ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ವೀರೇಶಾನಂದ ಸರಸ್ವತೀ ಸ್ವಾಮಿ

| Published : Jan 29 2025, 01:31 AM IST

ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ವೀರೇಶಾನಂದ ಸರಸ್ವತೀ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಶಿಕ್ಷಕರು ಹಾಗೂ ರಕ್ಷಕರು ಕಥೆಗಳ ಮೂಲಕ ಮಕ್ಕಳಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡಬೇಕು. ವಿಷಯಗಳ ಗ್ರಹಿಕೆಗೆ ವಯಸ್ಸು ಮುಖ್ಯವಾಗುತ್ತದೆ. ಉತ್ತಮ ಆಯ್ಕೆ ಅದಕ್ಕೆ ತಕ್ಕಂತೆ ಅಧ್ಯಯನ ಅಗತ್ಯ ಎಂದರು. ಪಂಚೇಂದ್ರಿಯಗಳ ನಿಯಂತ್ರಣದಿಂದ ಎಲ್ಲರೂ ಸುಮನಸರಾಗಬಹುದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಚಾರಿತ್ರ್ಯವಂತ ಮಾನವ ಸಂಪನ್ಮೂಲ ದೇಶದ ಅಮೂಲ್ಯ ಸಂಪತ್ತಾಗಿದೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗುವುದರಿಂದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮಿಗಳು ನುಡಿದರು.

ಅವರು ಧರ್ಮಸ್ಥಳದ ಮಹೋತ್ಸವ ಸಭಾಭವದಲ್ಲಿ ಮಂಗಳವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಜ್ಞಾನದರ್ಶಿನಿ ಮತ್ತು ಜ್ಞಾನವರ್ಷಿಣಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಬಡತನ ಶಾಪವಲ್ಲ, ಸಿರಿತನ ವರವಲ್ಲ ಎಂದು ಹೇಳಿದ ಶ್ರೀಗಳು, ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸತ್ಯ, ನ್ಯಾಯ, ನೀತಿ, ದಯೆ, ಅನುಕಂಪ, ಸೇವೆ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖಿ ಸೇವೆಯನ್ನು ಶ್ಲಾಘಿಸಿದ ವೀರೇಶಾನಂದ ಸರಸ್ವತೀ ಸ್ವಾಮಿ, ಚರ್ತುರ್ವಿಧ ದಾನಪರಂಪರೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವರು ಆಯೋಜಿಸಿದ ಇಂದಿನ ಸಮಾರಂಭ ವಿ.ವಿ.ಯ. ಘಟಿಕೋತ್ಸವಕ್ಕಿಂತಲೂ ಮಹತ್ವಪೂರ್ಣವಾಗಿ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶುಭಾಶಂಸನೆ ಮಾಡಿದ ಗೀತ ರಚನೆಕಾರ, ಸಂಗೀತ ನಿರ್ದೇಶಕ ವಿ. ಮನೋಹರ್‌, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ವಿದ್ಯೆಯೊಂದಿಗೆ ವಿನಯ, ಮಾನವೀಯತೆ, ಗುರು-ಹಿರಿಯರನ್ನು ಗೌರವಿಸುವುದು, ವಿವೇಕ ಮೊದಲಾದ ಧನಾತ್ಮಕ ಅಂಶಗಳನ್ನು ಬಿತ್ತಬೇಕು. ವಿದ್ಯಾರ್ಥಿಗಳು ಅಹಂಕಾರ ಮತ್ತು ಅಸೂಯೆ ದೂರಮಾಡಿದಾಗ ಉನ್ನತ ಸಾಧನೆ ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಶಿಕ್ಷಕರು ಹಾಗೂ ರಕ್ಷಕರು ಕಥೆಗಳ ಮೂಲಕ ಮಕ್ಕಳಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡಬೇಕು. ವಿಷಯಗಳ ಗ್ರಹಿಕೆಗೆ ವಯಸ್ಸು ಮುಖ್ಯವಾಗುತ್ತದೆ. ಉತ್ತಮ ಆಯ್ಕೆ ಅದಕ್ಕೆ ತಕ್ಕಂತೆ ಅಧ್ಯಯನ ಅಗತ್ಯ ಎಂದರು. ಪಂಚೇಂದ್ರಿಯಗಳ ನಿಯಂತ್ರಣದಿಂದ ಎಲ್ಲರೂ ಸುಮನಸರಾಗಬಹುದು ಎಂದು ಹೇಳಿದರು.

ಶಾಂತಿವನ ಟ್ರಸ್ಟ್ ಟ್ರಸ್ಟಿಗಳಾದ ಡಾ. ಹೇಮಾವತಿ ವೀ. ಹೆಗ್ಗಡೆ, ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಐ. ಶಶಿಕಾಂತ ಜೈನ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಯೋಗ ಶಿಕ್ಷಕ ರಾಘವೇಂದ್ರ ರಾವ್ ಪಡುಬಿದ್ರೆ ಕಾರ್ಯಕ್ರಮ ನಿರ್ವಹಿಸಿದರು.