ಸಾರಾಂಶ
-ಚಿತ್ರದುರ್ಗ ಜಿಲ್ಲೆ ಗೋನೂರು ಗ್ರಾಮದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ
------ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಅಸಮರ್ಪಕ ಘನತ್ಯಾಜ್ಯ ವಸ್ತುಗಳ ವಿಲೇವಾರಿ, ಅಸುರಕ್ಷಿತ ನೀರು ಶೇಖರಣಿ, ಅನಾರೋಗ್ಯಕರ ಪರಿಸರದಿಂದ ಸೊಳ್ಳೆಗಳ ಉತ್ಪತಿ ಜಾಸ್ತಿಯಾಗಿ ಡೆಂಘೀ, ಚಿಕೂನ್ ಗುನ್ಯಾ ದತಂಹ ಮಾರಕ ಕೀಟಜನ್ಯ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಮಾರಕ ರೋಗಗಳನ್ನು ನಿಯಂತ್ರಿಸಲು ಸೊಳ್ಳೆಗಳ ನಿಯಂತ್ರಣ ಅಗತ್ಯ ಎಂದು ಬೆಳಗಟ್ಟ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಿಳಿಸಿದರು.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗಟ್ಟದ ವತಿಯಿಂದ ಚಿತ್ರದುರ್ಗ ತಾಲೂಕಿನ ಗೋನೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ತ್ರೀವ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಈ ವರ್ಷ ರಾಜ್ಯದಲ್ಲಿ ಬರೋಬ್ಬರಿ ಡೆಂಘೀ ಪ್ರಕರಣಗಳು ಏಳು ಸಾವಿರದ ಗಡಿ ದಾಟಿವೆ. ಮುಂಜಾಗ್ರತಾ ಕ್ರಮಗಳಾಗಿ, ಎಲ್ಲಾ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟ್ಯೆರ್, ಎಳೆ ನೀರಿನ ಚಿಪ್ಪು, ಒಡೆದ ಪ್ಲಾಸಿಕ್ ಬಾಟಲಿ, ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿ ಕೊಳ್ಳುವುದರಿಂದ ಡೆಂಘೀ ದಂತಹ ಮಾರಕ ರೋಗಗಳನ್ನು ನಿಯಂತ್ರಣ ಮಾಡಬಹುದು ಎಂದರು.ಗ್ರಾ.ಪಂ ಅಧ್ಯಕ್ಷೆ ಗುಂಡಮ್ಮ ಮಾತನಾಡಿ, ಗ್ರಾ.ಪಂ. ವ್ಯಾಪಿಯ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಮುನ್ನಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಯೋಗ ಗುರು ರವಿ ಕೆ.ಅಂಬೇಕರ್ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಯೋಗಭ್ಯಾಸ ಕ್ರಮಗಳನ್ನು ತಿಳಿಸಿದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಒಕ್ಕೂಟದ ಅಧ್ಯಕ್ಷೆ ಅಂಜಿನಮ್ಮ, ಪುಟ್ಟರಂಗ ನಾಯಕ, ಸದಸ್ಯರಾದ ಸುಧಾ, ನಿರ್ಮಲ, ರಾಧ, ಅನೋಡ್ ಸಂಸ್ಥೆಯ ಮಧು, ಲಿಂಗದೇವರು, ದೀಪಾ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
---------------ಪೋಟೋ: ಚಿತ್ರದುರ್ಗ ತಾಲೂಕಿನ ಗೋನೂರು ಗ್ರಾ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡೆಂಘೀ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಕರಪತ್ರಗಳ ಬಿಡುಗಡೆ ಮಾಡಲಾಯಿತು.
------ಪೋಟೋ: 15 ಸಿಟಿಡಿ1
--