ನೊಂದ ಮಹಿಳೆಯರ ಸಮಸ್ಯೆ ಬಗೆಹರಿಸಿ ನ್ಯಾಯದೊರಕಿಸಿ ಕೊಡಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ. ಮೇಲುಕೋಟೆಯಲ್ಲಿ ಸ್ವೀಕರಿಸಿದ ಮನವಿಗೂ ತುರ್ತಾಗಿ ನ್ಯಾಯ ಒದಗಿಸಿಕೊಡಲು ಸೂಚಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ನೊಂದ ಮಹಿಳೆಯರ ಸಮಸ್ಯೆ ಬಗೆಹರಿಸಿ ನ್ಯಾಯದೊರಕಿಸಿ ಕೊಡಲು ಶಕ್ತಿಮೀರಿ ಶ್ರಮಿಸಲಾಗುತ್ತಿದೆ. ಮೇಲುಕೋಟೆಯಲ್ಲಿ ಸ್ವೀಕರಿಸಿದ ಮನವಿಗೂ ತುರ್ತಾಗಿ ನ್ಯಾಯ ಒದಗಿಸಿಕೊಡಲು ಸೂಚಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಹೇಳಿದರು.ಸ್ಥಳೀಯ ಮಹಿಳೆಯರಿಂದ ಮನವಿ ಸ್ವೀಕರಿಸಿ ಮಾತನಾಡಿ, ಇಲ್ಲಿನ ಕೆಳಗಲಕೇರಿ ಅಂಗವಿಕಲ ವಿಶೇಷಚೇತನ ಮಹಿಳೆ ಮಾಲಾ ಮನವಿ ಮಾಡಿ, ನಾನು ವಿಧವೆ. ಹಾಸಿಗೆಯಿಂದ ಮೇಲೇಳದ ಸ್ಥಿತಿಯಲ್ಲಿ ಇರುವ ವಿಶೇಷಚೇತನ ಹೆಣ್ಣುಮಗುವನ್ನು ಸಾಕುತ್ತಿದ್ದೇನೆ ಎಂದರು.
ಗೃಹಾಧಾರಿತ ಶಿಕ್ಷಣ ಕೊಡಿಸುತ್ತಿರುವ ಮಗಳು ಯುಡಿಐಡಿ ಕಾರ್ಡ್ ಹೊಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸದ ಕಾರಣ ಅಂಗವಿಕಲರ ಮಾಶಾಸನ ಮಂಜೂರಾಗಿಲ್ಲ. ದಯವಿಟ್ಟು ಕೊಡಿಸಿ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಿ ಎಂದು ಮನವಿ ಮಾಡಿದರು.ಮತ್ತೋರ್ವ ಮಹಿಳೆ ಬಿ.ನಾಗರತ್ನ ನಾನು ವಿಧವೆ. ಮೈಷುಗರ್ ಸಕ್ಕರೆ ಕಾರ್ಖಾನೆಯಿಂದ ನೌಕರರಾದ ಮೃತ ಪತಿ ಕೆ.ಎನ್. ರಾಮಚಂದ್ರರಿಗೆ ಬರಬೇಕಾದ ಬಾಕಿಹಣ ಹಾಗೂ ಪಿಂಚಣಿ ಬಿಡುಗಡೆ ಮಾಡಲು ಹೈಕೋರ್ಟ್ ಆದೇಶ ನೀಡಿದೆಯಾದರೂ ಆಡಳಿತ ಮಂಡಳಿ ಕ್ರಮ ವಹಿಸಿಲ್ಲ. ಬಿಡುಗಡೆ ಮಾಡಿಸಿ ಕೊಟ್ಟು ಜೀವನಾಧಾರ ಕಲ್ಪಿಸಿ ಕೋರಿದರು.
ಮತ್ತೋರ್ವ ವೃದ್ಧೆ ನನ್ನ ನನ್ನ ಗಂಡನ ಹೆಸರಲ್ಲಿದ್ದ ಸ್ವಯಾರ್ಜಿತ ಆಸ್ತಿಯನ್ನು ನನಗೆ ಅನುಭೋಗವಿರುವಂತೆ ಮಾಡಿಕೊಡಿ ಎಂದು ಮನವಿ ಮಾಡಿದರುಎಲ್ಲರ ಕಷ್ಟಗಳನ್ನೂ ಕೂಲಂಕುಷವಾಗಿ ಆಲಿಸಿದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಮನವಿ ಸ್ವೀಕರಿಸಿ ಸ್ಥಳದಲ್ಲಿದ್ದ ಪಾಂಡವಪುರ ತಹಸೀಲ್ದಾರ್ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿ ಮಹಿಳೆಯರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ ಸಂಕಷ್ಟಕ್ಕೆ ಸ್ಪಂದಿಸಿ ಸರ್ಕಾರದ ಸೌಲಭ್ಯಗಳು ನೊಂದವರಿಗೆ ತಲುಪುವಂತೆ ಕ್ರಮವಹಿಸಿ ಎಂದು ಸೂಚನೆ ನೀಡಿದರು. ಅಧಿಕಾರಿಗಳು ಬಗೆಹರಿಸದಿದ್ದರೆ ಆಯೋಗಕ್ಕೆ ಮತ್ತೊಮ್ಮೆ ದೂರು ನೀಡಿ ಎಂದೂ ನೊಂದ ಮಹಿಳೆಯರಿಗೆ ಧೈರ್ಯ ತುಂಬಿದರು.
ಇದೇ ವೇಳೆ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ತೆರಳಿ ಪರಿಶೀಲಿಸಿ ವೈದ್ಯಾಧಿಕಾರಿಗಳಿಗೆ ಹಲವು ರೀತಿಯ ಸಲಹೆ ನೀಡಿದರು. ರಾತ್ರಿ ವೇಳೆ ವೈದ್ಯರನ್ನು ನಿಯೋಜಿಸಲು ಅಗತ್ಯ ಕ್ರಮ ವಹಿಸಬೇಕು ಎಂದೂ ಸೂಚನೆ ನೀಡಿದರು. ಈ ವೇಳೆ ಡಾ.ವರ್ಷ, ತಾಲೂಕು ವೈದ್ಯಾಧಿಕಾರಿ ಡಾ.ಅರವಿಂದ ಡಿಎಚ್.ಒ ಗ್ರಾಪಂ ಪಿಡಿಒ ರಾಜೇಶ್ವರ್ ಇದ್ದರು.