ಎಫ್‌ಎಸ್‌ಎಲ್‌ ವರದಿ ಬರುವ ವರೆಗೆ ಧರ್ಮಸ್ಥಳ ಗ್ರಾಮದಲ್ಲಿ ಅಗೆತಕ್ಕೆ ಬ್ರೇಕ್‌

| Published : Aug 19 2025, 01:00 AM IST

ಎಫ್‌ಎಸ್‌ಎಲ್‌ ವರದಿ ಬರುವ ವರೆಗೆ ಧರ್ಮಸ್ಥಳ ಗ್ರಾಮದಲ್ಲಿ ಅಗೆತಕ್ಕೆ ಬ್ರೇಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ವಿಧಿವಿಜ್ಞಾನದ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಬರುವವರೆಗೂ ಗುಂಡಿ ಅಗೆಯುವ ಕಾರ್ಯ ಸ್ಥಗಿತಗೊಳಿಸಲು ಎಸ್‌ಐಟಿ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

- ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಪರಮೇಶ್ವರ್‌ ಮಾಹಿತಿ

---

ಪರಮೇಶ್ವರ್‌ ಹೇಳಿದ್ದೇನು?

- ಅತ್ಯಾಚಾರ ಸಂತ್ರಸ್ತೆಯೆ ಶವ ಹೂತೆ ಎಂದು ದೂರು ಬಂದಿತ್ತು

- ಅಜ್ಞಾತ ವ್ಯಕ್ತಿಯಿಂದ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿತ್ತು

- ಮಹಿಳಾ ಆಯೋಗದ ಪತ್ರದ ಮೇರೆಗೆ ಎಸ್‌ಐಟಿ ರಚನೆ ಆಗಿದೆ

- ಎಸ್‌ಐಟಿ ಯಾವುದೇ ಒತ್ತಡಕ್ಕೊಳಗಾಗದೆ ತನಿಖೆ ನಡೆಸುತ್ತಿದೆ

- ಈವರೆಗೆ ಸಿಕ್ಕಿರುವ ಮಾದರಿ ಎಫ್‌ಎಸ್‌ಎಲ್‌ಗೆ ರವಾನೆಯಾಗಿದೆ

- ಈವರೆಗೂ ತನಿಖಾ ವರದಿ ಬಂದಿಲ್ಲ, ಅಲ್ಲಿವರೆಗೆ ಅಗೆತ ಸ್ಥಗಿತ

- ದೂರುದಾರ ಅನಾಮಿಕಗೆ ರಕ್ಷಣೆ , ‘ವಿ’ ಎಂಬ ಆತಗೆ ನಾಮಕರಣ

- ತನಿಖೆ ಸರಿಯಾಗಿ ಆಗಬೇಕು. ಸತ್ಯಾಂಶ ಹೊರಗೆ ಬರಬೇಕು

- ಆರೋಪ ಸುಳ್ಳು ಎಂದಾದರೆ, ಧರ್ಮಸ್ಥಳದ ಬಗ್ಗೆ ಗೌರವ ಹೆಚ್ಚಳ

- ಧರ್ಮಸ್ಥಳ ಗ್ರಾಮ ಪ್ರಕರಣ ಬಗ್ಗೆ ಗೃಹ ಸಚಿವರಿಂದ ಉತ್ತರ

---

ವಿಧಾನಸಭೆಯಲ್ಲಿ ಧರ್ಮಸ್ಥಳ

ಪ್ರಕರಣದ ಬಿರುಸಿನ ಚರ್ಚೆ

ಬೆಂಗಳೂರು: ವಿಧಾನಸಭೆಯಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಪ್ರಕರಣ ಹಾಗೂ ಈ ಕುರಿತು ನಡೆದಿರುವ ಎಸ್‌ಐಟಿ ತನಿಖೆ ಭಾರಿ ಚರ್ಚೆ ಹಾಗೂ ವಾಕ್ಸಮರಕ್ಕೆ ಕಾರಣವಾಯಿತು. ಸ್ಥಳದ ಪಾವಿತ್ರ್ಯತೆ ಕಾಪಾಡುವ ಬಗ್ಗೆ ಹಾಗೂ ಪ್ರಕರಣದಲ್ಲಿ ನ್ಯಾಯ ಒದಗಿಸುವ ಬಗ್ಗೆ ಆಡಳಿತ-ಪ್ರತಿಪಕ್ಷಗಳ ಸದಸ್ಯರು ಇಡೀ ದಿನ ಚರ್ಚೆ ನಡೆಸಿದರು.

--

ಮಾರ್ಕ್‌ ಮೈ ವರ್ಡ್‌

ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವಗಳ ಪತ್ತೆಗೆ ಸಂಬಂಧಿಸಿ ಆತ್ಮಸಾಕ್ಷಿಯಿಂದ ಕೆಲಸ ಮಾಡುತ್ತಿದ್ದೇವೆ. ನಾವೂ ಹಿಂದುಗಳೇ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಮಾರ್ಕ್‌ ಮೈ ವರ್ಡ್‌ (ನನ್ನ ಮಾತು ನೆನಪಿಟ್ಟುಕೊಳ್ಳಿ) ಧರ್ಮಸ್ಥಳದ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಸತ್ಯ ಹೊರಗೆ ತರುತ್ತೇವೆ.

- ಡಾ। ಜಿ. ಪರಮೇಶ್ವರ್‌, ಗೃಹ ಸಚಿವ

==

ಕನ್ನಡಪ್ರಭ ವಾರ್ತೆ ವಿಧಾನಸಭೆ

ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ವಿಧಿವಿಜ್ಞಾನದ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಬರುವವರೆಗೂ ಗುಂಡಿ ಅಗೆಯುವ ಕಾರ್ಯ ಸ್ಥಗಿತಗೊಳಿಸಲು ಎಸ್‌ಐಟಿ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ನಡೆದ ಚರ್ಚೆಗೆ ಸೋಮವಾರ ಸುದೀರ್ಘವಾಗಿ ಉತ್ತರಿಸಿದ ಅವರು, ’ಎಸ್ಐಟಿ ಯಾರದೇ ಒತ್ತಡಕ್ಕೆ ಮಣಿಯದೆ ಬಹಳ ಗಂಭೀರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿನ್ನು ಎಷ್ಟು ಕಡೆ ಅಗೆಯಬೇಕು, ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಎಸ್‌ಐಟಿ ತೀರ್ಮಾನಿಸಲಿದೆ. ಈವರೆಗೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು, ಮಣ್ಣಿನ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಆ ವರದಿ ಇನ್ನೂ ಬಂದಿಲ್ಲ. ಹೀಗಾಗಿ ವರದಿ ಬರುವವರೆಗೂ ಈ ವಿಚಾರದಲ್ಲಿ ಮುಂದಕ್ಕೆ ಹೋಗದಿರಲು ಎಸ್‌ಐಟಿ ತೀರ್ಮಾನಿಸಿದೆ’ ಎಂದು ತಿಳಿಸಿದರು.

‘ಈ ಪ್ರಕರಣದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ. ತನಿಖೆ ನಡೆಯುವಾಗ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ. ಮಧ್ಯಂತರ ವರದಿ ಇನ್ನೂ ಬಂದಿಲ್ಲ. ಶೀಘ್ರ ಸಂಪೂರ್ಣ ತನಿಖೆ ಮಾಡಿ ಎಂದು ಸರ್ಕಾರ ಎಸ್ಐಟಿಗೆ ಹೇಳಬಹುದು. ಆದರೆ, ಎಸ್ಐಟಿಯ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಅಥವಾ ಧೂಷಣೆ ಮಾಡಲ್ಲ. ಅದರ ಅಗತ್ಯವೂ ಇಲ್ಲ. ಇದರಲ್ಲಿ ಏನನ್ನೂ ಮುಚ್ಚಿಡುವುದಿಲ್ಲ. ಸರ್ಕಾರಕ್ಕೆ ಬೇರೆ ಯಾವ ಉದ್ದೇಶವೂ ಇಲ್ಲ. ವಸ್ತು ಸ್ಥಿತಿ ಸದನದ ಮುಂದಿಟ್ಟಿದ್ದೇನೆ. ಹೀಗಾಗಿ ವಿಪಕ್ಷ ನಾಯಕರು ಹಾಗೂ ಸದಸ್ಯರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ಒತ್ತಡಕ್ಕೆ ಮಣಿದಿಲ್ಲ:

ಯಾರದ್ದೋ ಒತ್ತಡಕ್ಕೆ ಮಣಿದು ಸರ್ಕಾರ ಎಸ್‌ಐಟಿ ರಚನೆ ಮಾಡಲಿಲ್ಲ. ಧರ್ಮಸ್ಥಳ ಠಾಣೆ ಪೊಲೀಸರಿಗೆ ತನಿಖೆ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಸ್ಐಟಿ ರಚಿಸಿದ್ದೇವೆ. ಸದ್ಯ ಸಿಕ್ಕಿರುವ ಮೂಳೆಗಳು ಯಾರದು? ಕೊಲೆಯೇ? ಅಸಹಜ ಸಾವೇ? ಸಹಜ ಸಾವೇ ಎಂಬುದು ತನಿಖೆಯಿಂದ ಹೊರಬರಬೇಕು. ಇದರಲ್ಲಿ ಯಾವುದೇ ರೀತಿ ರಾಜಿ ಇಲ್ಲ ಎಂದು ಸಚಿವರು ತಿಳಿಸಿದರು.

ನ್ಯಾಯಾಲಯದಿಂದ ತನಿಖೆಗೆ ಆದೇಶ:

ಧರ್ಮಸ್ಥಳ ಗ್ರಾಮದ ವಿಚಾರ ಇಡೀ ದೇಶದ ಗಮನ ಸೆಳೆಯುತ್ತಿದೆ. ಕಳೆದ ಜು.3ರಂದು ಒಬ್ಬ ವ್ಯಕ್ತಿ ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ. ನನಗೆ ನಿರಂತರ ಪ್ರಾಣ ಬೆದರಿಕೆ ಹಾಕಿ ಧರ್ಮಸ್ಥಳದಲ್ಲಿ ಹಲವು ಪುರುಷರು, ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಮೃತದೇಹಗಳನ್ನು ಹೂತು ಹಾಕಿಸಿದ್ದಾರೆ. ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾನೆ. ತಮಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೊಡುವಂತೆಯೂ ಕೋರಿದ್ದಾನೆ. ಅದರಂತೆ ಜು.4ರಂದು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆತನನ್ನು ಮ್ಯಾಜಿಸ್ಟ್ರೇಟ್‌ ಬಳಿ ಕರೆದೊಯ್ದು ಬಿಎನ್‌ಎಸ್‌ಎಸ್‌ ಕಲಂ183 ಅಡಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ. ಅದರಂತೆ ಧರ್ಮಸ್ಥಳ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಮಾಹಿತಿ ನೀಡಿದರು.

ಮಹಿಳಾ ಆಯೋಗ ಪತ್ರದ ಮೇರೆಗೆ ಎಸ್‌ಐಟಿ ರಚನೆ:

ಈ ನಡುವೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕಳೆದ 20 ವರ್ಷಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರು, ವಿದ್ಯಾರ್ಥಿನಿಯರ ಅಸಹಜ ಸಾವು, ಅತ್ಯಾಚಾರ ಕುರಿತು ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದರು. ಬಳಿಕ ನಾನು ಮತ್ತು ಮುಖ್ಯಮಂತ್ರಿಗಳು ಚರ್ಚಿಸಿ ಜು.19ರಂದು ಎಸ್‌ಐಟಿ ರಚಿಸಿ ಆದೇಶಿಸಲಾಗಿತ್ತು. ಬಳಿಕ ಎಸ್ಐಟಿ ತಂಡವು ತನಿಖೆ ಆರಂಭಿಸಿತು. ಅನಾಮಿಕನನ್ನು ಕರೆಸಿ ಸಿಆರ್‌ಪಿಸಿ ಕಲಂ 161 ಅಡಿ ಹೇಳಿಕೆ ದಾಖಲಿಸಿದ್ದರು. ಆತ ತಾನು ಎಲ್ಲೆಲ್ಲಿ ಶವ ಹೂತಿದ್ದೇನೆ ಎಂದು ನೀಡಿದ ಮಾಹಿತಿ ಮೇರೆಗೆ ನಕ್ಷೆ ಸಿದ್ಧಪಡಿಸಿಕೊಂಡು ಸಬ್‌ ಡಿವಿಷನ್‌ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಆ ವ್ಯಕ್ತಿ ತೋರಿದ ಸ್ಥಳಗಳಲ್ಲಿ ಉತ್ಖನನ ಆರಂಭಿಸಿದ್ದರು ಎಂದು ವಿವರಿಸಿದರು.

2 ಕಡೆ ಮೂಳೆಗಳು ಪತ್ತೆ:

ಆತ ಗುರುತಿಸಿದ ಸ್ಥಳ ಪೈಕಿ ಒಂದು ಜಾಗದಲ್ಲಿ ಅಸ್ತಿಪಂಜರ ಸಿಕ್ಕಿದೆ. ಮತ್ತೊಂದರಲ್ಲಿ ಮೂಳೆಗಳು ಸಿಕ್ಕಿವೆ. ಈ ಮೂಳೆಗಳು, ಮಣ್ಣಿನ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಉಳಿದ ಜಾಗದಲ್ಲಿ ಮೂಳೆಗಳು ಸಿಕ್ಕಿಲ್ಲ. ಹೀಗಾಗಿ ಆ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಏಕೆಂದರೆ, ಮಣ್ಣಿನಲ್ಲಿ ಆ್ಯಸಿಡ್‌ ಅಂಶ ಇದ್ದರೆ ಮೂಳೆಗಳು ಕರಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೀಗಾಗಿ ಪ್ರಯೋಗಾಲಯದಲ್ಲಿ ಈ ಮೂಳೆಗಳು, ಮಣ್ಣು ಮಾದರಿ, ಡಿಎನ್‌ಎ, ತಲೆ ಬುರುಡೆಯನ್ನು ವಿಶ್ಲೇಷಣೆಗೊಳಪಡಿಸಬೇಕು. ಹೀಗಾಗಿ ಎಸ್‌ಐಟಿ ವಾಸ್ತವದಲ್ಲಿ ಇನ್ನೂ ತನಿಖೆಗೆ ಇಳಿದಿಲ್ಲ. ಈ ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಅಸಲಿ ತನಿಖೆ ಶುರುವಾಗಲಿದೆ ಎಂದು ಸದನದ ಗಮನಕ್ಕೆ ತಂದರು.

ಕಾನೂನು ಪ್ರಕಾರ ಅನಾಮಿಕ ವ್ಯಕ್ತಿಗೆ ರಕ್ಷಣೆ:

ಎವಿಡೆನ್ಸ್‌ ಪ್ರೊಟೆಕ್ಷನ್‌ ಆ್ಯಕ್ಟ್‌ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆದೇಶದ ಮೇರೆಗೆ ಅನಾಮಿಕ ವ್ಯಕ್ತಿಗೆ ರಕ್ಷಣೆ ನೀಡಲಾಗಿದೆ. ನ್ಯಾಯಾಲಯವೇ ಆ ಅನಾಮಿಕನಿಗೆ ‘ವಿ’ ಎಂಬ ಹೆಸರು ನೀಡಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸಮಿತಿ ಸೂಚನೆ ಮೇರೆಗೆ ಆತನಿಗೆ ಮತ್ತು ಆತನ ಕುಟುಂಬಕ್ಕೆ ರಕ್ಷಣೆ ಒದಗಿಸಲಾಗಿದೆ. ಆತನನ್ನು ಪೊಲೀಸರು ಬಂಧಿಸಲು ಅಥವಾ ವಶಕ್ಕೆ ಪಡೆಯಲು ಸಾಧ್ಯವಿಲ್ಲ ಎನ್ನುವ ಮುಖಾಂತರ ವಿಪಕ್ಷಗಳು ಏಕೆ ಆತನನ್ನು ಬಂಧಿಸಿಲ್ಲ ಎಂಬ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ವಿಪಕ್ಷ ಏಕಾಏಕಿ ಗಂಭೀರ ಏಕೆ?:

ಧರ್ಮಸ್ಥಳ ಗ್ರಾಮದ್ದು ಬಹಳ ಸೂಕ್ಷ್ಮ ವಿಚಾರ. ಸದ್ಯ ಊಹಾಪೋಹಗಳ ಬಗ್ಗೆ ಚರ್ಚೆಗಳಾಗುತ್ತಿವೆ. ರಾಜ್ಯದ ಜನತೆ ಹಾಗೂ ಕೋಟ್ಯಂತರ ಭಕ್ತಾದಿಗಳು ಬಹಳ ಆತಂಕದಲ್ಲಿದ್ದಾರೆ. ಹೀಗಾಗಿ ಸರ್ಕಾರ ಬಹಳ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳುತ್ತಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರಗಳು ಬದಲಾಗುತ್ತಿವೆ. ಇದು ಆಗ ಬಾರದು. ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರು ಆರಂಭದಲ್ಲಿ ಎಸ್ಐಟಿ ಸ್ವಾಗತಿಸಿದ್ದರು. ಈಗ ಏಕಾಏಕಿ ಗಂಭೀರವಾಗಿ ತೆಗೆದುಕೊಂಡು ವ್ಯಾಖ್ಯಾನ ಮಾಡುವುದರ ಉದ್ದೇಶವಾದರೂ ಏನು ಎಂದು ಪರಮೇಶ್ವರ್‌ ಕೆಣಕಿದರು.

ಸುಳ್ಳಾದರೆ ಕ್ಷೇತ್ರದ ಗೌರವ ಮತ್ತಷ್ಟು ಹೆಚ್ಚಳ:

ತನಿಖೆ ಸರಿಯಾಗಿ ಆಗಬೇಕು. ಸತ್ಯಾಂಶ ಹೊರಗೆ ಬರಬೇಕು. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆರೋಪ ಸುಳ್ಳು ಎಂದಾದರೆ, ಧರ್ಮಸ್ಥಳದ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಭಕ್ತಾದಿಗಳ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರ ಬರಲಿದೆ. ಸಂತ್ರಸ್ತರ ಕುಟುಂಬಕ್ಕೂ ನ್ಯಾಯ ಸಿಗಲಿದೆ ಎಂದು ಇದೇ ವೇಳೆ ಸಚಿವರು ಹೇಳಿದರು.

ಇದರಲ್ಲಿ ರಾಜಕೀಯ ಬೆರೆಸುವುದು, ಧರ್ಮದ ಹೆಸರಿನಲ್ಲಿ ಗದ್ದಲ ಮಾಡುವುದು ಸರಿಯಲ್ಲ. ಸತ್ಯ ಹೊರಗೆ ಬಂದಾಗ ನಾವು, ನೀವು ಧರ್ಮಸ್ಥಳದ ಜನ ಸಮೂಹ ಎಲ್ಲರೂ ಒಪ್ಪಲೇಬೇಕು. ಹೀಗಾಗಿ ಇದನ್ನು ಬೇರೆ ರೀತಿ ಅರ್ಥೈಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

===

ತಲೆ ಬುರುಡೆ ಎಲ್ಲಿಂದ ತಂದೆ?: ಅನಾಮಿಕ ದೂರುದಾರನ ವಿಚಾರಣೆ

- ತಲೆಬುರುಡೆ ತಂದ ಸ್ಥಳ ತೋರಿಸು: ಎಸ್‌ಐಟಿ ಸೂಚನೆ

- ತಡಬಡಾಯಿಸಿದ ಮಾಸ್ಕ್‌ ಮ್ಯಾನ್‌, ಗೊಂದಲದ ಹೇಳಿಕೆಕನ್ನಡಪ್ರಭ ವಾರ್ತೆ ಬೆಳ್ತಂಗಡಿಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ), ಈಗ ಅನಾಮಿಕ ದೂರುದಾರ ಆರಂಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತಲೆ ಬುರುಡೆ ಬಗ್ಗೆ ವಿಚಾರಣೆ ಆರಂಭಿಸಿದೆ. ‘ತಲೆ ಬುರುಡೆ ತಂದಿದ್ದು ಎಲ್ಲಿಂದ?’ ಎಂದು ಪ್ರಶ್ನಿಸುತ್ತಿರುವ ಎಸ್‌ಐಟಿ, ಅನಾಮಿಕನಿಗೆ ತಲೆಬುರುಡೆ ತಂದ ಸ್ಥಳ ತೋರಿಸುವಂತೆ ಸೂಚಿಸಿದೆ. ಆದರೆ, ವಿಚಾರಣೆ ವೇಳೆ ದೂರುದಾರ ಗೊಂದಲಕ್ಕೀಡಾಗಿದ್ದು, ತಡಬಡಾಯಿಸಿ ನಾಟಕೀಯ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಅನಾಮಿಕ ದೂರುದಾರನನ್ನು ಸೋಮವಾರ ವಿಚಾರಣೆಗೆ ಒಳಪಡಿಸಲಾಯಿತು. ಸೋಮವಾರ ಎಂದಿನಂತೆ ವಕೀಲರೊಂದಿಗೆ ಖಾಸಗಿ ವಾಹನದಲ್ಲಿ, ಪೋಲಿಸರ ಎಸ್ಕಾರ್ಟ್‌ನಲ್ಲಿ ಅನಾಮಿಕ ದೂರುದಾರ ಕಚೇರಿಗೆ ಆಗಮಿಸಿದ. ಬೆಳಗ್ಗೆಯಿಂದಲೇ ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು.

ಧರ್ಮಸ್ಥಳ ಗ್ರಾಮದ ಕಲ್ಲೇರಿ ಬೋಳಿಯಾರು ಕಾಡಿನ ಭಾಗದಿಂದ ಆತ ಬುರುಡೆ ತಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಅದರ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಚಾರಣೆ ವೇಳೆ ಆತನ ಮುಂದೆ ಆತ ಬುರುಡೆ ತಂದ ದೃಶ್ಯಗಳಿರುವ ಈ ವಿಡಿಯೋ ಪ್ರದರ್ಶನ ಮಾಡಲಾಯಿತು. ವಿಚಾರಣೆಗೆ ಈ ವಿಡಿಯೋವನ್ನು ಆಧಾರವಾಗಿ ಬಳಸಲಾಗಿದೆ.ಜೊತೆಗೆ,‘ನ್ಯಾಯಾಲಯಕ್ಕೆ ಹಾಜರುಪಡಿಸಿದ ಬುರುಡೆ ತಂದಿದ್ದು ಎಲ್ಲಿಂದ?. ಯಾವಾಗ?, ಯಾವ ಸ್ಥಳದಿಂದ ತಂದಿದ್ದೀಯಾ?. ಆಗ ಆ ಸ್ಥಳದಲ್ಲಿ ಯಾರ್ಯಾರು ಇದ್ದರು? ಈ ಕೃತ್ಯಕ್ಕೆ ಯಾರ್ಯಾರು ಸಹಕರಿಸಿದ್ದಾರೆ?. ಸಮಾಧಿಯಲ್ಲಿದ್ದ ತಲೆ ಬುರುಡೆ ಅಗೆದು ತಂದೆಯಾ?’ ಎಂಬುದಾಗಿ ವಿಧವಿಧವಾಗಿ ಪ್ರಶ್ನಿಸಲಾಯಿತು. ಈ ವೇಳೆ, ಆತ ಉತ್ತರಿಸುವಾಗ ತಡಬಡಾಯಿಸಿದ್ದು, ಅತ್ಯಂತ ನಾಟಕೀಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಮಂಗಳವಾರ ತಲೆ ಬುರುಡೆ ತಂದ ಜಾಗದ ಮಹಜರು ನಡೆಸುವ ಸಾಧ್ಯತೆಯಿದೆ.

ಈ ಮಧ್ಯೆ, ಈ ವಿಡಿಯೋವನ್ನು ಜಾಲತಾಣದಲ್ಲಿ ಹಾಕಿದವರಿಗೂ ಎಸ್ಐಟಿಯಿಂದ ನೋಟಿಸ್‌ ನೀಡಲಾಗಿದ್ದು, ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ. ಹೀಗಾಗಿ, ತನಿಖೆ ಕುರಿತು ಮಾಧ್ಯಮಗಳಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುವವರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುವವರಿಗ ಹೆದರಿಕೆ ಶುರುವಾಗಿದೆ.ಎಸ್‌ಐಟಿ, ಕಳೆದ ಒಂದೂವರೆ ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತಿರುವ ಎಲ್ಲಾ ವಿಡಿಯೋಗಳನ್ನು ಸಂಗ್ರಹಿಸಿದ್ದು, ಇಂತವರ ಪಟ್ಟಿ ಸಿದ್ಧಮಾಡಿಕೊಂಡಿದೆ.