ಸಾರಾಂಶ
ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 15ನೇ ಶಾಖೆ ಕಲ್ಲಡ್ಕದಲ್ಲಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಬಂಟ್ವಾಳದಕ್ಷಿಣ ಕನ್ನಡ ಜಿಲ್ಲೆಯ ಜನರ ಸಹಕಾರಿ ಮನೋಭಾವವೇ ಜಿಲ್ಲೆಯಲ್ಲಿ ಸಹಕಾರಿ ರಂಗದ ಯಶಸ್ಸಿಗೆ ಕಾರಣ ಎಂದು ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 15ನೇ ಶಾಖೆಯನ್ನು ಕಲ್ಲಡ್ಕದ ಪ್ರೀತಿ ಟವರ್ಸ್ನಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ತುಳುನಾಡಿನ ಮಣ್ಣಿನ ಗುಣ, ಇಲ್ಲಿನ ಸಂಸ್ಕೃತಿ ಅತ್ಯಂತ ಶ್ರೇಷ್ಠವಾಗಿದೆ. ನಮ್ಮ ಊರಿನ ಸಾವಿರಾರು ಮಂದಿ ಬೇರೆ ರಾಜ್ಯಕ್ಕೆ ತೆರಳಿ, ಭಾಷೆ ಗೊತ್ತಿಲ್ಲದಿದ್ದರೂ ಆ ಊರಲ್ಲಿ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಪಡೆದಿದ್ದರೆ, ಅದಕ್ಕೆ ಈ ನೆಲದ ಸಂಸ್ಕೃತಿಯೇ ಕಾರಣ ಎಂದರು.
ಸವಣೂರು ಕೆ.ಸೀತಾರಾಮ ರೈಯವರು ಆದರ್ಶ ಸಂಸ್ಥೆಯನ್ನು ಆದರ್ಶಯುತವಾಗಿ ಬೆಳೆಸುತ್ತಿದ್ದಾರೆ. ಕಲ್ಲಡ್ಕದಲ್ಲಿ ಸಂಸ್ಥೆಯ 15ನೇ ಶಾಖೆಯನ್ನು ಆರಂಭಿಸಿದ್ದಾರೆ. ಇವರ ನೇತೃತ್ವದಲ್ಲಿ ಸಂಸ್ಥೆಯು ಮತ್ತಷ್ಟು ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಕಂಪ್ಯೂಟರ್ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿ, ಸೀತಾರಾಮ ರೈಯವರು ಕಳೆದ 35 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅನುಭವಿಯಾಗಿದ್ದಾರೆ. ಸಹಕಾರ ಸಂಸ್ಥೆಗಳು ಜನರಿಗೆ ಸುಲಭವಾಗಿ ಆರ್ಥಿಕ ವ್ಯವಹಾರವನ್ನು ಕೊಡುವುದರಿಂದ ಜನರಿಗೆ ಸಹಕಾರ ಸಂಸ್ಥೆಗಳ ಮೇಲೆ ನಂಬಿಕೆ ಜಾಸ್ತಿಯಾಗಿದೆ. ಕಲ್ಲಡ್ಕದಲ್ಲಿ ಆದರ್ಶ ಸಹಕಾರ ಸಂಸ್ಥೆ ಉಜ್ವಲವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.ಸಂಘ ಅಧ್ಯಕ್ಷ, ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನಮ್ಮ ಸಹಕಾರಿ ಸಂಘವು 15 ಶಾಖೆಗಳನ್ನು ಹೊಂದಿದ್ದು, ಮುಂದೆ ಮಂಗಳೂರಿನ ಪಡೀಲ್ನಲ್ಲಿ ಶಾಖೆಯನ್ನು ತೆರೆಯಲಿದ್ದೇವೆ. ಸಂಸ್ಥೆಯ ಬೆಳ್ಳಿಹಬ್ಬದ ಅಂಗವಾಗಿ ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ, ಶಾಖೆ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಉದ್ದೇಶದಿಂದ ಸವಣೂರಿನಲ್ಲಿ 0.75 ಸೆಂಟ್ಸ್ ಪರಿವರ್ತಿತ ಭೂಮಿಯನ್ನು ಖರೀದಿಸಿ, ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿಹಂತದಲ್ಲಿದೆ ಎಂದರು.
ಉದ್ಯಮಿ ಹಾಜಿ ಸುಲೈಮಾನ್ ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿದರು. ಕೃಷಿಕ ಹಾಗೂ ಆದರ್ಶ ಸಹಕಾರ ಸಂಘದ ನಿರ್ದೇಶಕ ಬಿ.ಮಹಾಬಲ ರೈ ಬೋಳಂತೂರು ಅತಿಥಿಯಾಗಿ ಭಾಗವಹಿಸಿದರು. ಸಂಘ ಉಪಾಧ್ಯಕ್ಷ ಎನ್.ಸುಂದರ ರೈ, ನಿರ್ದೇಶಕರಾದ ರವೀಂದ್ರನಾಥ ಶೆಟ್ಟಿ ಕೇನ್ಯ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಮಂಗಳೂರು, ಜಯಪ್ರಕಾಶ್ ರೈ ಸುಳ್ಯ, ಎಸ್.ಎಂ.ಬಾಪು ಸಾಹೇಬ್ ಸುಳ್ಯ, ವಿ.ವಿ.ನಾರಾಯಣ ಭಟ್ ನರಿಮೊಗರು, ಮಹಾದೇವ ಎಂ. ಮಂಗಳೂರು, ಅಶ್ವಿನ್ ಎಲ್. ಶೆಟ್ಟಿ ಸವಣೂರು, ಎನ್.ರಾಮಯ್ಯ ರೈ ತಿಂಗಳಾಡಿ, ಪೂರ್ಣಿಮಾ ಎಸ್. ಆಳ್ವ ಮಂಗಳೂರು, ಯಮುನಾ ಎಸ್. ರೈ ಗುತ್ತುಪಾಲ್, ಸಂಘದ ಮಹಾಪ್ರಬಂಧಕ ವಸಂತ್ ಜಾಲಾಡಿ, ಎಜಿಎಂ ಸುನಾದರಾಜ್ ಶೆಟ್ಟಿ, ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಭರತ್ ರಾಜ್ ಕೆ. ಹಾಗೂ ಆದರ್ಶ ಸಹಕಾರ ಸಂಸ್ಥೆಯ ಎಲ್ಲ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಅದರ್ಶ ಸಹಕಾರ ಸಂಸ್ಥೆಯ ಪಂಜ ಶಾಖೆಯ ವ್ಯವಸ್ಥಾಪಕಿ ರಕ್ಷಾ ಪ್ರಾರ್ಥಿಸಿದರು. ಆದರ್ಶ ಸಹಕಾರ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು.ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ, ಶಾಂತರಾಮ್ ಶೆಟ್ಟಿ ಬೋಳಂತೂರು, ಸುಧಾಕರ್ ರೈ ಮೈಸೂರು, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ್ ರೈ ಬೋಳಂತೂರು, ಗಂಗಾಧರ್ ರೈ ಪಡ್ಡಂಬೈಲು, ಬಾಲಕೃಷ್ಣ ಆಳ್ವ ಸಹಿತ ನೂರಾರು ಮಂದಿ ಆಗಮಿಸಿ, ಸಂಸ್ಥೆಗೆ ಶುಭಕೋರಿದರು.