ಸಾರಾಂಶ
ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ಕಾಲು ಎಳೆಯುವುದರಲ್ಲಿಯೇ ಮುಂದಾಗಿದ್ದಾರೆಯೇ ಹೊರತು ಎಲ್ಲರೂ ಒಟ್ಟಾಗಿ ಸಮಾಜದ ಅಭಿವೃದ್ಧಿಯತ್ತ ಮುನ್ನಡೆಯದೇ ಇರುವುದು ಬೇಸರ ತರುತ್ತದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಯುವಕರು ಉತ್ತಮರ ವಿಚಾರಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಒಟ್ಟುಗೂಡಿ ವೀರಶೈವ ಸೇವಾ ಸಂಘಟನೆಯನ್ನು ಕಟ್ಟಿದ್ದು, ಮುಂದಿನ ದಿನಗಳಲ್ಲಿ ಇದು ಯಶಸ್ವಿಯಾಗಿ ಮುಂದುವರೆಯಲಿ, ನಾವೆಲ್ಲರೂ ಸಹ ಜೊತೆಯಾಗಿ ಸಾಗೋಣ ಎಂದು ತೆವಡಿಹಳ್ಳಿ ಮಠದ ಚನ್ನಬಸವೇಶ್ವರ ಸ್ವಾಮೀಜಿ ತಿಳಿಸಿದರು.ಗುಬ್ಬಿ ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಕಟ್ಟಡದಲ್ಲಿ ಗುಬ್ಬಿ ನಗರ ವೀರಶೈವ ಯುವ ಸೇವಾ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜವನ್ನು ಸಂಘಟನೆ ಮಾಡುವ ಮೂಲಕ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ವಿಜಯ ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಸಮಾಜದ ಮುಖಂಡ ಎಸ್. ಪಿ. ದಿಲೀಪ್ ಕುಮಾರ್ ಮಾತನಾಡಿ, ನಮ್ಮ ಸಮಾಜದಲ್ಲಿ ಒಬ್ಬರನ್ನು ಒಬ್ಬರು ಕಾಲು ಎಳೆಯುವುದರಲ್ಲಿಯೇ ಮುಂದಾಗಿದ್ದಾರೆಯೇ ಹೊರತು ಎಲ್ಲರೂ ಒಟ್ಟಾಗಿ ಸಮಾಜದ ಅಭಿವೃದ್ಧಿಯತ್ತ ಮುನ್ನಡೆಯದೇ ಇರುವುದು ಬೇಸರ ತರುತ್ತದೆ. ಗುಬ್ಬಿ ಪಟ್ಟಣದಲ್ಲಿ ಬಹಳ ವಿಶಾಲ ಜಾಗವಿದ್ದು ಇಲ್ಲಿ ಕಲ್ಯಾಣ ಮಂಟಪ ಸೇರಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅದರ ಮೂಲಕ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಗಂಗಾಧರ್, ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ್, ನೂತನ ವೀರಶೈವ ಯುವ ಸೇವಾ ಸಮಿತಿಯ ಅಧ್ಯಕ್ಷ ಅರ್ಜುನ್, ಉಪಾಧ್ಯಕ್ಷ ನಾಗರಾಜು ವಿನಯ್, ಕಾರ್ಯದರ್ಶಿ ನಿರಂಜನ್, ಸಹ ಕಾರ್ಯದರ್ಶಿ ಪ್ರೀತಮ್, ಖಜಾಂಚಿ ನವೀನ್ ಆರಾಧ್ಯ ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಿದ್ದರು.