ಸಾರಾಂಶ
ನಗರದ ಆಡಳಿತ ಸೌಧದಲ್ಲಿ ಬೀಡಾಡಿ ದನಗಳ ನಿಯಂತ್ರಣ ಚರ್ಚೆ ಸಭೆಯಲ್ಲಿ ನಿರ್ಧಾರ
ಕನ್ನಡಪ್ರಭ ವಾರ್ತೆ ಶಿರಸಿಶಿರಸಿ ನಗರ ವ್ಯಾಪ್ತಿಯಲ್ಲಿನ ಬೀಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆ ನೇತೃತ್ವದಲ್ಲಿ ಪಶು ಸಂಗೋಪನಾ, ಪೊಲೀಸ್ ಹಾಗೂ ಇತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸಮಿತಿ ರಚಿಸಿ ಜಾನುವಾರುಗಳನ್ನು ಮನೆಯಲ್ಲಿಯೇ ಸಾಕುವಂತೆ ಹೇಳುವುದು. 10 ದಿನಗಳ ನಂತರ ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕುರಿತು ಸಂಸದ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಜಂಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನಗರದ ಆಡಳಿತ ಸೌಧದಲ್ಲಿ ಮಂಗಳವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಜರುಗಿದ ಬೀಡಾಡಿ ದನಗಳ ನಿಯಂತ್ರಣ ಚರ್ಚೆ ಸಭೆಯಲ್ಲಿ ಅಧಿಕಾರಿಗಳ ಹಾಗೂ ಸಂಘ-ಸಂಸ್ಥೆ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬೀಡಾಡಿ ದನಗಳಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿದ್ದು, ಅವುಗಳಿಂದ ಉಂಟಾಗುತ್ತಿರುವ ತೊಂದೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ರಾತ್ರಿ ವೇಳೆ ಅಪಘಾತ ಉಂಟಾಗಿ ಸಾವು ನೋವು ಹೆಚ್ಚಾಗುತ್ತಿದೆ. ಅದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ಹೆಚ್ಚು ದಾಖಲಾಗುತ್ತಿದೆ. ಸಾಮಾಜಿಕವಾಗಿಯೂ ಸಮಸ್ಯೆ ನಿರ್ಮಾಣವಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ದೊರಕಿಸಬೇಕಿದೆ. ಬೀಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆ ಹಾಗೂ ಪಶು ಸಂಗೋಪನಾ ಇಲಾಖೆಯ ಮೂಲಕವೇ ಕ್ರಮ ವಹಿಸಬೇಕಾಗಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಬೀಡಾಡಿ ದನಗಳನ್ನು ಮಾನವೀಯ ನೆಲೆಯಲ್ಲಿ ನಿಯಂತ್ರಿಸುವುದು ಅಗತ್ಯವಿದೆ. ಸರ್ಕಾರದ ವತಿಯಿಂದ ಅಜ್ಜೀಬಳದಲ್ಲಿ 6 ಎಕರೆ ಜಾಗದಲ್ಲಿ ನಿರ್ಮಿಸಲಾದ ತಾಲೂಕಾ ಮಟ್ಟದ ಗೋಶಾಲೆಗೆ ಅಗತ್ಯವಿರುವ ಕಂಪೌಂಡ್, ನೀರಿನ ವ್ಯವಸ್ಥೆಗೆ ಅನುದಾನ ನೀಡುತ್ತೇನೆ. ನಗರಸಭೆಯಿಂದ ನಿರ್ಮಿಸಲಾದ ಕೊಂಡವಾಡಿಯಲ್ಲಿರುವ ಅಪಘಾತ ಉಂಟಾದ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ಪೊಲೀಸ್, ನಗರಸಭೆ ಹಾಗೂ ಪಶು ಸಂಗೋಪನೆ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಬೀಡಾಡಿ ದನಗಳನ್ನು ಹಿಡಿದು ಕೊಂಡವಾಡಿ 7 ದಿನ ಇಟ್ಟು ಆಮೇಲೆ ಗೋಶಾಲೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದರು.ನಗರಸಭೆ ಪರಿಸರ ಅಭಿಯಂತರ ಶಿವರಾಜ ಕೆ. ಮಾತನಾಡಿ, ಶಿರಸಿ ನಗರದಲ್ಲಿ 500 ಜಾನುವಾರುಗಳಿಗೆ ಮಾಲೀಕರಿಲ್ಲ. 320 ಮಾಲಿಕರು ಇದ್ದಾರೆ ಎಂಬ ಅಂಕಿ-ಅಂಶವಿದೆ. ರಾಘವೇಂದ್ರ ಸರ್ಕಲ್ ಬಳಿಯ ಕೊಂಡವಾಡಿಯಲ್ಲಿ 20 ಜಾನುವಾರು ಇಡಬಹುದು ಎಂದರು.
ಪಶು ಸಂಗೋಪನಾ ಇಲಾಖೆಯ ಸಹಾಕ ನಿರ್ದೇಶಕ ಡಾ. ದಿನೇಶ ಸಭೆಗೆ ಮಾಹಿತಿ ನೀಡಿ, ಅಜ್ಜೀಬಳ ಗೋಶಾಲೆ ನಿರ್ವಹಣೆಗೆ ಪ್ರತಿ ವರ್ಷಕ್ಕೆ ₹60ರಿಂದ 70 ಲಕ್ಷ ಖರ್ಚು ತಗುಲುತ್ತದೆ ಎಂದು ಅಂದಾಜಿಸಲಾಗಿದೆ ಎಂದಾಗ, ಪ್ರತಿಕ್ರಿಯಿಸಿದ ಶಾಸಕ ಭೀಮಣ್ಣ ನಾಯ್ಕ, ಅಜ್ಜೀಬಳ ಗೋಶಾಲೆಗೆ ತಾಪಂನಿಂದ ಅನುದಾನ ನೀಡಲು ಅವಕಾಶವಿದೆಯೇ? ಅಥವಾ ಶಾಸಕರು, ಸಂಸದರ ಅನುದಾನ ನೀಡಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ, ಮಾಹಿತಿ ನೀಡುವಂತೆ ಆದೇಶಿಸಿದರು.ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ವಕೀಲ ಸದಾನಂದ ಭಟ್ಟ ನಿಡಗೋಡ ಮಾತನಾಡಿದರು.
ಸಭೆಯಲ್ಲಿ ತಹಸೀಲ್ದಾರ ಪಟ್ಟರಾಜ ಗೌಡ, ಡಿವೈಎಸ್ಪಿ ಗೀತಾ ಪಾಟೀಲ, ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ., ಟ್ರಾಫಿಕ್ ಠಾಣೆ ಪಿಎಸ್ಐ ದೇವೇಂದ್ರ ನಾಯ್ಕ ಎಂ., ಪ್ರಮುಖರಾದ ಗಜಾನನ ಸಕಲಾತಿ, ನಂದನಸಾಗರ, ಹರೀಶ ಕರ್ಕಿ, ರವಿ ಗೌಳಿ, ಪ್ರದೀಪ ಶೆಟ್ಟಿ, ಪ್ರಸನ್ನ ಶೆಟ್ಟಿ ಮತ್ತಿತರರು ಇದ್ದರು.ನಿರ್ಣಯನಗರಸಭೆಯಿಂದ ನಗರ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವುದು. ಮನೆಯಲ್ಲಿಯೇ ಸಾಕುವಂತೆ ತಿಳಿಸುವುದು. 10 ದಿನಗಳ ನಂತರ ಅವುಗಳನ್ನು ಕೊಂಡವಾಡಿಗೆ ಸಾಗಿಸಿ, ನಿರ್ವಹಿಸುವುದು. ಸಾರ್ವಜನಿಕರ ಪ್ರಕಟಣೆ ಹೊರಡಿಸಿ ಮಾಲೀಕರು ಇದ್ದರೆ ಬಂದು ಜಾನುವಾರು ತೆಗೆದುಕೊಂಡು ಹೋಗುವಂತೆ ಪ್ರಕಟಣೆ ಹೊರಡಿಸುವುದು. ಮಾಲೀಕರು ಬಂದರೆ ಅವರಿಗೆ ದಂಡ ವಿಧಿಸಿ, ಬೀದಿ ಮೇಲೆ ದನ ಬಿಡದಂತೆ ಕರಾರುಪತ್ರ ತೆಗೆದುಕೊಳ್ಳುವುದು. ಮಾಲೀಕರಿಂದ ₹25 ದಂಡದ ಮೊತ್ತ ಹಾಗೂ ₹250ರಿಂದ 300 ನಿರ್ವಹಣಾ ವೆಚ್ಚವನ್ನು ಪಡೆಯುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))