- ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 27 ವಿದ್ಯಾರ್ಥಿಗಳಿಗೆ ಅಭಿನಂದನೆ
- ನಗರಸಭೆ ಮತ್ತು ಅಕ್ಕಾ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳುಕನ್ನಡಪ್ರಭ ವಾರ್ತೆ ರಾಮನಗರಹಲವು ಪ್ರಥಮಗಳ ಮೂಲಕ ಗಮನ ಸೆಳೆದಿರುವ ರಾಮನಗರ ನಗರಸಭೆ ಇದೇ ಮೊದಲ ಬಾರಿಗೆ ಅಕ್ಕಾ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ನೀಡಿದ ವೃತ್ತಿ ಪರ ಪರೀಕ್ಷೆಗಳ ತರಬೇತಿ ಪಡೆದ ಬಡ ಮಕ್ಕಳು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಸಾರ್ಥಕ ಭಾವ ಮೆರೆದರು. ಕಳೆದ ಸಾಲಿನಲ್ಲಿ ಅಯೋಜನೆಯಾಗಿದ್ದ ನೀಟ್, ಜೆಇಇ, ಮತ್ತು ಕೆ - ಸಿಇಟಿ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದು ಸಿಇಟಿ - 2026ರ ಪ್ರವೇಶ ಪರೀಕ್ಷೆಯಲ್ಲಿ 27 ಮಂದಿ ಬಡ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಿ ಗಮನ ಸೆಳೆದಿದ್ದು, ಆ ಎಲ್ಲಾ ವಿದ್ಯಾರ್ಥಿಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಸದಸ್ಯರು ಹಾಗೂ ಗಣ್ಯರು ಮೈಸೂರು ಪೇಟ ತೊಡಿಸಿ ಹಾರ ಹಾಕುವ ಜೊತೆಗೆ ಪ್ರಮಾಣ ಪತ್ರ ನೀಡಿ ಅಭಿಮಾನದಿಂದ ಸನ್ಮಾನಿಸಿದರು.ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಲಕ್ಷಾಂತರ ರುಪಾಯಿ ಖರ್ಚು ಮಾಡಿ ವೃತ್ತಿ ಪರ ಪರೀಕ್ಷೆಗಳ ತರಬೇತಿ ಪಡೆಯುವಷ್ಟು ಶಕ್ತಿ ನಮ್ಮ ಕುಟುಂಬಗಳಿಗಿಲ್ಲ. ನಾವು ಕಂಡ ಕನಸುಗಳನ್ನು ಸಾಕಾರಗೊಳಿಸಲು ನೆರವಿಗೆ ನಿಂತ ನಗರಸಭೆ , ಅಕ್ಕಾ ಅಕಾಡೆಮಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ನಾವು ಸದಾ ಕೃತಜ್ಞರಾಗಿರುತ್ತೇವೆ ಎಂದು ಧನ್ಯವಾದ ಅರ್ಪಿಸಿದರು. ಗಣ್ಯರು ಮಕ್ಕಳಿಗೆ ಭವಿಷ್ಯದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಎಂದು ಶುಭ ಹಾರೈಸಿದರು.ಉಚಿತವಾಗಿ ಉನ್ನತ ಶಿಕ್ಷಣ ದೊರಕಿಸಿ :
ಈ ವೇಳೆ ಮಾತನಾಡಿದ ಸಾಹಿತಿ ಬಂಜಗೆರೆ ಜಯಪ್ರಕಾಶ್, ಇಂದು ಬಹುತೇಕರಿಗೆ ವಿದ್ಯೆ ಸಿಗಬೇಕಾದಷ್ಟು ಪ್ರಮಾಣ ಮತ್ತು ಗುಣಮಟ್ಟದಲ್ಲಿ ಸಿಗುತ್ತಿಲ್ಲ. ಹೀಗಾಗಿ ವಿದ್ಯೆ ನಿರ್ವಹಣೆ ಮಾಡಲು ಸಹಕರಿಸುವ ಪ್ರತಿಯೊಬ್ಬರೂ ಪ್ರಾತ ಸ್ವರಣೀಯರು. ಸರ್ಕಾರಗಳು ಆರ್ಥಿಕವಾಗಿ ಹಿಂದುಳಿದಿರುವ ಬಡವರು ಸೇರಿದಂತೆ ಎಲ್ಲರಿಗೂ ಉಚಿತವಾಗಿ ಉನ್ನತ ಶಿಕ್ಷಣ ದೊರಕಿಸಿಕೊಡಲು ಮುಂದಾಗಬೇಕು ಎಂದು ಹೇಳಿದರು.ಸರ್ಕಾರಗಳು ಬಡತನ ನಿರ್ಮೂಲನೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತವೆ. ಅದೇ ಬಡ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡಿದರೆ ಅವರ ಬದುಕು ಬದಲಾಗುತ್ತದೆ. ಅಹಿಂದ ವರ್ಗಗಳಲ್ಲಿ ಹೂಡ ಬೇಕಾದ ಬಂಡವಾಳ ಅಂದರೆ ಶಿಕ್ಷಣ. ತನ್ಮೂಲಕ ಉದ್ಯೋಗ ಸಿಗುವಂತಾಗಬೇಕು. ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೂ ಸರಿಯಾದ ಮಾರ್ಗದರ್ಶನ ಮಾಡಿದರೆ ಸಾಮಾಜಿಕ ಬದಲಾಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.ದೇವನೂರು ಮಹದೇವ ಅವರು ಹೇಳಿದಂತೆ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದೂ ವ್ಯರ್ಥವಾಗುವುದಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಶಿಕ್ಷಣ ಮತ್ತು ಹೋರಾಟಕ್ಕೆ ಪ್ರಾಮುಖ್ಯತೆ ನೀಡಿದರು. ಯಾರು ಶಿಕ್ಷಣ ಪಡೆಯುತ್ತಾರೊ ಅವರು ಸಾಮಾನ್ಯರಾಗಿ ಉಳಿಯುವುದಿಲ್ಲ. ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣ ಎಷ್ಟು ಮುಖ್ಯವೊ ಮಾನವ ಸಂಪನ್ಮೂಲ ನಿರ್ಮಾಣವೂ ಅಷ್ಟೇ ಮುಖ್ಯ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.ವಿದ್ಯಾಭ್ಯಾಸ ಮೊಟಕುಗೊಳಿಸ ಬೇಡಿ :ಅಕ್ಕಾ ಐಎಎಸ್ ಅಕಾಡೆಮಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಮತ್ತು ಪದವಿ ಪೂರ್ವ ಪರೀಕ್ಷೆಗಳಲ್ಲಿ ಬಾಲಕಿಯರು ಸದಾ ಮುಂದಿರುತ್ತಾರೆ. ಆದರೆ ಐಐಟಿ, ಐಐಎಂ ಮುಂತಾದ ಅತಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಶೇ 25ಕ್ಕೂ ಕಡಿಮೆ ಇದೆ. ಅದನ್ನು ನೀವುಗಳು ಭರಿಸುವಂತಾಗಬೇಕು ಎಂದು ತಿಳಿಸಿದರು.ನೀವು ಎಷ್ಟೇ ಉನ್ನತ ಹುದ್ದೆ ಅಲಂಕರಿಸಿದರು. ಪೋಷಕರು, ಅಕ್ಷರ ಕಲಿಸಿದ ಶಿಕ್ಷಕರು, ಓದಿದ ವಿದ್ಯಾ ಸಂಸ್ಥೆಗಳು ಮತ್ತು ಉಚಿತ ತರಬೇತಿ ನೀಡಿದ ನಗರಸಭೆಗೆ ಸದಾ ಕೃತಜ್ಞರಾಗಿರಿ. ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಬೇಡಿ ಉನ್ನತ ವಿದ್ಯಾಭ್ಯಾಸ ಪಡೆದು ಉನ್ನತಮಟ್ಟದ ಸ್ಥಾನಗಳಲ್ಲಿ ಮಹಿಳೆಯರೇ ಇಲ್ಲದಿದ್ದರೇ ಮಹಿಳಾ ಪರ ಕಾನೂನುಗಳನ್ನು ಮಾಡುವುದಾದರು ಹೇಗೆಂದು ಪ್ರಶ್ನಿಸಿದರು.ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ನೀಟ್, ಕೆ-ಸಿಇಟಿ, ಜೆಇಇ ಮುಂತಾದ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಲಕ್ಷಾಂತರ ರು. ವೆಚ್ಚವಾಗುತ್ತದೆ. ಅನೇಕ ಕುಟುಂಬಗಳಿಗೆ ಈ ಮೊತ್ತವನ್ನು ಕ್ರೂಢೀಕರಿಸುವುದು ಅಸಾಧ್ಯ. ಹೀಗಾಗಿ ಪ್ರತಿಭಾವಂತ ಮಕ್ಕಳ ಕನಸು ಕಮರಿ ಹೋಗಬಾರದು ಎಂಬ ಉದ್ದೇಶದಿಂದ ನಗರಸಭೆ ತನ್ನ ಆಯವ್ಯಯದಲ್ಲಿ ತರಬೇತಿಗಾಗಿಯೇ ಹಣ ಮೀಸಲಿಟ್ಟಿತ್ತು. ಅಕ್ಕಾ ಅಕಾಡೆಮಿ ಸಹಕಾರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಡಿಸಲಾಗಿದೆ ಎಂದು ಹೇಳಿದರು.ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನ್ಸರ್ ಉಲ್ಲ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಸದಸ್ಯರಾದ ಮೋಯಿನ್, ಸಮದ್, ಗೋವಿಂದರಾಜು, ಬಿ.ಸಿ.ಪಾರ್ವತಮ್ಮ, ಆಯಿಷಾ ಬಾನು, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು.--------------------------------...ಕೋಟ್...ಈಗಿನ ಸಂಕಷ್ಟ ಕಾಲದಲ್ಲಿ ಅನೇಕ ಕುಟುಂಬಗಳು ವೃತ್ತಿ ಪರ ಪರೀಕ್ಷೆಗಳ ತರಬೇತಿಗೆ ಶುಲ್ಕ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸಂದರ್ಭದಲ್ಲಿ ರಾಮನಗರ ನಗರಸಭೆ, ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ್ದು ಸ್ತುತ್ಯಾರ್ಹ. ಇದಕ್ಕೆ ಮನಸ್ಸು ಮತ್ತು ಪ್ರೇರಣೆ ಮುಖ್ಯವಾಗುತ್ತದೆ. ಜಾಗೃತಿ ಸಂವೇದನೆ ಮುಖ್ಯ. ಅದು ಕೆ.ಶೇಷಾದ್ರಿ ಅವರಲ್ಲಿದೆ. ನಗರಸಭೆ ಮೂಲಕ ವೆಚ್ಚವಾದ ಈ ಹಣ ವ್ಯರ್ಥವಾಗದ ವೆಚ್ಚ. ರಾಮನಗರ ನಗರಸಭೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಮಾದರಿ.- ಬಂಜಗೆರೆ ಜಯಪ್ರಕಾಶ್ , ಸಾಹಿತಿ.------------------------------...ಕೋಟ್ ...ಒಳ್ಳೆಯ ಅಂಕ ಪಡೆದಿರುವುದು ವ್ಯರ್ಥ ಆಗಬಾರದು. ಈ ವಿಚಾರದಲ್ಲಿ ಪೋಷಕರು ಸಹ ತಮ್ಮ ಮಕ್ಕಳಿಗೆ ಸಹಕಾರ ನೀಡಬೇಕು. ಮುಂದಿನ ನಾಲ್ಕೈದು ವರ್ಷ ಶ್ರದ್ದೆಯಿಂದ ವ್ಯಾಸಂಗ ಮಾಡಿ ಉಳಿದ ನಿಮ್ಮ ಬದಕು ನೆಮ್ಮದಿಯಿಂದ ಇರುತ್ತದೆ.- ಶಿವಕುಮಾರ್, ನಿರ್ದೇಶಕರು, ಅಕ್ಕಾ ಅಕಾಡೆಮಿ.-----------------------------...ಕೋಟ್ ...ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವ 27 ಮಂದಿ ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಿಗೆ ಆಯ್ಕೆಯಾಗಿದ್ದಾರೆ. ಇದು ಹೆಮ್ಮೆಯ ಮತ್ತು ಸಾರ್ಥಕ ವಿಚಾರ. ಪ್ರಸಕ್ತ ಸಾಲಿನಲ್ಲು ಈ ಕಾರ್ಯಕ್ರಮ ಮುಂದುವರೆಸುತ್ತೇವೆ. ಇದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ ವಿಚಾರದಲ್ಲಿಯೂ ಚಿಂತನೆ ನಡೆಯುತ್ತಿದೆ. - ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.----------------------11ಕೆಆರ್ ಎಂಎನ್ 10.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.-----------------------