ಹೊನ್ನಾವರ: ಐದು ದಶಕಗಳ ಹಿಂದೆ ಸಚಿವರಾಗಿದ್ದ ಎಸ್.ಎಂ. ಯಾಹ್ಯಾ ಅವರು ಬದ್ಧತೆಯ ರಾಜಕಾರಣಿಯಾಗಿದ್ದರು. ಅವರು ಅಂದು ಮಾಡಿದ ಏತ ನೀರಾವರಿ ಕಾಮಗಾರಿ ಇಂದು ಅವರನ್ನು ನೆನಪಿಸುವಂತಾಗಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಕುದ್ರಗಿ ಗ್ರಾಪಂ ವ್ಯಾಪ್ತಿಯಲ್ಲಿ ಏತ ನೀರಾವರಿ ಯೋಜನೆ ಪುನರುಜ್ಜೀವನ ಕಾಮಗಾರಿ ಸೇರಿದಂತೆ ಅಂದಾಜು ₹೧೩.೪೯ ಕೋಟಿಯ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಕಾಮಗಾರಿ ಆಗಿದಿದ್ದಲ್ಲಿ ಹೇಳಲಿ. ಕೇವಲ ವಾಟ್ಸ್ಆ್ಯಪ್, ಫೇಸ್ಬುಕ್ನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದಲ್ಲ. ಕುದ್ರಗಿಗೆ ಈಗ ತೂಗುಸೇತುವೆ ಇದೆ. ಆದರೆ ಇಲ್ಲಿ ಶಾಶ್ವತ ಸೇತುವೆ ಅವಶ್ಯಕತೆ ಇದೆ. ಅದನ್ನು ಮಂಜೂರು ಮಾಡಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಶಾಲೆ, ಅಂಗನವಾಡಿ, ಶೌಚಗೃಹಗಳಿಗೆ ಯಾವುದೇ ಕೊರತೆ ಆಗಬಾರದೆಂದು ನಿರ್ಧರಿಸಿದ್ದೇನೆ ಎಂದರು. ಸಚಿವರನ್ನು ಕುದ್ರಗಿ ಕಾಂಗ್ರೆಸ್ ಘಟಕದ ವತಿಯಿಂದ ಹಾಗೂ ಸಾರ್ವಜನಿಕರು ಸನ್ಮಾನಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುದ್ರಗಿ ಗ್ರಾಪಂ. ಮಾಜಿ ಅಧ್ಯಕ್ಷ ಫೈಸಲ್ ಮಸ್ತಾನ್ ಭಾವಾಪಕಿ ಮಾತನಾಡಿ, ದಾಸಗೋಡಿನ ನೂರಾರು ಕುಟುಂಬಕ್ಕೆ ರಸ್ತೆ ಸಂಪರ್ಕ ಇಲ್ಲಾಗಿತ್ತು. ಸಚಿವರು ರಸ್ತೆ ಮಂಜೂರು ಮಾಡಿಸಿದ್ದಾರೆ. ಏತ ನೀರಾವರಿ ಯೋಜನೆಗೆ ಗುದ್ದಲಿಪೂಜೆ ನಡೆಸಿದ್ದಾರೆ. ಈ ಮೂಲಕ ಗ್ರಾಮಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ತಾಪಂ ಮಾಜಿ ಅಧ್ಯಕ್ಷ ಉಲ್ಲಾಸ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ರೈತ ಚಂದ್ರಕಾಂತ ಶಿವಪ್ಪ ನಾಯ್ಕ ಮಾತನಾಡಿದರು.ಗ್ರಾಪಂ ಮಾಜಿ ಸದಸ್ಯರಾದ ಅಬ್ದುಲ್ ರೆಹಮಾನ, ಸತ್ತಾರ್, ಕೇಶವ ನಾಯ್ಕ, ಮಂಗಲಾ ನಾಯ್ಕ, ಫಿಲೋಮಿನಾ, ಆನಂದ ನಾಯ್ಕ, ಉದಯ ಬಾಬು ನಾಯ್ಕ, ರಾಘವೇಂದ್ರ ನಾಯ್ಕ, ರಾಜೇಶ ನಾಯ್ಕ, ಉಷಾ ನಾಯ್ಕ, ಎಸ್.ಎಂ. ನಾಯ್ಕ ಇತರರಿದ್ದರು. ಎಂ.ಎಸ್. ನಾಯ್ಕ ಸ್ವಾಗತಿಸಿದರು. ನೀಲಂ ನರೋನ್ಹಾ ವಂದಿಸಿದರು. ಲಕ್ಷ್ಮೀಕಾಂತ ಗೌಡ ನಿರ್ವಹಿಸಿದರು.