ಮೈಸೂರಿನ ಹಿರಿಯ ರಂಗಭೂಮಿ ಕಲಾವಿದ ಹುಲುಗಪ್ಪ ಕಟ್ಟೀಮನಿ ಹಾಗೂ ಆಂಧ್ರಪ್ರದೇಶದ ಸಿಕಿಂದರಾಬಾದ್ನ ವಲ್ಲೂರು ಶ್ರೀಹರಿರಾವ್ ಅವರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಬಳ್ಳಾರಿ: ಇಲ್ಲಿನ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ಪ್ರತಿವರ್ಷ ನೀಡುವ ರಾಜ್ಯಮಟ್ಟದ "ಬಳ್ಳಾರಿ ರಾಘವ " ಪ್ರಶಸ್ತಿ ಘೋಷಣೆಯಾಗಿದ್ದು ಮೈಸೂರಿನ ಹಿರಿಯ ರಂಗಭೂಮಿ ಕಲಾವಿದ ಹುಲುಗಪ್ಪ ಕಟ್ಟೀಮನಿ ಹಾಗೂ ಆಂಧ್ರಪ್ರದೇಶದ ಸಿಕಿಂದರಾಬಾದ್ನ ವಲ್ಲೂರು ಶ್ರೀಹರಿರಾವ್ ಅವರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರಿಗೆ ₹21,100 ನಗದು, ರಾಘವರ ಬೆಳ್ಳಿಪದಕ ಹಾಗೂ ಪ್ರಶಸ್ತಿ ಫಲಕವನ್ನು ರಾಘವ ಕಲಾ ಮಂದಿರದಲ್ಲಿ ಆಗಸ್ಟ್ 2 ಮತ್ತು 3ರಂದು ಸಂಜೆ 6 ಗಂಟೆಗೆ ಜರುಗುವ ರಾಘವರ 146ನೇ ಜಯಂತಿ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಅಸೋಸಿಯೇಷನ್ ತಿಳಿಸಿದೆ.ಆ.2ರಂದು ಜರುಗುವ ಸಮಾರಂಭವನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಉದ್ಘಾಟಿಸುವರು. ಅಸೋಸಿಯೇಷನ್ ಗೌರವಾಧ್ಯಕ್ಷ ಕೆ.ಚನ್ನಪ್ಪ ಅಧ್ಯಕ್ಷತೆ ವಹಿಸುವರು. ಮೊದಲ ದಿನ ಮೈಸೂರಿನ ಹಿರಿಯ ನಟ, ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ ಝಕೀರ ನದಾಫ ರಚನೆ ಮತ್ತು ನಿರ್ದೇಶನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ "ನೆಲಮುಗಿಲು " ನಾಟಕ ಪ್ರದರ್ಶನಗೊಳ್ಳಲಿದೆ.
ಆ.3ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಕೋಟೇಶ್ವರರಾವ್ ವಹಿಸುವರು. ಮುಖ್ಯ ಅತಿಥಿಯಾಗಿ ಆಂಧ್ರಪ್ರದೇಶದ ಅನಂತಪುರದ ಆಕಾಶವಾಣಿ ಕೇಂದ್ರದ ಹಿರಿಯ ಅಧಿಕಾರಿ ಡಾ.ಜೆ.ಶ್ಯಾಮ ಸುಂದರ ಶಾಸ್ತ್ರಿ ಪಾಲ್ಗೊಳ್ಳುವರು. ಬಳಿಕ ಅನಂತಪುರದ ಲಲಿತ ಕಲಾ ಪರಿಷತ್ ವತಿಯಿಂದ ತೆಲುಗು ಪೌರಾಣಿಕ ಪದ್ಯ ನಾಟಕ "ಶಕುನಿ " ಪ್ರದರ್ಶನಗೊಳ್ಳಲಿದೆ. ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ ಜಯಂತಿ ಹಿನ್ನೆಲೆಯಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ 2009ರಿಂದ ಪ್ರತಿವರ್ಷ ರಾಜ್ಯಮಟ್ಟದ ಹಿರಿಯ ಕಲಾವಿದರನ್ನು ಗುರುತಿಸಿ "ಬಳ್ಳಾರಿ ರಾಘವ " ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.