ಹುಬ್ಬಳ್ಳಿ:
ವಿದ್ಯಾರ್ಥಿಗಳು ಸಂಶೋಧನೆಗಳ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕವಿವಿ ಉಪಕುಲಪತಿ ಪ್ರೊ. ಎ.ಎಂ. ಖಾನ ಹೇಳಿದರು.ಇಲ್ಲಿನ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 14ನೇ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪದವೀಧರ ವಿದ್ಯಾರ್ಥಿಗಳು ಹೊಸ ಜೀವನದ ಸಂಕಲ್ಪದೊಂದಿಗೆ ನೂತನ ಕಾರ್ಯಶೈಲಿ ರೂಢಿಸಿಕೊಂಡು ಜ್ಞಾನ ಸಂಗ್ರಹಣೆಗೆ ನಿರಂತರ ಪ್ರಯತ್ನಿಸಬೇಕು, ಕೃತಕ ಬುದ್ಧಿಮತ್ತೆ ಸರಿಯಾಗಿ ಬಳಸಿಕೊಂಡು ಪಾಲಕರ ಕನಸು ನನಸು ಮಾಡುವ ಮೂಲಕ ಸಾಮಾಜಿಕ ಮತ್ತು ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.ಹುಬ್ಬಳ್ಳಿ-ಧಾರವಾಡ ಶೀಘ್ರವಾಗಿ ಬೆಳೆಯುತ್ತಿದ್ದು, ಅದಕ್ಕೆ ಉತ್ತಮವಾದ ಕಾಣಿಗೆ ನೀಡುವ ಮೂಲಕ ಬೆಳವಣಿಗೆಗೆ ಕೈಜೋಡಿಸಬೇಕು. ಜತೆಗೆ ಹೊಸ ಶೈಲಿಯ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಕರೆ ನೀಡಿದರು.
ಬೆಂಗಳೂರು ಚಾಣುಕ್ಯ ವಿವಿ ಡೀನ ಪ್ರೊ. ಶ್ರೀನಿವಾಸ ಬಳ್ಳಿ ಮಾತನಾಡಿ, ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಬರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದರು.
ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ, ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಮಂಜುನಾಥ ಮುನವಳ್ಳಿ , ಕೈಗಾರಿಕೊದ್ಯಮಿ ವೀರೇಶ ಶರ್ಮಾ ಪಾಲ್ಗೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಸಲಹಾ ಮಂಡಳಿ ಹಿರಿಯ ಸದಸ್ಯ ಶಂಕರಣ್ಣ ಮುನವಳ್ಳಿ ನೇತೃತ್ವ ವಹಿಸಿದ್ದರು.
ಪ್ರಾಚಾರ್ಯ ಡಾ. ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಮಹಾಂತೇಶ ಎಂ, ಪರೀಕ್ಷಾ ವರದಿ ಪ್ರಸ್ತುತಪಡಿಸಿದರು. ಉಪನ್ಯಾಸಕಿ ಡಾ. ಸ್ನೇಹಾ ಚಿಂತಾ ಮತ್ತು ಸುಷ್ಮಾ ಎಂ. ನಿರೂಪಿಸಿದರು. ಪದವಿ ಪ್ರದಾನಕವಿವಿ ಘಟಿಕೋತ್ಸವ ಮಾದರಿಯಲ್ಲಿಯೇ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ ಜರುಗಿತು. ರಮ್ಯಾ ಬುಡಿ, ಸಮ್ರೀನ್ ಖಾನ, ಸುನೀತಾ ಬಂಗಾರದ ಪದಕ ಪಡೆದುಕೊಂಡರು. ಬಿ.ಎಸ್ಸಿಯ 387, ಬಿಸಿಎದಲ್ಲಿ 183, ಎಂ.ಎಸ್ಸಿ ಬಯೋಟೇಕ್ನಾಲಜಿ 7, ಎಂ.ಎಸ್ಸಿ ಕಂಪ್ಯೂಟರ ಸೈನ್ಸ್ 4, ಎಂ.ಎಸ್ಸಿ ಭೌತಶಾಸ್ತ್ರ 2, ಎಂ.ಎಸ್ಸಿ ರಸಾಯನಶಾಸ್ತ್ರ 22 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು.