ನಡೆಯದ ಕಾಮಗಾರಿಗೆ ಕೋಟ್ಯಂತರ ರು. ಡ್ರಾಗೆ ತಂತ್ರ

| Published : Mar 10 2025, 12:16 AM IST

ಸಾರಾಂಶ

ಗಿರಿಜನ ಕಾಲೋನಿಗಳಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಕಾಮಗಾರಿ ನಡೆಸದೆ 2019 ರಿಂದ 2 ವರ್ಷಗಳ ಹಿಂದಿನ ಬಿಲ್ ಪಾವತಿಗಾಗಿ ಮಧ್ಯವರ್ತಿಯೊಬ್ಬ ಕೊಳ್ಳೇಗಾಲ ಶಾಸಕರಿಂದ ಮನವಿ ಪತ್ರ ನೀಡುವಂತೆ ಕೋರಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು ಈ ಬೆಳವಣಿಗೆ ನಾನಾ ಶಂಕೆಗೆ ಆಸ್ಪದ ಮಾಡಿಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಗಿರಿಜನ ಕಾಲೋನಿಗಳಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಕಾಮಗಾರಿ ನಡೆಸದೆ 2019 ರಿಂದ 2 ವರ್ಷಗಳ ಹಿಂದಿನ ಬಿಲ್ ಪಾವತಿಗಾಗಿ ಮಧ್ಯವರ್ತಿಯೊಬ್ಬ ಕೊಳ್ಳೇಗಾಲ ಶಾಸಕರಿಂದ ಮನವಿ ಪತ್ರ ನೀಡುವಂತೆ ಕೋರಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು ಈ ಬೆಳವಣಿಗೆ ನಾನಾ ಶಂಕೆಗೆ ಆಸ್ಪದ ಮಾಡಿಕೊಟ್ಟಿದೆ. ಮಧ್ಯವರ್ತಿಯೊಬ್ಬ ಗಿರಿಜನ ಕಾಲೋನಿಗಳಲ್ಲಿ 2019ರಿಂದ ಎರಡು ವರ್ಷಗಳಲ್ಲಿ ಕಾಮಗಾರಿಯ ಅನುದಾನ ಬಿಡುಗಡೆಗೊಳಿಸುವಂತೆ ಕೊಳ್ಳೇಗಾಲ ಶಾಸಕ ಎ.ಆರ್ .ಕೃಷ್ಣಮೂರ್ತಿ ಅವರಿಂದ ಪತ್ರ ನೀಡುವಂತೆ ಅವರ ಆಪ್ತ ಸಹಾಯಕ ಚೇತನ್ ಬಳಿ ಕೋರಿದ್ದಾರೆ. ಚೇತನ್ ಶಾಸಕರಿಗೆ ಈ ವಿಚಾರ ತಿಳಿಸಿದ್ದು ಶಾಸಕರು ಎಚ್ಚರಗೊಂಡಿದ್ದಾರೆ. ತಕ್ಷಣ ಸಂಬಂಧಪಟ್ಟ ಗಿರಿಜನ ಕಲ್ಯಾಣಾಧಿಕಾರಿಗಳಿಗೆ ಕರೆ ಮಾಡಿ ಯಾವ ಕಾಮಗಾರಿಗೆ ಬಿಲ್ ಮಾಡಿಸಲು ಪತ್ರ ನೀಡಬೇಕು? 2019ರಲ್ಲಿನ 2- 3 ವರ್ಷದಲ್ಲಿನ ಕಾಮಗಾರಿಗೂ ನಿಮಗೂ ಏನು ಸಂಬಂಧ, ಈಗ ತಾವು ವರ್ಗವಾಗಿ ಬಂದಿದ್ದಿರಿ, ಇದೇನು ಈ ಬಗ್ಗೆ ವಿವರಣೆ ನೀಡಿ, ಕಾಮಗಾರಿ ಸಮರ್ಪಕ ರೀತಿ ಆಗಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಿರಿ? ಎಂದು ಪ್ರಶ್ನಿಸುತ್ತಿದ್ದಾರೆ.

ಆಗ ಅಧಿಕಾರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೆ ಚಾ.ನಗರ ಜಿಲ್ಲಾಧಿಕಾರಿಯಾಗಿದ್ದ ಅಧಿಕಾರಿಯೊಬ್ಬರ ಸಹಾಯಕರಾಗಿ ಕೆಲಸ ಮಾಡುತ್ತಿರುವವರು ಬಿಲ್ ಕಳುಹಿಸುವಂತೆ ಹೇಳಿದರು. ಅದರಂತೆ ನಾನು ಮಾಡಿದ್ದೇನೆ, ಈ ಸಂಬಂಧ ಪರಿಶೀಲಿಸುವೆ, ಬಿಲ್ ಸ್ಥಗಿತಗೊಳಿಸುವ ಎಂದು ತಡವರಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶಾಸಕರು ಯಾವುದೆ ಕಾರಣಕ್ಕೂ ಇಂತಹ ಕಾಮಗಾರಿಗೆ ಪರಿಶೀಲಿಸದೆ ಬಿಲ್ ಮಾಡಬಾರದು, ಇದರಲ್ಲಿ ಲೋಪವಾಗಿರಬಹುದು, ನಾನು ಸಹಾ ಪರಿಶೀಲನೆಗೆ ಬರುವೆ, ಅಲ್ಲಿ ತನಕ ಬಿಲ್ ಪಾಸ್ ಆಗಕೂಡದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಾರ್ಚ ಹಿನ್ನೆಲೆ ಈ ಕರಾಮತ್ತು?:ಕಾಮಗಾರಿ ನಡೆಸದೆ ತರಾತುರಿಯಲ್ಲಿ ಬಿಲ್ ಮಾಡಿಕೊಳ್ಳುವ ಅನೇಕ ಉದಾಹರಣೆಗಳು, ಜ್ವಲಂತ ಸಾಕ್ಷಿಗಳು ಮಾರ್ಚ್‌ ತಿಂಗಳಲ್ಲಿ ಸಾಕಷ್ಟಿವೆ. ಕಾಮಗಾರಿ ಪ್ರಾರಂಭವಾಗದಿದ್ದರೂ, ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸಹಾ ಹಿರಿಯ ಅಧಿಕಾರಿಗಳು ಪರಿಶೀಲಿಸದೆ ಬಿಲ್ ಪಾವತಿಗೆ ಮುಂದಾಗಿರುವ ಅನೇಕ ನಿದರ್ಶನಗಳಿದ್ದು ಇನ್ನಾದರೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷ್ಯ ಬದಿಗೊತ್ತಿ ಈ ಸಂಬಂಧ ಕ್ರಮ ಕೈಗೊಳ್ಳಬೇಕಿದೆ.

ಪರಿಶೀಲಿಸಿದ ಬಳಿಕ ಬಿಲ್ ನೀಡಲು ಸೂಚಿಸಿರುವೆ: ಶಾಸಕ ಕೃಷ್ಣಮೂರ್ತಿ: ಈ ಹಿಂದೆ ನಾನು ಶಾಸಕನಾಗುವ ಮುನ್ನ ನಡೆದಿದೆ ಎಂದು ಕೆಲ ಕಾಮಗಾರಿಗಳಿಗೆ ಬಿಲ್ ಪಾವತಿಸುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ನೀಡುವಂತೆ ನನ್ನ ಆಪ್ತ ಸಹಾಯಕ ಚೇತನ್ ಬಳಿ ಮಧ್ಯವರ್ತಿಯೊಬ್ಬರು ಇತ್ತೀಚೆಗೆ ಬಂದಿದ್ದರು. ಈ ವಿಚಾರ ತಿಳಿದ ನನಗೆ ನಾನು ಶಾಸಕನಾಗಿರಲಿಲ್ಲ, ನಾನೇಕೆ ಪತ್ರ ನೀಡಬೇಕು ಎಂದು ಅನುಮಾನಗೊಂಡು ಜಿಲ್ಲಾ ಗಿರಿಜನ ಕಲ್ಯಾಣಾಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದೆ. ಹಿರಿಯ ಅಧಿಕಾರಿಯ ಸಹಾಯಕರೊಬ್ಬರು ನೀವು ಬಿಲ್ ನಮೂದಿಸಿ ಕಳುಹಿಸಿ ನಾವು ಬಿಲ್ ಪಾಸ್ ಆಗುವಂತೆ ಕ್ರಮ ವಹಿಸುತ್ತೇವೆ ಎಂದರು. ಹಾಗಾಗಿ ಕಾಮಗಾರಿ ಕುರಿತು ಬಿಲ್ ತಯಾರಿಸಲಾಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ, ಬೇಕಿದ್ದರೆ ಬಿಲ್ ತಡೆ ಹಿಡಿಯುವೆ ಅಂದಿದ್ದಾರೆ.

ನಾನು ಅನುಮಾನಗೊಂಡು ಕಾಮಗಾರಿಗಳ ಪರಿಶೀಲಿಸುವತನಕ ಬಿಲ್ ನೀಡಕೂಡದು ಎಂದು ಎಚ್ಚರಿಸಿದ್ದೆನೆ. ಗಿರಿಜನ ಕಲ್ಯಾಣಾಧಿಕಾರಿಗಳಿಗೆ ಪೋನ್ ಮಾಡಿದ ಬಳಿಕ ನಮ್ಮ ಬಳಿ ಬಂದಿದ್ದ ಮಧ್ಯವರ್ತಿಯೂ ಸಹಾ ನಾಪತ್ತೆಯಾಗಿದ್ದಾನೆ. ಮಾಡಿದ ಕಾಮಗಾರಿಗಳಿಗೆ ಸರ್ಕಾರ ಬಿಲ್ ನೀಡಲು ಅನುದಾನದ ಕೊರತೆ ಎದುರಿಸುತ್ತಿದೆ. ನಡೆಯದೆ ಕಾಮಗಾರಿಗಳಿಗೆ ಬಿಲ್ ನೀಡಿದರೆ ನಡೆದ ಕಾಮಗಾರಿಗಳ ಗತಿ ಏನು? ಇಂತಹ ಬೆಳವಣಿಗೆ ಸರಿಯಲ್ಲ ಎಂದರು.

ನಾನು ಕರೆ ಮಾಡುತ್ತಿದ್ದಂತೆ ಗಿರಿಜನ ಕಲ್ಯಾಣಾಧಿಕಾರಿಗಳು ತಡವರಿಸಿದ್ದಾರೆ, ಅವರು ಕಾಮಗಾರಿ ಪರಿಶೀಲಿಸದೆ ಬಿಲ್ ಪಾವತಿಗೆ ಸರ್ಕಾರಕ್ಕೆ ಕಳುಹಿಸಿರುವ ಬೆಳವಣಿಗೆ ಸರಿಯಲ್ಲ, ಈ ಸಂಬಂಧ ಪರಿಶೀಲನೆ ನಡೆಯಬೇಕಿದೆ. ನಡೆಯದ ಕಾಮಗಾರಿಗೆ ಬಿಲ್ ನೀಡುವುದು ಅಕ್ಷಮ್ಯ ಅಪರಾಧ ಎಂದು ಶಾಸಕ ಕೃಷ್ಣಮೂರ್ತಿ ಹೇಳಿದರು.