ಸಾರಾಂಶ
ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಪೋಷಕರ ಸಭೆ ನಡೆಯಿತು. ಶಿಕ್ಷಕ ರಾಜೇಂದ್ರ ಭಟ್ ಕೆ. ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿ ಚುನಾವಣೆಯಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ ಅನ್ನು ಪದೇ ಪದೇ ಹೇಳಲಾಗುತ್ತದೆ. ಹತ್ತನೆ ತರಗತಿಯ ಫಲಿತಾಂಶ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಖ್ಯ ಪಾತ್ರ ವಹಿಸುತ್ತದೆ. ಆದುದರಿಂದ 625 ರಲ್ಲಿ 563 ನಿಮ್ಮ ಮ್ಯಾಜಿಕ್ ನಂಬರ್ ಆಗಬೇಕು ಎಂದು ರಾಷ್ಟ್ರೀಯ ತರಬೇತುದಾರ, ಶಿಕ್ಷಕ ರಾಜೇಂದ್ರ ಭಟ್ ಕೆ. ಹೇಳಿದರು.ಅವರು ಮೌಂಟ್ ರೋಸರಿ ಆಂಗ್ಲ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಖುಷಿ ಖುಷಿಯಿಂದ ಪರೀಕ್ಷೆ ಎದುರಿಸುವುದು ಹೇಗೆ?’ ಕುರಿತು ಮಾತನಾಡಿದರು.
ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಲ್ಲಿ ಹಲವು ಉತ್ಕೃಷ್ಟ ಸಂಸ್ಥೆಗಳಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲು ಮುಕ್ತ ಅವಕಾಶ ಸಿಗಲಿದೆ. ಉಡುಪಿ ಜಿಲ್ಲೆಯನ್ನು ಮತ್ತೊಮ್ಮೆ ಮೊದಲ ಸ್ಥಾನದಲ್ಲಿ ನೋಡಲು ನಿಮ್ಮ ಕಠಿಣ ಕ್ರಮದಿಂದ ಸಾಧ್ಯವಿದೆ ಎಂದು ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಚರ್ಚಿನ ಸಹಾಯಕ ಧರ್ಮಗುರು ಫಾ| ಓಲಿವರ್ ನಜ್ರತ್ ಮಾತನಾಡಿ, ಕಷ್ಟಪಟ್ಟು ಕಲಿಯಬೇಡಿ, ವಿಷಯಗಳನ್ನು ಇಷ್ಟಪಟ್ಟು ಕಲಿಯಿರಿ. ಶಿಕ್ಷಕರು, ಸಮಾಜ, ಸಹಪಾಠಿಗಳಿಂದ ಒತ್ತಡ ಎಸೆಸ್ಸೆಲ್ಸಿ ಮಕ್ಕಳ ಮೇಲಿರುವುದು ಸಹಜ. ಆದರೆ ಪೋಷಕರು ಒತ್ತಡ ಮಾಡದೇ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಈ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯ ಹಿರಿಯ ಮಕ್ಕಳಾಗಿ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಂಸ್ಕೃತಿಕ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದಕ್ಕೆ ಶ್ಲಾಫನೆ ಮಾಡಿದರು. ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ಸಾರಾ ವಂದಿಸಿದರು.