ಸಾರಾಂಶ
ಹುಬ್ಬಳ್ಳಿ: ಕೃಷಿ ಕ್ಷೇತ್ರದ ನಂತರ ಡೆವಲಪರ್ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಒದಗಿಸುತ್ತದೆ. ಕ್ಷೇತ್ರದಲ್ಲಿ ಬರುವ ಸವಾಲು ಎದುರಿಸಲು ಕಲಿಯಬೇಕು. ಸವಾಲುಗಳನ್ನು ಎದುರಿಸಲು ಕಲಿತರೆ ಉದ್ಯಮ ಯಶಸ್ಸು ಆಗುತ್ತದೆ ಎಂದು ಕ್ರೆಡೈ ರಾಷ್ಟ್ರೀಯ ಅಧ್ಯಕ್ಷ ಗುಮ್ಮಿರಾಮ ರೆಡ್ಡಿ ಹೇಳಿದರು.
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಕ್ರೆಡೈ ಹುಬ್ಬಳ್ಳಿ ಧಾರವಾಡ ವರ್ಕಿಂಗ್ ಕೋರ್ ಕಮೀಟಿ ೨೦೨೫-೨೭ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಟ್ಟಡ ನಿರ್ಮಾಣ ಹಂತದಲ್ಲಿ ನಿಯಮಗಳನ್ನು ಪಾಲಿಸುವುದು ಮುಖ್ಯವಾದದ್ದು.ನಿಯಮ ಪಾಲಿಸದೇ ಮುಂದುವರಿದರೆ ಕೆಟ್ಟ ಹೆಸರು ಬರುವುದು ಖಚಿತ. ಹಾಗಾಗಿ, ಎಚ್ಚರಿಕೆಯಿಂದ ಕೆಲಸ ಮಾಡುವುದು ಮುಖ್ಯ ಎಂದು ಸಲಹೆ ನೀಡಿದರು.
ಕೈಗಾರಿಕೋದ್ಯಮಿಗಳಂತೆ ಡೆವಲಪರ್ಗಳಿಗೂ ಕೆಂಪುಹಾಸಿಗೆ ಗೌರವ ಸಿಗಬೇಕು. ಇದಕ್ಕಾಗಿ ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.ಒತ್ತಡದ ಕೆಲಸದ ಜತೆಗೆ ವೈಯಕ್ತಿಕ ಕಾಳಜಿಯೂ ಮುಖ್ಯ.ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿ ಹೊಸ ಹೊಸ ವಿಚಾರಗಳು ಬರುತ್ತವೆ. ಕೆಲಸ ಮತ್ತಷ್ಟು ಗುಣಮಟ್ಟದ್ದಾಗುತ್ತದೆ ಎಂದು ತಿಳಿಸಿದರು.
ಕ್ರೆಡೈ ಹುಬ್ಬಳ್ಳಿ ಧಾರವಾಡ ೨೦೨೫-೨೭ನೇ ಸಾಲಿನ ವರ್ಕಿಂಗ್ ಕಮೀಟಿ ಅಧ್ಯಕ್ಷರಾಗಿ,ಮಾರ್ವೆಲ್ನ ನಿರ್ದೇಶಕ ಗುರುರಾಜ ಅಣ್ಣಿಗೇರಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಡೆವೆಲಪರ್ಗಳ ಪಾತ್ರ ಮಹತ್ವದ್ದಾಗಿದೆ. ಕ್ರೆಡೈ ಭಾರತದ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.ಕ್ರೆಡೈ ಸಾಮಾಜಿಕ ಕ್ಷೇತ್ರದಲ್ಲಿಯೂ ಹಲವಾರು ಕಾರ್ಯ ಕೈಗೊಂಡಿದೆ. ಹುಬ್ಬಳ್ಳಿ ಧಾರವಾಡದ ಕೆರೆ,ಉದ್ಯಾನಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಅವಳಿ ನಗರದಲ್ಲಿ ೨೫ ಸಾವಿರ ವಿವಿಧ ಸಸಿಗಳನ್ನು ನೀಡಲಾಗಿದೆ ಎಂದರು.
ನಿರ್ಗಮಿತ ಅಧ್ಯಕ್ಷ ಹಾಗೂ ಪ್ರಸಕ್ತ ಸಾಲಿನ ಸಲಹೆಗಾರ ಪ್ರದೀಪ ರಾಯ್ಕರ ಮಾತನಾಡಿ, ಕ್ರೆಡೈ ಮುಂಬರುವ ಅವಧಿಯಲ್ಲಿ ಹುಬ್ಬಳ್ಳಿ ಧಾರವಾಡಕ್ಕೆ ಕಾಯಂ ಕಚೇರಿ ಸಿಗುವಂತಾಗಲಿ ಎಂದು ಹಾರೈಸಿದರು.ಅಧ್ಯಕ್ಷ ಭಾಸ್ಕರ ನಾಗೇಂದ್ರ ಮಾತನಾಡಿ, ವೈಯಕ್ತಿಕ ಅಭಿವೃದ್ಧಿ ಜತೆಗೆ ಒಟ್ಟಾರೆ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪದಾಧಿಕಾರಿಗಳ ಆಯ್ಕೆಗುರುರಾಜ ಅಣ್ಣಿಗೇರಿ ಅಧ್ಯಕ್ಷರಾಗಿ, ಸಂಜಯ ಕೊಠಾರಿ ಚೇರ್ಮನ್, ಅಮೃತ ಮೆಹರವಾಡೆ ಚುನಾಯಿತ ಅಧ್ಯಕ್ಷ, ಸುರಜ ಅಳವಂಡಿ, ಶಿವಣ್ಣ ಪಾಟೀಲ ಉಪಾಧ್ಯಕ್ಷರಾಗಿ, ಸತೀಶ ಮುನವಳ್ಳಿ ಕಾರ್ಯದರ್ಶಿಯಾಗಿ, ಅಬ್ಬಾಸ ಸಂಶಿ, ಶ್ರೀಪಾದ ಶೇಜವಾಡಕರ ಜಂಟಿ ಕಾರ್ಯದರ್ಶಿಯಾಗಿ, ಬ್ರಾನ್ ಡಿಸೋಜ ಖಜಾಂಚಿಯಾಗಿ, ಆಕಾಶ ಹಬೀಬ ಜಂಟಿ ಖಜಾಂಚಿಯಾಗಿ, ಜಯರಾಮ ಶೆಟ್ಟಿ ಮೊಹಮ್ಮದ್ ಇಸ್ಮಾಯಿಲ್ ಸಂಶಿ ಸದಸ್ಯರಾಗಿ, ಪ್ರದೀಪ ರಾಯ್ಕರ, ಸಾಜಿದ್ ಪಾರಶ್ ಸಲಹೆಗಾರರಾಗಿ ಅಧಿಕಾರ ಸ್ವೀಕರಿಸಿದರು.