ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ನಾಡು, ನುಡಿ, ಸಂಸ್ಕೃತಿ, ಆಚಾರ, ವಿಚಾರ, ಜಾನಪದ ಸಂಪ್ರದಾಯಗಳನ್ನು ಬಿಂಬಿಸುವ ಕಲೆಗಳನ್ನು ಜೀವಂತವಾಗಿ ಉಳಿಸಲು ಯುವ ಸಮೂಹವನ್ನು ಸದೃಢಗೊಳಿಸುವುದು ಅಗತ್ಯವಿದೆ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ ಮಾಚಯ್ಯ ಅವರು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಸಹಯೋಗದಲ್ಲಿಂದು ಹಾಸನಾಂಬೆ ಕಲಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹುದೊಡ್ಡ ಮಾನವ ಸಂಪನ್ಮೂಲ ಹೊಂದಿರುವ ನಮ್ಮ ದೇಶದಲ್ಲಿ ಶೇ.67ರಷ್ಟು 40 ವರ್ಷದೊಳಗಿನ ಯುವ ಜನತೆ ಹೊಂದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ನಮ್ಮ ದೇಶ ಪ್ರಪಂಚದ ನಾನಾ ರಾಷ್ಟ್ರಗಳಿಗೆ ಮಾನವ ಸಂಪನ್ಮೂಲ ರಪ್ತು ಮಾಡುವ ಸ್ಥಿತಿಯಲ್ಲಿರುವುದು ಸಂತೋಷ ತರುತ್ತದೆ. ಭಾರತೀಯರು ಎಲ್ಲಾ ರಂಗಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ, ಯುವ ಜನತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಜ್ವಲಿಸಿ ಎಂದು ಶುಭ ಹಾರೈಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್.ಎಲ್.ಮಲ್ಲೇಶ್ ಗೌಡ ಮಾತನಾಡಿ, ಯುವ ಜನತೆಯ ಮೂಲಕ ದೇಶವನ್ನು ಎತ್ತರದ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೇವೆ, ಈ ನಿಟ್ಟಿನಲ್ಲಿ ಯುವ ಜನತೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಭಾರತ ವಿಶ್ವವನ್ನೇ ಆಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಜನತೆ ತಮ್ಮಲ್ಲಿರುವ ಪ್ರತಿಭೆಯನ್ನು ಸಕಾರಾತ್ಮಕವಾಗಿ ನಿರ್ದಿಷ್ಟ ಮಾರ್ಗದಲ್ಲಿ ವಿನಿಯೋಗಿಸಿದರೆ ವಿಶ್ವ ಮಟ್ಟದಲ್ಲಿ ಬೆಳಗಬಹುದು. ಯುವ ಜನತೆ ಅಮುಲ್ಯವಾದ ಸಮಯವನ್ನು ಅನಗತ್ಯವಾಗಿ ಟಿವಿ ವೀಕ್ಷಣೆ, ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಾ ತಮ್ಮಲ್ಲಿರುವ ಪ್ರತಿಭೆ ವ್ಯರ್ಥವಾಗುವಂತೆ ಮಾಡಿಕೊಳ್ಳುತ್ತಿದ್ದಾರೆ, ಭವಿಷ್ಯದ ಭಾರತದ ಬಗ್ಗೆ ಆತಂಕ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ತಮ್ಮನ್ನು ಗಟ್ಟಿಗೊಳಿಸಿಗೊಂಡು ದೇಶ ಕಟ್ಟಲು ಮುಂದಾಗಬೇಕು ಎಂದರಲ್ಲದೆ, ತಮ್ಮ ಕುಟುಂಬ ಮತ್ತು ಗ್ರಾಮವನ್ನು ಪ್ರೀತಿಸುವುದರ ಮೂಲಕ ದೇಶ ಪ್ರೀತಿ ಹಂಚುವ ಕಡೆಗೆ ಸಾಗಲಿ ಎಂದರು.
ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ ಮಾತನಾಡಿ, ಯುವ ಜನತೆ ಜಾನಪದ ಕಲೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಲಕ್ಷ್ಮೀಕಾಂತ್, ರಾಷ್ಟ್ರಪ್ರಶಸ್ತಿ ವಿಜೇತರಾದ ಬಿ.ಟಿ ಮಾನವ, ಹಿರಿಯ ಕಲಾವಿದರಾದ ಗ್ಯಾರಂಟಿ ರಾಮಣ್ಣ, ಶೇಖರಪ್ಪ, ಸಮಾಜ ಸೇವಕರಾದ ಕಟ್ಟಾಯ ಶಿವಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))