಇಲ್ಲದ ಸ್ಥತಿಯಲ್ಲಿ ಗೃಹ ಸಚಿವರು ಇದ್ದಾರೆ. 

ಪರಿಸ್ಥಿತಿಯನ್ನು ಅವಲೋಕನ ಮಾಡಲು ಅಸಮರ್ಥವಾಗಿರುವ ರಾಜ್ಯ ಸರ್ಕಾರ ಇರುವ ಕಾರಣಕ್ಕೋಸ್ಕರ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಂಡುಬರುತ್ತಿದೆ ಎಂದು ದೂರಿದರು. ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಲಾಭದ ಹುನ್ನಾರ, ಮತಬ್ಯಾಂಕ್ ಸಂರಕ್ಷಣೆಯ ಕಾರಣಕ್ಕೆ ಹಿಂದೆ ಕಾನೂನು- ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ರಾಜ್ಯವು ಇವತ್ತು ಗೂಂಡಾ ರಾಜ್ಯವಾಗಿ ಮತ್ತು ಕೊಲೆಗಡುಕರ ರಾಜ್ಯವಾಗಿ ಪರಿವರ್ತನೆಗೊಂಡಿದೆ. 

ಅಂಕಿ ಅಂಶದ ಪ್ರಕಾರ, ಸಿಟಿ ಕ್ರೈಮ್ ಬ್ಯೂರೋ ಮತ್ತು ನ್ಯಾಷನಲ್ ಕ್ರೈಮ್ ಬ್ಯೂರೋ ಪ್ರಕಾರ ಕಳೆದ 11 ತಿಂಗಳಲ್ಲಿ ಶೇ 60ಕ್ಕಿಂತ ಹೆಚ್ಚು ಈ ಥರ ಕ್ರಿಮಿನಲ್ ಚಟುವಟಿಕೆ ಜಾಸ್ತಿ ಆಗಿರುವುದು ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಅಮಾನುಷ ಕೃತ್ಯಗಳು ಜಾಸ್ತಿಯಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಪೂರ್ಣ ಕಾರಣ. ರಾಜ್ಯ ಸರಕಾರವು ದೃಢ ನಿರ್ಧಾರ ತೆಗೆದುಕೊಳ್ಳದ ಕಾರಣ ಪದೇ ಪದೇ ಇಂಥ ದುರ್ಘಟನೆಗಳು ಹೆಚ್ಚಾಗಿವೆ ಎಂದರು. 

ಹುಬ್ಬಳ್ಳಿಯ ಅಂಜಲಿಯ ಹತ್ಯಾ ಪ್ರಕರಣ, ಅದಕ್ಕೂ ಮೊದಲು ನೇಹಾ ಪ್ರಕರಣ, ಬೆಳಗಾವಿಯಲ್ಲಿ ನಡೆದ ದಲಿತ ಮಹಿಳೆಯ ವಿವಸ್ತ್ರಗೊಳಿಸಿದ ಆಮಾನವೀಯ ಘಟನೆ, ರೊಟ್ಟಿ ಕೇಳಿದ ದಲಿತ ಯುವಕನ ಹತ್ಯೆ ಒಂದು ಕಡೆ ಮತಾಂಧ ಶಕ್ತಿಗಳು ಸ್ವಚ್ಛಂದವಾಗಿ ವಿಜೃಂಭಿಸುತ್ತಿದ್ದರೆ ಇನ್ನೊಂದು ಕಡೆ ಕೊಲೆಗಡುಕರು, ಗೂಂಡಾ ರಾಜ್ಯವಾಗಿ ಕರ್ನಾಟಕ ಪರಿವರ್ತನೆಗೊಂಡಿದೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ರಾಜ್ಯ ಸುರಕ್ಷಿತವಾಗಿಲ್ಲ. ಕರ್ನಾಟಕವು ಅಪಾಯಕಾರಿ ಸ್ಥಿತಿಯಲ್ಲಿದೆ.ಈ ಸಂಬಂಧವಾಗಿ ರಾಜ್ಯದ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಈ ಸಂಬಂಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ. ಒಬ್ಬ ಅಸಮರ್ಥ ರಾಜ್ಯದ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. 

ಬರ ಪರಿಹಾರ ಹಣ, ಸಾಲದ ಖಾತೆ ಜಮ ಕೇಂದ್ರ ಸರ್ಕಾರದ ಹಣದಲ್ಲಿ ಸರ್ಕಾರ ಸಾಧನೆ ಮಾಡಲು ಹೊರಟಿದೆ. ಗೃಹಲಕ್ಷ್ಮಿ ಸಮರ್ಪಕವಾಗಿ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯರಿಗೆ ತಲುಪಿಲ್ಲ. ಗೃಹಜ್ಯೋತಿ ಯೋಜನೆಗೆ 200 ಯುನಿಟ್ ವರೆಗೂ ಉಚಿತ ಎಂದು ಹೇಳಿ ಏಕಾಎಕಿ ವಿದ್ಯುತ್ ದರವನ್ನು ಹೆಚ್ಚಿಸಿದ್ದಾರೆ. ರೈತರಿಗೆ ಯಾವುದೇ ಕೃಷಿ ಬ್ಯಾಂಕ್‌ಗಳ ಸಾಲ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. SC/ST ವಿಧ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಉಂಟಾಗಿದೆ ಎಂದರು.

ಎಲ್ಲಾ ಸಮುದಾಯದ ನಿಗಮಗಳು ಅನುದಾನದ ಕೊರತೆಯಿಂದ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಹಾಗೂ ರೋಬಾಲ್ ಪಂಪುಗಳನ್ನು ನೀಡದಿರುವುದರಿಂದ ಫಲಾನುಭವಿಗಳಿಗೆ ಯಾವುದೇ ಅನುಕೂಲ, ಅಭಿವೃದ್ಧಿಗೆ ಹಣ ಇಲ್ಲದೇ ಶಂಕು ಸ್ಥಾಪನೆ ಗುದ್ದಲಿ ಪೂಜೆ ಮಾಡದಂತಾಗಿದೆ. ಆರೋಗ್ಯ ಕ್ಷೇತ್ರದಲ್ಲಿಯು ಕಳಪೆ ಸಾಧನೆ ಯಂತ್ರೋಪಕರಣ ಖರೀದಿಗೆ ಕೇಂದ್ರ ನೀಡುವ ಅನುದಾನದಲ್ಲಿ ರೈತರಿಗೆ ಕೃಷಿ ಸಲಕರಣೆ, ಕೃಷಿ ಪಂಪ್ ಸೆಟ್‌ ಗಳಿಗೆ ವಿದ್ಯುತ್ ಸಂಪರ್ಕ ಕೊಡುವಲ್ಲಿ ತುಂಬ ವಿಳಂಬ ಮಾಡುತ್ತಿದ್ದು, ಸಂಪರ್ಕದ ವೆಚ್ಚ 5 ರಿಂದ 5 ಪಟ್ಟು ದುಬಾರಿಯಾಗಿರುವುದೆ ಸಾಕ್ಷಿ. ಈ ಸರ್ಕಾರದ ಮತ್ತೊಂದು ಗ್ಯಾರಂಟಿ ಯುವನಿಧಿ ಯೋಜನೆಯು ಇನ್ನು ಪದವೀಧರರಿಗೆ ತಲುಪದೇ ಇರುವುದು ಸರ್ಕಾರದ ಸಾಧನೆಯಾಗಿದ್ದು ಎಲ್ಲ ಕ್ಷೇತ್ರದಲ್ಲು ಇವರ ಸಾಧನೆ ಶೂನ್ಯವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ್ ವೀರೇಂದ್ರ, ವೇಣುಗೋಪಾಲ್ ಹಾಜರಿದ್ದರು.