ಸಾರಾಂಶ
ರಾಯಚೂರು: ದೇಶದ ಮಹಾನ್ ಕ್ರಾಂತಿಕಾರಿಗಳ ಹೋರಾಟ, ತತ್ವ-ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು.
ಸ್ಥಳೀಯ ಶಹಿದ್ ಭಗತ್ಸಿಂಗ್ ವೃತ್ತದಲ್ಲಿ ಎಐಡಿಎಸ್ಒ, ಎಐಡಿವೈಒ, ಎಐಎಂಎಸ್ಎಸ್ ಸಂಘಟನೆಗಳ ಜಿಲ್ಲಾ ಸಮಿತಿಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಹ ಮಹಾನ್ ಹೋರಾಟಗಾರರ ರಾಜಿರಹಿತ, ತತ್ವ,ಸಿದ್ಧಾಂತ ಹಾಗೂ ಬದ್ಧತೆಯನ್ನು ಎಲ್ಲರು ರೂಢಿಸಿಕೊಳ್ಳಬೇಕು ಎಂದರು.ಎಐಡಿಎಸ್ಒ ಜಿಲ್ಲಾಧ್ಯಕ್ಷ ಹಯ್ಯಾಳಪ್ಪ ಮಾತನಾಡಿ, ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಎರಡು ಪಂಥಗಳಿತ್ತು. ಒಂದು ಗಾಂಧೀಜಿ ನೇತೃತ್ವದ ಕಾಂಗ್ರೆಸ್, ಇದು ರಾಜಿ, ಸಂಧಾನ ಮಾತುಕತೆಗೆ ಒತ್ತು ನೀಡಿತು. ಎಲ್ಲದರಲ್ಲಿಯೂ ರಾಜಿ ಮಾಡಿಕೊಂಡಿತು. ಇನ್ನೊಂದು ನೇತಾಜಿ ಮತ್ತು ಭಗತ್ಸಿಂಗ್ ಅವರ ನೇತೃತ್ವದ ಕ್ರಾಂತಿಕಾರಿಗಳ ಗುಂಪು. ಕ್ರಾಂತಿಕಾರಿಗಳು ಜಾತಿ ಪದ್ಧತಿ, ಕೋಮುವಾದದಂತ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿರಹಿತವಾಗಿ ಹೋರಾಟ ನಡೆಸಿದರು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಐಎಂಎಸ್ಎಸ್ ಜಿಲ್ಲಾ ಸಂಘಟಕಿ ಸರೋಜ ಅವರು ವಹಿಸಿದ್ದರು.ಕೆಎಸ್ಆರ್ಟಿಸಿ ನಿವೃತ್ತ ನೌಕರರ ರುದ್ರಯ್ಯ ಗುಣಾರಿ, ಮಹೇಂದ್ರಸಿಂಗ್, ಸಂತೋಷ, ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದ್, ಎಐಡಿಎಸ್ಒ ಉಪಾಧ್ಯಕ್ಷ ಪೀರ್ಸಾಬ್, ಕಾರ್ಮಿಕ ಮುಖಂಡ ಮಹೇಶ್ ಚೀಕಲಪರ್ವಿ, ಅಮೋಘ, ಹೇಮಂತ, ಯಲ್ಲಪ್ಪ, ಅಭಿಲಾಷ, ಮೌನೇಶ್, ಅರವಿಂದ್, ಕೋಟೆರಾಜ, ಮಧು, ವಿನೋದ ಕುಮಾರ ಹಾಗೂ ಮತ್ತಿತರಿದ್ದರು.