ಸಾರಾಂಶ
ಶಹಾಪುರ ನಗರದ ಫಕೀರೇಶ್ವರ ಮಠದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಏಳು ದಿನ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು, ಇವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ. ಯೋಗಾಭ್ಯಾಸವು ನಿಮ್ಮ ಮಗುವಿನ ಕಲಿಕೆ ಮತ್ತು ಜ್ಞಾನ ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಪಾಲಕರು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಫಕೀರೇಶ್ವರ ಮಠದ ಪೀಠಾಧಿಪತಿ ಗುರುಪಾದ ಸ್ವಾಮೀಜಿ ಹೇಳಿದರು.ನಗರದ ಫಕಿರೇಶ್ವರ ಮಠದ ಸಹಯೋಗದಲ್ಲಿ 5ನೇ ಯೋಗ ಸಪ್ತಾಹ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಯೋಗದಿಂದ ಸಾಕಷ್ಟು ಲಾಭವಿದೆ. ವಿದ್ಯಾಭ್ಯಾಸದಲ್ಲಿ ತೊಡಗಿರುವ ಮನಸ್ಸುಗಳನ್ನು ಕೆಲವೊಂದು ಆಸನಗಳು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂದರು.
ಏಳು ದಿನಗಳ ಕಾಲ ಮಕ್ಕಳಿಗೆ ಯೋಗ ತರಬೇತಿ ನೀಡಿ ಮಾತನಾಡಿದ ಯೋಗ ಗುರು ನರಸಿಂಹ ವೈದ್ಯ, ಯೋಗದಿಂದ ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಚೈತನ್ಯ, ಏಕಾಗ್ರತೆ, ಮನೋಬಲ ವೃದ್ಧಿ ಮಾತ್ರವಲ್ಲ, ಮಕ್ಕಳ ದೈಹಿಕ ಬೆಳವಣಿಗೆಯೂ ಉತ್ತಮಗೊಳ್ಳುತ್ತದೆ ಎಂದರು.ನಿತ್ಯ ಯೋಗದಲ್ಲಿ ಮಕ್ಕಳು ವೃಕ್ಷಾಸನ, ತಾಡಾಸನ, ಭುಜಂಗಾಸನ, ಚಕ್ರಾಸನ, ಮಕರಾಸನ, ಬಾಲಾಸನ, ವೃಕ್ಷಾಸನ, ತ್ರಿಕೋನಾಸನ, ಶಶಂಕಾಸನ ಮಾಡಬಹುದು. ಇದರೊಂದಿಗೆ ಸ್ವಲ್ಪ ಹೊತ್ತು ಕನಿಷ್ಠ 10 ನಿಮಿಷವಾದರೂ ಚಿನ್ಮುದ್ರೆಯಲ್ಲಿ ಮಕ್ಕಳನ್ನು ಕುಳಿತುಕೊಳ್ಳುವಂತೆ ಮಾಡಬೇಕು. ಇದರಿಂದ ಅವರ ಮನಸ್ಸು ಶಾಂತವಾಗುವುದರ ಜತೆಗೆ ಏಕಾಗ್ರತೆ ವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.
ಯೋಗ ಶಿಕ್ಷಕ ವಿರೇಶ ಎಸ್. ಉಳ್ಳಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಶಾಲೆಯ ಸಂಸ್ಥಾಪಕ ಸುಧಾಕರ್ ಕುಲಕರ್ಣಿ ಮಾತನಾಡಿದರು.ಉಪನ್ಯಾಸಕ ಸುರೇಶ ಅರುಣಿ, ಪೋಲಿಸ್ ಇಲಾಖೆಯ ಬಸವಂತರಡ್ಡಿ ಡಂಬಳ, ಸಂಗನಗೌಡ ಪಾಟೀಲ್ ಅನವಾರ, ಪ್ರಶಾಂತ ನಾಯಕ ಸೇರಿ ಜ್ಞಾನಗಂಗಾ ಶಾಲೆಯ ಶಿಕ್ಷಕರು ಹಾಗೂ ಯೋಗ ತರಬೇತಿಯ ಮಕ್ಕಳು ಇದ್ದರು.