ಅಡ್ಡೂರು ಸೇತುವೆ ಅಡಿ ಅಕ್ರಮ ಮರಳುಗಾರಿಕೆ ನಿಲ್ಲಿಸಿ: ಭರತ್ ಶೆಟ್ಟಿ

| Published : Aug 23 2024, 01:05 AM IST

ಸಾರಾಂಶ

ಅಡ್ಡೂರು ಬಳಿ ಹೊಸ ಸೇತುವೆ ಆದಷ್ಟು ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಿ ತಕ್ಷಣ ಕೆಲಸ ಆರಂಭವಾಗಲಿ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪೊಳಲಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಅಡ್ಡೂರು ಸೇತುವೆ ಶಿಥಿಲಗೊಳ್ಳಲು ಸೇತುವೆ ಅಡಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯೇ ಕಾರಣ. ಜಿಲ್ಲಾಡಲಿತ ಇಲ್ಲಿನ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ ಕೋರ್ಟ್‌ ಮೊರೆ ಹೋಗುವುದಾಗಿ ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆ ಶಿಥಿಲವಾಗಿ ಘನ ವಾಹನಗಳನ್ನು ನಿಷೇಧಿಸಿರುವುದು ಮರಳು ದಂಧೆಕೋರರಿಗೆ ವರವಾಗಿ ಪರಿಣಮಿಸುತ್ತಿದೆ. ಇಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು.ಅಡ್ಡೂರು ಸೇತುವೆ ತಳ ಭಾಗದಲ್ಲಿಯೇ ನಡೆಯುತ್ತಿರುವ ಮರಳುಗಾರಿಕೆ ಮಾಫಿಯಾಕ್ಕೆ ರಕ್ಷಣೆ ನೀಡುತ್ತಿರುವವರು ಯಾರು ಎಂಬುದು ಬಯಲಾಗಬೇಕು. ಸೇತುವೆಯಡಿ ಮರಳುಗಾರಿಕೆ ನಿಲ್ಲದಿದ್ದರೆ ಸೇತುವೆಗೂ ಅಪಾಯ ತಪ್ಪಿದ್ದಲ್ಲ. ಇಲ್ಲಿ ಮಾತ್ರವಲ್ಲ ಯಾವೊಂದು ಸೇತುವೆಯ 100 ಮೀ. ವ್ಯಾಪ್ತಿಯೊಳಗೆ ಮರಳುಗಾರಿಕೆ ನಡೆಸಬಾರದು. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.ಅಡ್ಡೂರು ಬಳಿ ಹೊಸ ಸೇತುವೆ ಆದಷ್ಟು ಶೀಘ್ರ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಿ ತಕ್ಷಣ ಕೆಲಸ ಆರಂಭವಾಗಲಿ ಎಂದರು.ಬಿಜೆಪಿ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್‌ ಕೊಠಾರಿ, ಪ್ರಮುಖರಾದ ಸಂದೀಪ್‌ ಪಚ್ಚನಾಡಿ, ಭರತ್‌ ರಾಜ್‌ ಕೃಷ್ಣಾಪುರ, ಶ್ರವಣ್‌ ಶೆಟ್ಟಿ, ಆಶ್ರಿತ್‌ ನೋಂಡಾ ಇದ್ದರು.