ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ರೂವಾರಿಗಳು, ಮೂರು ವರ್ಷದ ಪದವಿ ಪಡೆದು ತೆರಳುವ ನೀವು ಸವಾಲನ್ನು ಧೈರ್ಯದಿಂದ ಎದುರಿಸಬೇಕು. ಓದುಗಾರಿಕೆ ಜೊತೆ ವಿವಿಧ ಕೌಶಲ್ಯ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಕೆಡುಕು ಉಂಟುಮಾಡದೆ ಸತ್ಪ್ರಜೆಗಳಾಗಿ ಬಾಳಿರಿ ಎಂದರು.ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ಜೆ.ದಿವಾಕರ ಕುಂದಲ್ಪಾಡಿ ಅವರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ಬಳಿಕ ಉದ್ಯೋಗ ಪಡೆಯುವಂತಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು. ಪೋಷಕರನ್ನು ಗೌರವಯುತವಾಗಿ ನೋಡಿಕೊಳ್ಳುವಂತಾಗಬೇಕು ಎಂದು ಹಿತ ನುಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸರಸ್ವತಿ ಡಿ.ಕೆ. ಮಾತನಾಡಿ ವಿದ್ಯಾರ್ಥಿಗಳು ಜೀವನ ಮೌಲ್ಯಗಳಾದ ನಿಷ್ಠೆ ಪ್ರಾಮಾಣಿಕತೆ ರೂಢಿಸಿಕೊಳ್ಳುವಂತಾಗಬೇಕು. ಕಾಲೇಜಿನೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮರಾಗಿ ಧೈರ್ಯದಿಂದ ಬದುಕು ಎದುರಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ ಕೆ.ಬಸವರಾಜು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ಪ್ರೊ ದಯಾನಂದ ಕೆ.ಸಿ. ಸ್ವಾಗತಿಸಿದರು, ಕ್ರೀಡಾ ಸಮಿತಿ ಸಂಚಾಲಕ ಪ್ರೊ ಗುರುಪ್ರಸಾದ್ ಎನ್ ವಂದಿಸಿದರು. ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿ.ಎ.ವಿದ್ಯಾರ್ಥಿನಿ ಕೀರ್ತನ ಪಡೆದರು. ವರ್ಷದ ಅತ್ಯುತ್ತಮ ವಿದ್ಯಾರ್ಥಿ ನಾಯಕ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿ ನಿಶಾನ್ ಜೋಸೆಫ್, ವರ್ಷದ ಅತ್ಯುತ್ತಮ ಶ್ರದ್ಧಾ ವಿದ್ಯಾರ್ಥಿಯಾಗಿ ದರ್ಶನ್, ವರ್ಷದ ಅತ್ಯುತ್ತಮ ಕ್ರೀಡಾ ಪಟುವಾಗಿ ರಸೀನಾ, ವರ್ಷದ ಅತ್ಯುತ್ತಮ ಸಾಂಸ್ಕೃತಿಕ ಪ್ರತಿಭೆಯಾಗಿ ಸುಹೈರಾ ಆಯ್ಕೆಯಾದರು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕರಾಗಿ ತೃತೀಯ ಬಿಎ ವಿದ್ಯಾರ್ಥಿಗಳಾದ ಮಂಜು, ಚಂದ್ರಶೇಖರ, ಪುನೀತ್‌ಕುಮಾರ್, ಸೋನಾ ನಿವಿತಾ ಆಯ್ಕೆಯಾಗಿದ್ದು ಇವರೆಲ್ಲರಿಗೂ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆಯಾದ ವಿರಾಜಮಾರ್ಗವನ್ನು ಅತಿಥಿಗಳಿಂದ ಬಿಡುಗಡೆಗೊಳಿಸಲಾಯಿತು.