ಸಾರಾಂಶ
ಚಿಕ್ಕಮಗಳೂರುವಿದ್ಯಾರ್ಥಿಗಳು ಸರ್ವಾಂಗೀಣವಾಗಿ ಬೆಳೆಯಬೇಕಾದರೆ ಶಿಕ್ಷಣವಂತರಾಗುವ ಜೊತೆಗೆ ಕೌಶಲ್ಯವಂತರೂ ಆಗಬೇಕು ಎಂದು ಎಐಟಿ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್ ಸಲಹೆ ಮಾಡಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ವಿದ್ಯಾರ್ಥಿಗಳು ಸರ್ವಾಂಗೀಣವಾಗಿ ಬೆಳೆಯಬೇಕಾದರೆ ಶಿಕ್ಷಣವಂತರಾಗುವ ಜೊತೆಗೆ ಕೌಶಲ್ಯವಂತರೂ ಆಗಬೇಕು ಎಂದು ಎಐಟಿ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ್ ಸಲಹೆ ಮಾಡಿದರು.ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿಂದು ವಿಜ್ಞಾನ ಮತ್ತು ತಂತ್ರಜ್ಞಾನ ಅವ್ಯಾಹತವಾಗಿ ಬೆಳೆಯುತ್ತಿದೆ. ಪ್ರತಿದಿನ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಅದರಿಂದಾಗಿ ಜಗತ್ತು ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಹಿಂದೆ ಸೈನಿಕರ ನಡುವೆ ಯುದ್ಧವಾಗುತ್ತಿತ್ತು. ಆದರೆ, ಈಗ ತಂತ್ರಜ್ಞಾನ ದೊಂದಿಗೆ ಯುದ್ಧಗಳು ನಡೆಯುತ್ತಿವೆ ಎಂದರು.ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ, ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಬೆಳೆದು ಯಶಸ್ವಿಯಾಗಬೇಕಾದರೆ, ಬರೀ ವಿದ್ಯೆ ಕಲಿತರಷ್ಟೇ ಸಾಲದು. ಕೌಶಲ್ಯತೆ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘಗಳು ಸಹಕಾರಿ ಎಂದ ಅವರು, ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳು ತಾವು ಬೆಳೆಯುವ ಜೊತೆಗೆ ತಮ್ಮ ಶಾಲೆಯನ್ನೂ ಬೆಳೆಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷೆ ಎಸ್. ಶಾಂತಕುಮಾರಿ, ಸಂಜೀವಿನಿ ವಿದ್ಯಾ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸುತ್ತಿದೆ. ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.ಪೋಷಕರು ತಮ್ಮ ಮಕ್ಕಳನ್ನು ಬರೀ ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು, ಅವರನ್ನು ಸಂಸ್ಕಾರವಂತರನ್ನಾಗಿಯೂ ಮಾಡಬೇಕು.ಅವರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ ಕಲಿಸಬೇಕು ಎಂದು ಸಲಹೆ ಮಾಡಿದರು.ಪ್ರಾಂಶುಪಾಲರಾದ ಎಸ್.ಆರ್.ಹೇಮಾ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಂಜೀವಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಪಿ. ಉಡುಪ, ಮುಖ್ಯ ಶಿಕ್ಷಕಿ ಕುಮುದಾ ಎಂ.ಕಿಣಿ, ಡಾ.ಶಿವಮೂರ್ತಿ, ಸಹ ಶಿಕ್ಷಕಿ ಇಂದಿರಾ, ವಿದ್ಯಾರ್ಥಿಗಳಾದ ಧಾತ್ರಿ, ಅದ್ರಿತಾ, ಧನ್ಯಶ್ರೀ, ಅಕ್ಷರ ಎಸ್. ಗೌಡ, ಸಿ.ಎ. ವರಲಕ್ಷ್ಮಿ ಉಪಸ್ಥಿತರಿದ್ದರು.24 ಕೆಸಿಕೆಎಂ 3ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಡಾ. ಜಯದೇವ್ ಅವರು ಉದ್ಘಾಟಿಸಿದರು. ಶಾಂತಕುಮಾರಿ, ಹೇಮಾ, ಎಂ.ಪಿ. ಉಡುಪ ಇದ್ದರು.