ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಕನ್ನಡ ನಾಡಿನ ಜನಪದ ಸಂಸ್ಕೃತಿ ಅತ್ಯುತ್ತಮವಾಗಿದೆ. ನಮ್ಮ ಹಿರಿಯರು ತೋರಿಸಿದ ವಸ್ತ್ರ ವಿನ್ಯಾಸ, ಆಹಾರ ಪದ್ಧತಿಯನ್ನು ಅನುಸರಿಸುತ್ತಾ ಆರೋಗ್ಯವಂತರಾಗಿ ಬದುಕುತ್ತಿದ್ದೇವೆ. ಹಿರಿಯರು ಆಚರಿಸುತ್ತಿದ್ದ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಅರ್ಥವಿರುತ್ತಿತ್ತು ಎಂದು ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ. ಸುರೇಶ್ ಕುಮಾರ್‌ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಇರುವ ಹರದನಹಳ್ಳಿ ಮಾದರಿ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜನಪದ ಉತ್ಸವ ಹಾಗೂ ಸಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನಾಚರಣೆ ಅಂಗವಾಗಿ ಶುಭಕೋರಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಹಿರಿಯರು ತೋರಿದ ದಾರಿಬಿಟ್ಟು ನಡೆಯುತ್ತಿರುವುದರಿಂದ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸದಾಕಾಲ ನಿಮ್ಮ ಒಳಿತನ್ನೇ ಬಯಸುವ ಅಪ್ಪ ಅಮ್ಮನ ಮಾತು ಕೇಳಿ ಚೆನ್ನಾಗಿ ವ್ಯಾಸಂಗ ಮಾಡಿ ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದರು. ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕ ಅಶೋಕ್ ಮಾತನಾಡಿ ನೀರು, ಸಗಣಿ, ಕಲ್ಲು, ಮಣ್ಣಿನಲ್ಲಿ ದೇವರನ್ನು ಕಾಣುವ ನಮ್ಮ ನಾಡಿದ ಜನಪದ ಸಂಸ್ಕೃತಿ ವಿಶ್ವಕ್ಕೇ ಮಾದರಿ. ನಮ್ಮ ಹಿರಿಯರು ನಮ್ಮ ಜೀವನಕ್ಕೆ ಅವಶ್ಯಕವಾಗಿ ಬೇಕಾಗುವ ನೀರು, ಭೂಮಿಯಲ್ಲಿ ದೇವರನ್ನು ಕಂಡಿದ್ದಾರೆ. ನಮಗೆಲ್ಲಾ ಅನ್ನ ಕೊಡುವ ಭೂಮಿ, ನಮ್ಮ ಬದುಕಿಗೆ ಅವಶ್ಯಕವಾಗಿ ಬೇಕಾಗಿರುವ ನೀರು ನಮ್ಮ ದೇವರೇ ಎನ್ನುವುದನ್ನು ಜಗತ್ತಿಗೇ ಸಾರಿದ್ದು ನಮ್ಮ ಭಾರತೀಯ ಸಂಸ್ಕೃತಿ ಎಂದು ತಿಳಿಸಿದರು.ದೇಶ ಆಧುನಿಕತೆಗೆ ತೆರೆದುಕೊಂಡಂತೆ ನಮ್ಮ ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಆಚರಿಸಲು ಮುಂದಾಗಿ ಅನೇಕ ತೊಂದರೆಗೆ ಒಳಗಾಗಿದ್ದಾರೆ. ಸೊಪ್ಪು ತರಕಾರಿ ಮುದ್ದೆ ತಿನ್ನುತ್ತಿದ್ದ ನಮ್ಮ ಹಿರಿಯರು 85ರಿಂದ ನೂರು ವರ್ಷ ಬದುಕುತ್ತಿದ್ದರು. ಇಂದು ಪಿಜ್ಜಾ, ಬರ್ಗರ್ ತಿನ್ನಿತ್ತಿರುವವರು 50 ವರ್ಷಕ್ಕಿಂತ ಮುನ್ನ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ನಮ್ಮ ಹಿರಿಯರು ತೋರಿಸಿದ ಜನಪದ ಸಂಸ್ಕೃತಿಯನ್ನು ಅನುಸರಿಸುತ್ತಾ, ನಾವು ಬೆಳೆಯಲು ಬೇಕಾದ ಅಂಶಗಳನ್ನು ಇಂಟರ್ನೆಟ್ ಮೂಲಕ ತಿಳಿದುಕೊಂಡು ಬೆಳೆಯೋಣ. ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ. ಆದ್ದರಿಂದ ನಾವು ಒಳ್ಳೆಯ ಅಂಶಗಳತ್ತ ಗಮನ ಹರಿಸೋಣ. ನಮ್ಮ ಆಹಾರ ಪದ್ದತಿ ನಮ್ಮ ಆರೋಗ್ಯ ಕಾಪಾಡುವಂತಿರಲಿ. ನಮ್ಮ ಬಟ್ಟೆಗಳು ನಮ್ಮ ಮಾನ ಕಾಪಾಡುವಂತಿರಲಿ ಎಂದರು. ಹಾಸ್ಟೆಲ್ ವಾರ್ಡನ್ ಜ್ಞಾನೇಶ್ವರಿ, ಪ್ರಾಂಶುಪಾಲ ಮಂಜುನಾಥ್ ಮಾತನಾಡಿದರು. ಪ್ರಾಧ್ಯಾಪಕ ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಮೋನಿಕಾ ಕಾರ್ಯಕ್ರಮಕ್ಕೆ ಶುಭಕೋರಿದರು. ಮೋಹನ್ ಸ್ವಾಗತಿಸಿ ಆನಂದ್ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ದೇವೇಗೌಡರ ಹುಟ್ಟುಹಬ್ಬಕ್ಕೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಶುಭಕೋರಿದರು.