ಸಾರಾಂಶ
ಈಗಾಗಲೇ ಪರೀಕ್ಷಾ ದಿನಾಂಕ ಘೋಷಿಸಿದೆ. ನ.೨೦ ಕೆಲಸದ ಅಂತಿಮ ದಿನ
ಯಲಬುರ್ಗಾ: ತರಗತಿಗಳು ಸರಿಯಾಗಿ ನಡೆಯದೇ ಇರುವುದನ್ನು ಖಂಡಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಾಲೇಜು ಆರಂಭವಾಗಿ ಎರಡು ತಿಂಗಳಾಗಿದೆ. ಈವರೆಗೂ ಉಪನ್ಯಾಸಕರಿಂದ ಯಾವುದೇ ತರಗತಿ ನಡೆಯುತ್ತಿಲ್ಲ. ಈ ಬಗ್ಗೆ ವಿಶ್ವವಿದ್ಯಾಲಯ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ. ಕಾಲೇಜು ಮಹಾವಿದ್ಯಾಲಯ ಕೊಪ್ಪಳ ವಿವಿಗೆ ಒಳಪಡುತ್ತದೆ. ಈಗಾಗಲೇ ಪರೀಕ್ಷಾ ದಿನಾಂಕ ಘೋಷಿಸಿದೆ. ನ.೨೦ ಕೆಲಸದ ಅಂತಿಮ ದಿನವಾಗಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಇನ್ನಾದರೂ ತರಗತಿ ಪ್ರಾರಂಭಿಸಿ, ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳಾದ ಪ್ರಶಾಂತ ನಡುಲಮನಿ, ವೀರೇಶ ಹಿರೇಮಠ, ಮುತ್ತಪ್ಪ ದಳವಾಯಿ, ದುರಗೇಶ ಹಳ್ಳಿ, ಕಲ್ಲೇಶ ಉಪ್ಪಾರ, ವಿಜಯಕುಮಾರ ತಹಸೀಲ್ದಾರ್, ಗುರುರಾಜ ಮೇಟಿ, ಸಿರಾಜ್ ನದಾಫ್, ದಯಾನಂದ ಆರೇರ, ದುರಗೇಶ ಸರಕಲಿ, ಗೋವಿಂದ, ಅನಿಲ್, ರಾಜೇಶ ಸೇರಿದಂತೆ ಇತರರು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಬಸವರಾಜ ತೆನ್ನಳ್ಳಿಗೆ ಮನವಿ ಸಲ್ಲಿಸಿದರು.