ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಎಲ್ಲ ವಿದ್ಯಾರ್ಥಿಗಳಿಗೂ ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ AIDSO ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಹೇಮಾವತಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಮಾತನಾಡಿದ AIDSO ಸಹ ಸಂಚಾಲಕಿ ಚೈತ್ರಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸೇರಿದಂತೆ ಹಲವು ವಿಭಾಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಮಂಜೂರಾಗಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಹಾಕಿದ್ದ ವಿದ್ಯಾರ್ಥಿವೇತನಗಳು ಇಲ್ಲಿಯವರೆಗೂ ಕೂಡ ವಿದ್ಯಾರ್ಥಿಗಳಿಗೆ ದೊರೆತಿಲ್ಲ. ಇನ್ನು ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 5,000ದಿಂದ 60,000ದವರೆಗೆ ವಿತರಿಸಲ್ಪಡುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು 1100ರಿಂದ 11,000ಕ್ಕೆ ಇಳಿಸಲಾಗಿದೆ ಎಂದರು.
ಈಗಾಗಲೇ ಎಲ್ಲಾ ಹಂತದ ಶಿಕ್ಷಣವು ವ್ಯಾಪಾರಿಕರಣಗೊಂಡು ಶುಲ್ಕಗಳು ಗಗನಕ್ಕೇರಿವೆ. ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದು ಅತ್ಯಂತ ದುಸ್ತರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರದ ಶಿಷ್ಯವೇತನವು ಸಾಕಷ್ಟು ಸಹಕಾರಿಯಾಗಿದೆ. ಈ ಶಿಷ್ಯವೇತನದಿಂದಾಗಿ ಬಡ ವಿದ್ಯಾರ್ಥಿಗಳು ಪಿಯ, ಪದವಿ ಸೇರಿದಂತೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ನಂತಹ ಉನ್ನತ ವ್ಯಾಸಂಗವನ್ನು ಕೂಡ ಪಡೆಯಬಹುದಾಗಿದೆ. ಆದರೆ ಈಗ ಭಾರೀ ಪ್ರಮಾಣದಲ್ಲಿ ಶಿಷ್ಯವೇತನದ ಮೊತ್ತವನ್ನು ಕಡಿತಗೊಳಿಸಿರುವುದು ಹಾಗೂ ವಿತರಣೆಯಲ್ಲಿ ದೀರ್ಘ ವಿಳಂಬವಾಗಿರುವುದು ಕಾರ್ಮಿಕರ ಹಾಗೂ ಬಡಮಕ್ಕಳ ಶಿಕ್ಷಣದ ಕನಸುಗಳನ್ನು ಚಿವುಟಿ ಹಾಕಿದಂತಾಗಿದೆ ಎಂದು ದೂರಿದರು.ಜನಸಾಮಾನ್ಯರಿಂದ ಸಂಗ್ರಹವಾಗಿರುವ ತೆರಿಗೆ ಹಣವನ್ನು ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರವು ವಿನಿಯೋಗಿಸಬೇಕು. ಸೆಸ್ ಹೆಸರಲ್ಲಿ ಸಂಗ್ರಹವಾಗುತ್ತಿರುವ ಹಣವು ಕಾರ್ಮಿಕ ನಿಧಿಯಲ್ಲಿ ಹೇರಳವಾಗಿ ಶೇಖರಣೆಯಾಗುತ್ತಿದೆ. ಇದು ಕಾರ್ಮಿಕರ ಬೆವರಿನ ಫಲ ಮತ್ತು ಇದನ್ನು ಸಂಪೂರ್ಣವಾಗಿ ಅವರ ಏಳಿಗೆಗೆ ಬಳಸಬೇಕು. ಘನ ಸರ್ಕಾರವು ಈ ಕುರಿತು ಗಮನ ಹರಿಸಿ ಕೂಡಲೇ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡಬೇಕು ಮತ್ತು ಕಡಿತಗೊಳಿಸಿರುವ ಕಾರ್ಮಿಕರ ಮಕ್ಕಳ ಶಿಷ್ಯವೇತನದ ಮೊತ್ತವನ್ನು ಹೆಚ್ಚಿಸಬೇಕು. ಈ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ರಾಜ್ಯ ಸರ್ಕಾರವು ನೆರವಾಗಬೇಕೆಂದು ಎಐಡಿಎಸ್ಒ ಸಮಿತಿಯು ತಮ್ಮಲ್ಲಿ ವಿನಂತಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಸಹಸಂಚಾಲಕಿ ಚೈತ್ರಾ ಕಾರ್ಯಕರ್ತರಾದ ಸುಷ್ಮಾ, ಸೌಮ್ಯ, ಶ್ಯಾಮಲಾ, ಯೋಗೇಶ್ವರಿ, ಜಯಂತ್ ವಿವಿಧ ಕಾಲೇಜಿನ ವಿದ್ಯಾರ್ಥಿಗಳಾದ ದರ್ಶನ್ , ಲುಕಿತ್ , ಶಶಾಂಕ್, ಜೀವನ್, ಪೃಥ್ವಿ ಸೇರಿದಂತೆ 50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.