ಸಾರಾಂಶ
ಶಿಕ್ಷಣದಿಂದ ವಂಚಿತರಾದ ಹಾಗೂ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ ಹೆಣ್ಣು ಮಕ್ಕಳಿಗೆ ಅತಿ ಕಡಿಮೆ ಖರ್ಚಿನಲ್ಲಿ ಕೌಶಲ್ಯ ಕಲಿಸಿ ಆತ್ಮ ವಿಶ್ವಾಸ ತುಂಬಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ
ಧಾರವಾಡ: ಮಹಿಳೆಯರು ಕೌಶಲ್ಯ ಕಲಿತು ಆತ್ಮವಿಶ್ವಾಸದಿಂದ ಮುನ್ನುಗ್ಗಿದಲ್ಲಿ ಯಶಸ್ಸು ಸಿಗಲಿದೆ ಎಂದು ಹುಬ್ಬಳ್ಳಿಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶೃತಿ ಭೂಸನೂರಮಠ ಹೇಳಿದರು.
ಇಲ್ಲಿಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಶಾರದಾ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಮಹಿಳಾ ಸಬಲೀಕರಣದ ಭಾಗವಾಗಿ ಮೂರು ತಿಂಗಳು ಬ್ಯೂಟಿಷಿಯನ್ ಹಾಗೂ ಫ್ಯಾಷನ್ ಡಿಸೈನ್ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದ ಅವರು, ಮಹಿಳೆಯರಿಗೆ ಕಲಿಯುವ ಇಚ್ಛೆ ಇದ್ದರೂ ಈ ರೀತಿಯ ಅವಕಾಶಗಳು ಲಭ್ಯವಿರಲಿಲ್ಲ. ಶಿಕ್ಷಣದಿಂದ ವಂಚಿತರಾದ ಹಾಗೂ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ ಹೆಣ್ಣು ಮಕ್ಕಳಿಗೆ ಅತಿ ಕಡಿಮೆ ಖರ್ಚಿನಲ್ಲಿ ಕೌಶಲ್ಯ ಕಲಿಸಿ ಆತ್ಮ ವಿಶ್ವಾಸ ತುಂಬಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.ಸಮುದಾಯ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ತಾಮಗಾಳೆ, ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ ವೆಂಬುದು ಮರದ ಬೇರು ಇದ್ದಂತೆ. ಬೇರು ಆಳವಾಗಿ ಭೂಮಿಯಲ್ಲಿ ಇಳಿದಾಗ ಮರ ಸದೃಢವಾಗಿ ಇರಲು ಸಾಧ್ಯ.ಹಾಗೆಯೇ ನಾವು ಕಲಿತ ಕೌಶಲ್ಯದಿಂದ ಆತ್ಮವಿಶ್ವಾಸದ ಬೇರನ್ನು ಬಲಿಷ್ಠವಾಗಿಸಿಕೊಂಡು ಜೀವನ ಕಟ್ಟಿಕೊಳ್ಳೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನಿರ್ವಹಣಾ ಸಮಿತಿ ಸದಸ್ಯ ಡಾ. ವಿ.ಎಂ. ದೇಶಪಾಂಡೆ ಮಾತನಾಡಿದರು. ತರಬೇತಿ ಪೂರೈಸಿದ 24 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.