ಲಕ್ಷ್ಮೇಶ್ವರ: ಬೀದಿಬದಿ ವ್ಯಾಪಾರಸ್ಥರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿ ನಲ್ಮ್ ಯೋಜನೆಯ ಸಮುದಾಯ ಸಂಘಟನಾ ಅಧಿಕಾರಿ ಹಾಗೂ ಟಿವಿ ಕಾರ್ಯದರ್ಶಿ ಶೋಭಾ ಬೆಳ್ಳಿಕೊಪ್ಪ ತಿಳಿಸಿದರು.

ಗುರುವಾರ ಪಟ್ಟಣದ ಪುರಸಭೆ ಆವರಣದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಉಚಿತ ಅರೋಗ್ಯ ಶಿಬಿರ ಹಾಗೂ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್(ಪಿಎಂ- ಎಸ್‌ವೈಎಂ) ಯೋಜನೆಯ ಅಸಂಘಟಿತ ಕಾರ್ಮಿಕರ ವಿಶೇಷ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.ಬೀದಿಬದಿ ವ್ಯಾಪಾರಸ್ಥರು ಅರೋಗ್ಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಉಚಿತ ಅರೋಗ್ಯ ಶಿಬಿರದಲ್ಲಿ ಭಾಗಿಯಾಗಬೇಕು. ಅಸಂಘಟಿತ ಕಾರ್ಮಿಕರಲ್ಲಿ ಬರುವ ಬೀದಿಬದಿ ವ್ಯಾಪಾರಸ್ಥರಿಗೆ ಕಾರ್ಮಿಕ ಇಲಾಖೆಯಿಂದ ಅನೇಕ ಯೋಜನೆಗಳಿವೆ ಎಂದರು.

ಕಾರ್ಮಿಕರ ಇಲಾಖೆಯ ಸಿಬ್ಬಂದಿ ಎಂ.ಎ. ಸಿದ್ದಿ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಕಾರ್ಮಿಕರ ಇಲಾಖೆಯಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಇದ್ದು, 18ರಿಂದ 40 ವರ್ಷದೊಳಗಿನವರು ಇದರಲ್ಲಿ ನೋಂದಣಿ ಮಾಡಿಸಬೇಕು. ಜನವರಿ 15ರಿಂದ ಮಾರ್ಚ್ 15ರವರೆಗೂ ಈ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಸಂಘಟಿತ ಕಾರ್ಮಿಕರಲ್ಲಿ ಬರುವ ಕಾರ್ಮಿಕರು ಪ್ರತಿಯೊಬ್ಬರು ಈ ಯೋಜನೆ ಲಾಭ ಪಡೆದುಕೊಳ್ಳಬೇಕು. ಮಾಸಿಕ ಆದಾಯ ₹15 ಸಾವಿರಕ್ಕಿಂತ ಕಡಿಮೆ, ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಎನ್‌ಪಿಎಸ್ ಯೋಜನೆ ವ್ಯಾಪ್ತಿಗೆ ಒಳಪಟ್ಟಿರಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ ಸಂಖ್ಯೆ ಹೊಂದಿದವರು ಸದುಪಯೋಗ ಪಡೆದುಕೊಳ್ಳಬೇಕು. 60 ವರ್ಷ ನಂತರ ಪಿಂಚಣಿ ಪಡೆದುಕೊಳ್ಳಿ ಎಂದರು.

ವೈದ್ಯ ಡಾ. ಮಂಜುನಾಥ ಮರೀಗೌಡ್ರ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ರಸ್ತೆಬದಿ ಉದ್ಯೋಗ ಮಾಡುವುದರಿಂದ ಅತಿಯಾದ ಬಿಸಿಲು, ಧೂಳು ಬರುವುದರಿಂದ ಅರೋಗ್ಯ ಹದಗೆಡುವ ಲಕ್ಷಣ ಇರುವುದರಿಂದ, ಅರೋಗ್ಯ ಕಡೆ ಹೆಚ್ಚಿನ ಗಮನ ಕೊಡಬೇಕು. ಅರೋಗ್ಯ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಉಚಿತ ಅರೋಗ್ಯ ತಪಾಸಣೆ ಇದ್ದಾಗ ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹಿರಿಯ ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ, ನೇತ್ರತಜ್ಞ ಡಾ. ಪ್ರಭಾವಿ ಭಟ, ಶುಶ್ರೂಷಾಧಿಕಾರಿ ಬಸವರಾಜ ಕರ್ಕಿಕಟ್ಟಿ, ಎಸ್‌ಕೆಡಿಆರ್‌ಡಿಪಿ ಸಚಿನ ಹುಗ್ಗಿ, ನೇತ್ರಾ ಹೊಸಮನಿ, ಪೌರಕಾರ್ಮಿಕ ಮುಖಂಡ ಹನುಮಂತಪ್ಪ ನಂದೆಣ್ಣವರ, ಶಿವಲಿಂಗಯ್ಯ ಹೊತಗಿಮಠ, ಸಿಆರ್‌ಪಿ ಲಕ್ಷ್ಮಿ ಓದು, ಇಂದ್ರಾ ಸವಣೂರ, ಮೊಬೈಲಿಟಿ ಸೂಪರವೈಜರ್‌ ಶಿಲ್ಪಾ ಹೊತಗಿಮಠ, ಮಧು ಸಾತಪುತೆ, ರೇಣುಕಾ ಬನ್ನಿ, ಮಂಜುಳಾ ಕುಂಬಾರ, ಪ್ರಿಯಾಂಕಾ ವಗ್ಗಣ್ಣವರ ಇದ್ದರು. ಹನುಮಂತಪ್ಪ ನಂದೆಣ್ಣವರ ನಿರೂಪಿಸಿದರು.