ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗಇತಿಹಾಸ ಕುರಿತಾದ ಕೃತಿ ರಚನೆಗೆ ಗರಿಷ್ಟ ಪ್ರಮಾಣದ ಅಧ್ಯಯನ ಮುಖ್ಯ. ಅಧ್ಯಯನದ ಸ್ಪಷ್ಟತೆ ಇಲ್ಲದೇ ರಚನೆಯಾದ ಕೃತಿಗಳಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಲ್ಲದೇ ನೈಜ ಇತಿಹಾಸಕ್ಕೂ ಅಪಚಾರ ಮಾಡಿದಂತಾಗುತ್ತದೆ ಎಂದು ಕಥೆಗಾರ ವಸುಧೇಂದ್ರ ಎಚ್ಚರಿಸಿದರು.ನಗರದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ತಮ್ಮ ಇತ್ತೀಚಿನ ''''''''ರೇಷ್ಮೆ ಬಟ್ಟೆ'''''''' ಕೃತಿ ಕುರಿತಾಗಿ ಓದುಗರೊಂದಿಗೆ ಸಂವಾದ ನಡೆಸಿದ ಅವರು, ಪ್ರಸ್ತುತ ರೇಷ್ಮೆ ಬಟ್ಟೆ ಕೃತಿ ರಚನೆಗೆ ಸತತ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಹತ್ತು ಹಲವು ಪ್ರಕಾರಗಳಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ರೇಷ್ಮೆ ಬಟ್ಟೆ ಹಾಗೂ ತೇಜೋ ತುಂಗಭದ್ರ ಎರಡೂ ಕೃತಿಗಳು ಐತಿಹಾಸಿಕ ಸಂಗತಿಗಳನ್ನೇ ಆಧರಿಸಿದ್ದು. ಇತಿಹಾಸ-ವಿಜ್ಞಾನ ಎರಡರ ಸಮನ್ವಯತೆ ಇಲ್ಲಿದೆ. ಹೊಸ ಆವರಣದೊಂದಿಗೆ ರೇಷ್ಮೆ ಬಟ್ಟೆಯನ್ನು ಕಟ್ಟಿಕೊಡಲಾಗಿದೆ ಎಂದರು.ಜನ್ನ, ರಾಘವಾಂಕ, ಬಸವಣ್ಣರವರ ಸಾಹಿತ್ಯಗಳು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಇವುಗಳೇ ನಾನು ಕಥೆಗಾರನಾಗಲು ಪ್ರೇರಣೆ. ಜತೆಗೆ ನನ್ನಮ್ಮ ಹೇಳುತ್ತಿದ್ದ ಕಥೆಗಳು ಕೂಡಾ ನನಗೆ ಸ್ಫೂರ್ತಿ ನೀಡಿದ್ದವು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗ ನನಗೆ ಒಂದರ್ಥದಲ್ಲಿ ಯಾಂತ್ರಿಕವಾಗಿತ್ತು. ಅಂತಿಮವಾಗಿ ದೃಢ ನಿರ್ಧಾರದಿಂದ ಅದನ್ನು ತೊರೆದು ಹೊರ ಬಂದಿದ್ದರಿಂದಲೇ ನಾನೊಬ್ಬ ಕಥೆಗಾರನಾಗಲು ಕಾರಣವಾಯಿತು. ತೇಜೋ ತುಂಗಭದ್ರ, ರೇಷ್ಮೆ ಬಟ್ಟೆಯಂತಹ ಐತಿಹಾಸಿಕ ಕೃತಿಗಳನ್ನು ರಚಿಸಲು ಸಾಧ್ಯವಾಯಿತು ಎಂದು ತಿಳಿಸಿದರು.ಈ ರೇಷ್ಮೆ ಬಟ್ಟೆ ಎರಡನೇ ಶತಮಾನದ ಏಷ್ಯಾ ಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗ ಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಓದುಗರ ಮುಂದಿಡಲು ಪ್ರಯತ್ನಿಸುತ್ತದೆ. ಸತತ ನಾಲ್ಕು ವರ್ಷಗಳ ಕಾಲ ಹಲವು ದೇಶಗಳ ಮತ್ತು ಹಲವು ಧರ್ಮಗಳ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಲಾಗಿದೆ ಎಂದರು.
ತಮ್ಮ ಬಹುಚರ್ಚಿತ ಮೋಹನ ಸ್ವಾಮಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೋಹನ ಸ್ವಾಮಿ ಬರೆಯುವಾಗ ಅದರ ಫಲಿತಾಂಶ-ಪರಿಣಾಮಗಳ ಬಗ್ಗೆ ಯೋಚಿಸಿರಲಿಲ್ಲ. ಆ ಕೃತಿ ಬಂದ ಹೊಸತರಲ್ಲಿ ಪತ್ರಿಕೆಗಳಲ್ಲಿ ವಿಮರ್ಶೆ ಬರಲೇ ಇಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅದು ಬಹು ದೊಡ್ಡ ಚರ್ಚೆಯಾಯಿತು. ಯಾವಾಗ ಚರ್ಚೆ ತಾರಕಕ್ಕೆ ಹೋಯಿತೋ, ಆಗ ಪತ್ರಿಕೆಗಳಲ್ಲಿ ವಿಮರ್ಶೆಗಳು ಬರಲು ಪ್ರಾರಂಭಿಸಿದವು ಎಂದು ತಿಳಿಸಿದರು.ಇಂದಿನ ಯುವ ಪೀಳಿಗೆಗೆ ಬೇಕಾದ ಜ್ಞಾನದ ಹರಿವನ್ನು ನೀಡುವ ಕೃತಿಗಳನ್ನು ನಾವು ನೀಡಬೇಕಿದೆ. ಪ್ರೀತಿ-ಪ್ರೇಮಗಳ ಜಾಡಿನಿಂದ ಅವರನ್ನು ಹೊರತರಬೇಕಿದೆ. ಹಿರಿಯರನ್ನು ಮೆಚ್ಚಿಸುವ ಬದಲು ಕಿರಿಯರನ್ನು ಮೆಚ್ಚಿಸುವ ಕೃತಿಗಳನ್ನು ನೀಡಬೇಕು. ಓದಗರೊಂದಿಗೆ ಮುಖಾಮುಖಿಯಾಗುವುದರಲ್ಲಿ ಸಿಗುವ ಆನಂದ, ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಸಿಗುವುದಿಲ್ಲ ಎಂದರು.ಸಂವಾದದಲ್ಲಿ ನಗರದ ಓದುಗರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಜ್ಞಾ ಬುಕ್ ಗ್ಯಾಲರಿಯ ಕೃಷ್ಣಮೂರ್ತಿ ಎಲ್ಲರನ್ನೂ ಸ್ವಾಗತಿಸಿದರು.