ಸಾರಾಂಶ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಕುರಿತ ಕ್ಷೇತ್ರಾಧ್ಯಯನ ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ಇತ್ತೀಚೆಗೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಕುರಿತ ಕ್ಷೇತ್ರಾಧ್ಯಯನ ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ಇತ್ತೀಚೆಗೆ ನಡೆಯಿತು.ಕೊರಗ ಭಾಷಾ ತಜ್ಞ, ಲೇಖಕ ಪಾಂಗಾಳ ಬಾಬು ಕೊರಗ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದು, ದೆಹಲಿಯ ಅಶೋಕ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕಿ, ಲೇಖಕಿ, ಭಾಷಾಶಾಸ್ತ್ರಜ್ಞೆ ಡಾ. ಪೆಗ್ಗಿ ಮೋಹನ್, ಕ್ಷೇತ್ರಾಧ್ಯಯನ ನಡೆಸಿಕೊಟ್ಟರು.ಬಾಬು ಕೊರಗ, ಕೊರಗ ಭಾಷೆಯಲ್ಲಿ ಒಂದು ಕತೆಯನ್ನು ಹೇಳುವುದರ ಮೂಲಕ ಕ್ಷೇತ್ರಾಧ್ಯಯನಕ್ಕೆ ಅನುವು ಮಾಡಿಕೊಟ್ಟರು. ಪೆಗ್ಗಿ ಮೋಹನ್ ಅವರು ಕೊರಗ ಭಾಷೆಯ ಸೂಕ್ಷ್ಮ ಸ್ವರಗಳನ್ನು ವಿಶ್ಲೇಷಿಸಿದರು. ಭಾಷೆಯ ಕ್ಷೇತ್ರಾಧ್ಯಯನದ ಸಂದರ್ಭದಲ್ಲಿ ಅನುಸರಿಸಬೇಕಾದ ಅಂಶಗಳನ್ನು ವಿವರಿಸಿದರು. ಕೊರಗ ಭಾಷೆ ಮತ್ತು ಇತರ ಭಾರತದ ಮತ್ತು ಜಗತ್ತಿನ ಬುಡಕಟ್ಟು ಭಾಷೆಗಳ ಕುರಿತ ತೌಲನಿಕ ಅಧ್ಯಯನದ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಮಾಹೆಯ ಭಾಷಾ ವಿಭಾಗದ ಮುಖ್ಯಸ್ಥ ರಾಹುಲ್ ಪುಟ್ಟಿ ಪ್ರಸ್ತಾವಿಸಿ, ಒಂದು ಭಾಷೆಯನ್ನು ಅದು ಬಳಕೆಯಲ್ಲಿರುವ ಪ್ರದೇಶದಲ್ಲಿ ಅಧ್ಯಯನ ಮಾಡುವ ಆವಶ್ಯಕತೆಯನ್ನು ವಿವರಿಸಿದರು.ಮಾಹೆಯ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಕೇಂದ್ರದ ಸಂಯೋಜಕ ಡಾ. ಪೃಥ್ವಿರಾಜ್ ಕವತ್ತಾರು, ಕ್ಷೇತ್ರಾಧ್ಯಯನದ ಕಲಾಪವನ್ನು ಸಂಯೋಜಿಸಿದರು.
ಕೊರಗ ಸಮುದಾಯದ ಸಂಘಟಕರಾದ ಸುಂದರ ಮಂಗಳೂರು, ಕುಡುಪ ಉಡುಪಿ ಸಹಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಭಾಷಾ ವಿಭಾಗದ ಪ್ರಾಧ್ಯಾಪಕ ಡಾ. ಅರವಿಂದ ಭಟ್, ಆದಿತ್ಯ ದಿವ್ಯಾ ಸಿಂಗ್, ಕ್ರಿಸ್ಟಾಫ್ ಕ್ರೋಝಿಕ್, ಶ್ವೇತಾ ದೇಶಪಾಂಡೆ, ಅಮೃತರಾಜ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.