ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶಿಕ್ಷಣ ಪಡೆ ಯುವ ಹಂತದಲ್ಲಿ ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಸುಂದರ ಬದುಕನ್ನು ಹಾಳು ಮಾಡಿಕೊಳ್ಳಬಾರದೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಚೇತನ್ ಅವರು ಸಲಹೆ ನೀಡಿದರು.ತಾಲೂಕಿನ ಪಡುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶದ ಆಸ್ತಿ, ಯುವ ಶಕ್ತಿ ಸದ್ಬಳಕೆಯಾಗಬೇಕು. ಸಹವಾಸ ದೋಷ ಇನ್ನಿತರ ಕಾರಣಕ್ಕೆ ಮಾದಕ ವಸ್ತುಗಳ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗಬಾರದು. ಈ ನಿಟ್ಟಿನಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೆಗ್ಗಡೆ ಅವರ ಮಾರ್ಗ ದರ್ಶನದಲ್ಲಿ ಶಾಲಾಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ತಾಲೂಕು ಸ್ಕೌಟ್ಸ್ ಅಂಡ್ ಗೈಡ್ಸ್ ಖಜಾಂಚಿ ಜಯರಾಮ್ ಅವರು ಮಾತನಾಡಿ, ಆರೋಗ್ಯ ಹಾಳು ಮಾಡುವ ದುಶ್ಚಟಗಳಿಗೆ ವಿದ್ಯಾರ್ಥಿ ಗಳು ಬಲಿಯಾಗಬಾರದು. ಧೂಮ ಪಾನ ಇನ್ನಿತರ ದುಶ್ಚಟಗಳಿಂದ ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಕುಟುಂಬದವರೂ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ವ್ಯಾಸಂಗದ ಸಮಯದಲ್ಲಿ ಎಚ್ಚರಿಕೆ ಇರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಶೋಭಾ ಅವರು ಮಾತನಾಡಿ, ಕುತೂಹಲಕ್ಕೆ ಅಥವಾ ಸಹವಾಸ ದೋಷದಿಂದ ಮಕ್ಕಳು ಬೀಡಿ, ಸಿಗರೇಟ್ ಸೇದುವ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಪೋಷಕರು ಮಕ್ಕಳ ಚಲನವಲನದ ಮೇಲೆ ನಿಗಾ ಇಡಬೇಕೆಂದರು. ಶಿಕ್ಷಕರಾದ ರಾಘವೇಂದ್ರ, ನಾಗರಾಜ್, ಜಿ.ಬಿ.ಮೋಹನ್ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕ ನಾಗರಾಜು, ಸೇವಾ ಪ್ರತಿನಿಧಿ ಗೀತಾ ಮತ್ತಿತರರು ಹಾಜರಿದ್ದರು.