ಸಾರಾಂಶ
ಗದಗ:ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗದೆ ಪುಸ್ತಕದ ದಾಸರಾಗಬೇಕು ಎಂದು ಆಂಗ್ಲೋ ಉರ್ದು ಬಾಲಕರ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಇಸ್ಮಾಯಿಲ್ ಆರಿ ಹೇಳಿದರು.
ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಆಂಗ್ಲೋ ಉರ್ದು ಬಾಲಕ ಪ್ರೌಢ ಶಾಲೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಾತಾವರಣದಲ್ಲಿರುವ ದುಶ್ಚಟ ದಾಸರಿಂದ ಇಂದಿನ ಯುವಕರು ತಮ್ಮ ಜೀವನದಲ್ಲಿಯೂ ಕೂಡ ದುಶ್ಚಟಗಳನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಿರುವುದು ವಿಪರ್ಯಾಸ. ದುಶ್ಚಟ ಬೀರುವಂತಹ ಪರಿಸ್ಥಿತಿಯಿಂದ ಹೊರ ಬಂದು ಓದು ಹವ್ಯಾಸವನ್ನೂ ರೂಢಿಸಿಕೊಳ್ಳುವುದು ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಮಾದಕವಸ್ತುಗಳಿಂದ ದೂರವಿದಷ್ಟು ಸಾಧನೆಗೆ ಅನುಕೂಲವಾಗುತ್ತದೆ ಎಂದರು. ವಿದ್ಯಾರ್ಥಿ ಜೀವನದಲ್ಲಿ ಅನೇಕ ತೊಂದರೆ, ಅಡಚಣೆಗಳ ಬರುವುದು ಸಹಜ. ಆದರೆ, ಅವುಗಳತ್ತ ಚಿತ್ತಹರಿಸದೇ ಓದುವ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಅಲ್ಲದೆ, ಪ್ರಪಂಚದಲ್ಲಿ ಸದ್ಯ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿಕೊಂಡು ನಿತ್ಯವೂ ತಂದೆ-ತಾಯಿ ಮತ್ತು ಪೋಷಕರಿಗೆ ಮೋಸ ಮಾಡುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರುವುದು ಆರೋಗ್ಯಕ್ಕೆ ಒಳ್ಳೆಯದು ಎಂದರು. ರೈಲ್ವೆ ಪಿಎಸ್ಐ ಬಿ.ಎನ್. ರಾಮಗೌಡ್ರ ಮಾತನಾಡಿ, ಮಾದಕ ವಸ್ತುಗಳ ಬಗ್ಗೆ, ರೈಲ್ವೆ ಹಳೆ ದಾಟುವ ಕುರಿತು ಜಾಗೃತಿ ಮೂಡಿಸಿದರು.
ಎಎಸ್ಐ ಆರ್.ಎನ್. ಧೂಳಿ, ಎಎಸ್ಐ ರೇಣಕಪ್ಪ, ಸಿಬ್ಬಂದಿಗಳಾದ ಸಂಜು, ರೇಶ್ಮಾ ಹಾದಿಮನಿ, ದೈಹಿಕ ಶಿಕ್ಷಕ ಎಂ.ಜಿ.ಪಟೇಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.