ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ತೀರ್ಮಾನವಾದಂತೆ ಟೆಂಡರ್ ಪ್ರಕ್ರಿಯೇ ಬದಲು ವ್ಯಾಪಾರ ಪರವಾನಗಿ ನೀಡಲು ಉಪಸಮಿತಿಯೊಂದನ್ನು ರಚಿಸಲಾಗಿದ್ದು, ಆದರ ತೀರ್ಮಾನದಂತೆ ಅಂಗಡಿ ವ್ಯಾಪಾರ ನೀಡಲಾಗುತ್ತದೆ ಎಂದು ಗ್ರೇಡ್ 1 ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಸೋಮವಾರ ಸಂಜೆ ದಿಢೀರ್ ಆಗಿ ಹಸಿಮೀನು ವ್ಯಾಪಾರಿಗಳು ತಮ್ಮಿಂದ ಹಣ ಕಟ್ಟಿಸಿಕೊಂಡರು. ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಹಾಗೂ ಪರವಾನಗಿಯನ್ನು ನೀಡದಿರುವ ಬಗ್ಗೆ ಪ್ರತಿಭಟನೆ ನಡೆಸಿದ ಬಗ್ಗೆ ಅಧ್ಯಕ್ಷ ಸುನಿಲ್ ಕುಮಾರ್ ಸ್ಪಷ್ಟಪಡಿಸಿದರು. ಸರ್ಕಾರದ ನಿಯಮದಂತೆ 4 ಹಸಿಮೀನು ವ್ಯಾಪಾರ ಮಳಿಗೆಗಳಿಗೆ ಪರವಾನಗಿಗೆ ಅವಕಾಶವಿದ್ದು, ಈಗಾಗಲೇ 2 ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ ಸ್ಥಳೀಯವಾಗಿ ಗೊಂದಲಗಳು ತಾಂತ್ರಿಕ ದೋಷಗಳು ಇರುವ ಹಿನ್ನಲೆಯಲ್ಲಿ ವಾರ್ಡ್ ಸದಸ್ಯರೊಬ್ಬರು ಪರಿಶೀಲನೆ ನಡೆಸಿ ನೀಡಿ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಅವರು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಪ್ರತ್ರಿಕ್ರಿಯಿಸಿ ಉಪಸಮಿತಿ ಮಾಡಿದ ಬೈಲಾ ಪ್ರಕಾರ ಈ ಹಿಂದೆ ಪಂಚಾಯಿತಿ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದವರು ಪರಿಗಣಿಸಬೇಕು ಎಂಬ ಹಿನ್ನಲೆಯಲ್ಲಿ ಮತ್ತು ಅಭಿವೃದ್ಧಿ ಶುಲ್ಕ ಸೇರಿ ಕೋಳಿ ಮಾಂಸ ಮಾರುಕಟ್ಟೆಯ ಒಂದು ಕಾಲು ಲಕ್ಷ ಕುರಿ ಮಾರುಕಟ್ಟೆಯ 75 ಸಾವಿರ 4 ಹಸಿಮೀನು ಮಾರಾಟ ಮಳಿಗೆಗಳಿಗೆ ತಲಾ ಎರಡುವರೆ ಲಕ್ಷ ನಿಗದಿಗೊಳಿಸಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಜಿಎಸ್ಟಿ ಸೇರಿದೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಗೊಂದಲ ಸೃಷ್ಟಿಯಾಗಿದೆ. ಅದನ್ನು ಪರಿಹಾರಿಸಲಾಗುವುದು ಎಂದು ಅವರು ತಿಳಿಸಿದರು.ಪ್ರತಿಭಟನೆ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಎ.ಉಸ್ಮಾನ್ ಮಾತನಾಡಿ, ಇರ್ವರು ವ್ಯಾಪಾರಿಗಳು ತಲಾ ಎರಡುವರೆ ಲಕ್ಷ ರು. ಹಣ ಪಾವತಿಸಿದ್ದು 20 ರಿಂದ 25 ದಿನಗಳು ಕಳೆದರೂ ಮೂಲಭೂತ ಸೌಕರ್ಯ ಹಾಗೂ ನಿರಾಕ್ಷೇಪಣಾ ಪತ್ರ ನೀಡದೆ ಸತಾಯಿಸುತ್ತಿದ್ದಾರೆ. ಅಧ್ಯಕ್ಷ ಮತ್ತು ಪಿಡಿಓ ಅವರನ್ನು ಕೇಳಿದರೆ ಬೇರೆ ಕೆಲವು ಸದಸ್ಯರ ಮೇಲೆ ಆರೋಪ ಮಾಡುತ್ತಿದ್ದು ಆ ಸದಸ್ಯರ ಹೆಸರು ಬಹಿರಂಗ ಪಡಿಸಲೆಂದು ಉಸ್ಮಾನ್ ಆಗ್ರಹಿಸಿದರು. ಕೆಲವು ಸದಸ್ಯರು ಸುಂಟಿಕೊಪ್ಪ ಅಭಿವೃದ್ಧಿಯಲ್ಲಿ ಅಡ್ಡಿಯಾಗಿದ್ದು ಸುಂಟಿಕೊಪ್ಪ ಜನತೆ ಎಚ್ಚರವಾಗಿಬೇಕೆಂದು ಅವರು ಹೇಳಿದರು. ವ್ಯಾಪಾರ ಪರವಾನಗಿ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಗೊಳಿಸಬೇಕು ಎಂದು ಉಸ್ಮಾನ್ ಆಗ್ರಹಿಸಿದರು.