ವಿದ್ಯಾರ್ಥಿಗಳು ಹೊಸ ಆವಿಷ್ಕಾರಕ್ಕೆ ಮುಂದಾಗಿ

| Published : Jun 16 2025, 06:22 AM IST

ಸಾರಾಂಶ

ಹೊಸ ಆವಿಷ್ಕಾರ ಹಾಗೂ ಹೊಸ,ಹೊಸ ಉತ್ಪನ್ನಗಳ ಉತ್ಪಾದನೆ ಮಾಡುವ ಬಗ್ಗೆ ಉದ್ಯಮಿಗಳು, ಉದ್ಯೋಗಿಗಳು, ಸಂಶೋಧಕರು ಮುಂದಾಗಬೇಕಿದೆ ಎಂದು ಆವಿಷ್ಕಾರ್ ಓರಲ್ ಸಿರಪ್ಸ್ ಸಂಸ್ಥೆಯ ಸಂಸ್ಥಾಪಕ ಹಾಗು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿನೇಶ್ ರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಹೊಸ ಆವಿಷ್ಕಾರ ಹಾಗೂ ಹೊಸ,ಹೊಸ ಉತ್ಪನ್ನಗಳ ಉತ್ಪಾದನೆ ಮಾಡುವ ಬಗ್ಗೆ ಉದ್ಯಮಿಗಳು, ಉದ್ಯೋಗಿಗಳು, ಸಂಶೋಧಕರು ಮುಂದಾಗಬೇಕಿದೆ ಎಂದು ಆವಿಷ್ಕಾರ್ ಓರಲ್ ಸಿರಪ್ಸ್ ಸಂಸ್ಥೆಯ ಸಂಸ್ಥಾಪಕ ಹಾಗು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿನೇಶ್ ರೆಡ್ಡಿ ಹೇಳಿದರು.

ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕೆಮಿಕಲ್ ಎಂಜಿನಿಯರಿಂಗ್ ಹಾಗು ಬಯೋಟೆಕ್ನಾಲಜಿ ವಿಭಾಗಗಳು ಬಯೋಚೆಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಾದ್ಯಂತ ಆವಿಷ್ಕಾರಗಳ ಮೂಲಕ ಹೊಸ,ಹೊಸ ಉತ್ಪನ್ನಗಳನ್ನು ಕಡಿಮೆ ಅವಧಿಯಲ್ಲಿ ಕಂಡು ಹಿಡಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದೆ ಉದ್ಯಮ ಮಾಡುವ ಉದ್ಯಮಿಗಳು, ಸಂಶೋಧಕರು, ಉದ್ಯೋಗಿಗಳು ಹೊಸ ಆವಿಷ್ಕಾರ ಹಾಗೂ ಹೊಸ, ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯುವುದು ಸೂಕ್ತ ಎಂದರು.

ಉದ್ಯೋಗ ಮತ್ತು ಉದ್ಯಮದಲ್ಲಿ ಯಶಸ್ಸು ಗಳಿಸುಲು ಉದ್ಯಮ ಶೀಲತೆಯ ಬಗ್ಗೆ ಕೌಶಲ್ಯ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಸಂಶೋಧನೆ ಮಾಡಿದಾಗ ಮುಂದಿನ ಸರಕುಗಳು ಮತ್ತು ಸಾಮಗ್ರಿಗಳ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಹೊಸದಾಗಿ ಉದ್ಯಮಕ್ಕೆ ಕಾಲಿಡುವ ವಿದ್ಯಾರ್ಥಿಗಳು ಅಥವಾ ಉದ್ಯೋಗಿಗಳು ಮಾರುಕಟ್ಟೆಯಲ್ಲಿ ಯಾವ ವಸ್ತುಗಳಿಗೆ ಬೇಡಿಕೆ ಇದೆ ಎಂಬುದರ ಬಗ್ಗೆ ಸಂಶೋಧನೆ ಮಾಡಬೇಕಿದೆ. ಜಗತ್ತಿನಲ್ಲಿ ಹೆಚ್ಚು ಪ್ರಚಲಿತವಾಗಿ ಉತ್ತಮವಾದ ವಹಿವಾಟು ನಡೆಯುವ ಸಾಮಗ್ರಿಗಳನ್ನು ತಯಾರಿಸಿದರೆ ವೇಗವಾಗಿ ಉದ್ಯಮದಲ್ಲಿ ಯಶಸ್ಸನ್ನು ಕಾಣಬಹುದು ಎಂದು ತಿಳಿಸಿದರು.

ನಮ್ಮ ದೇಶಲ್ಲಿ 350 ಮಿಲಿಯನ್ ಜನರು ಉದ್ಯಮ ಮತ್ತು ಉನ್ನತ ಉದ್ಯೋಗಗಳನ್ನು ಮಾಡಿ ಬಡತನ ರೇಖೆಯಿಂದ ಹೊರ ಬಂದು ಅಭಿವೃದ್ಧಿ ಹೊಂದಿದ್ದಾರೆ. ಜನಸಂಖ್ಯೆ ಹೆಚ್ಚಳವಾದಂತೆ ಅಗತ್ಯಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ವಸ್ತುಗಳ ಬೇಡಿಕೆ ಹೆಚ್ಚಾಗುತ್ತದೆ. ಗ್ರಾಹಕರಿಗೆ ಅಗತ್ಯವಾಗಿರುವ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದರೆ, ಮಾರಾಟದ ಸಾಮಗ್ರಿಗಳ ಮೇಲೆ ಹೆಚ್ಚು ಒಲವು ಬರುತ್ತದೆ. ಇದರಿಂದಾಗಿ ಗ್ರಾಹಕರ ಸಂಖ್ಯೆಯು ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.

ಮುಂದಿನ 5-10 ವರ್ಷದಲ್ಲಿ ಭಾರತ ದೇಶ ಹೊಸ, ಹೊಸ ಉದ್ಯಮಗಳನ್ನು ಆರಂಭಿಸಿ ವಿಶ್ವದ ಅನೇಕ ರಾಷ್ಟ್ರಗಳಿಗೆ ಸರಕುಗಳನ್ನು ಸರಬರಾಜು ಮಾಡುವ ನಿರೀಕ್ಷೆ ಇದೆ. ಉತ್ತಮ ವೇತನದೊಂದಿಗೆ ಹೆಚ್ಚಿನ ಉದ್ಯೋಗ ಕೂಡ ಸಿಗಲಿದೆ. ಇಂದಿನ ಕಾಲಘಟ್ಟದಲ್ಲಿ ಉದ್ಯಮ ಹಾಗೂ ಉದ್ಯೋಗ ಬಯಸುವವರ ಸಂಖ್ಯೆ ಹೆಚ್ಚಳವಾಗಬೇಕಿದ್ದು, ಜೊತೆಗೆ ಹೊಸದಾಗಿ ಉದ್ಯೋಗ ಮಾಡಲು ಬಯಸುವ ಯುವ ಉದ್ಯೋಗಿಗಳನ್ನು ತಯಾರು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಜಂಟಿ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿವಾಹಣಾ ಅಧಿಕಾರಿ ಡಾ. ಶಿವಕುಮಾರಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶ್ರೀ ಸಿದ್ದಗಂಗಾ ತಾಂತ್ರಿಕ ವಿದ್ಯಾಲಯದಲ್ಲಿ ತಾಂತ್ರಿಕ ವಿಭಾಗದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಹಲವಾರು ಕಾರ್ಯಕ್ರಮಗಳು, ಸೆಮಿನಾರ್, ತಜ್ಞರೊಂದಿಗೆ ಸಂವಾದ ಸೇರಿದಂತೆ ಪ್ರಾಯೋಗಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಕೂಲ ಪಡೆಯಬೇಕು ಎಂದು ತಿಳಿಸಿದರು.

ಆಯೋಜಿಸಿರುವ ಬಯೊಚೆಸ್ ಕಾರ್ಯಕ್ರಮ ವಿಚಾರಗಳ ವಿನಿಮಯವನ್ನು ಉತ್ತೇಜಿಸಲು ಹಾಗೂ ವಿಭಾಗಾಂತರ ಸಂವಾದವನ್ನು ಪ್ರೋತ್ಸಾಹಿಸಲು ಉದ್ದೇಶಿತವಾಗಿದ್ದು, ಯುವ ವಿದ್ಯಾರ್ಥಿಗಳ ಮನಸ್ಸುಗಳನ್ನು ಪ್ರೇರೇಪಿಸಿ, ಸುಸ್ಥಿರ ಭವಿಷ್ಯದತ್ತ ಪ್ರಗತಿಗೆ ದಾರಿ ಮಾಡಿಕೊಡುವ ವೇದಿಕೆಯಾಗುವುದರ ಮೂಲಕ ತನ್ನ ಕೊಡುಗೆ ನೀಡಲಿದೆ ಎಂದು ನುಡಿದರು.

ಸಿದ್ಧಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಎಸ್.ವಿ ದಿನೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸುಧೀರ್ ಹೆಚ್ ರಂಗನಾಥ್, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್ ಗೌರಿಶಂಕರ್, ಡಾ. ರಾಜಶೇಖರ್ ಎಸ್, ಡಾ. ಡಿ.ಆರ್ ಪ್ರಸನ್ನ, ವಿದ್ಯಾರ್ಥಿ ಫರ್ವಿನ್ ಖಾನ್ ಮುಂತಾದವರು ಭಾಗವಹಿಸಿದ್ದರು.