ಸಾಧನೆಯ ಗುರಿ ಇದ್ದರೆ ಯಶಸ್ಸು ಸಾಧ್ಯ: ಆನಂದ್ ಸಿ. ಕುಂದರ್

| Published : Nov 16 2024, 12:33 AM IST

ಸಾರಾಂಶ

ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ - ೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಗೀತಾನಂದ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಪ್ರತಿಭಾನ್ವೇಷಣೆ, ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ವಿದ್ಯಾರ್ಥಿಗಳಲ್ಲಿ ಸಾಧನೆಗೈಯುವ ಗುರಿ ಇರಬೇಕು, ಆಗ ಮಾತ್ರ ಯಶಸ್ಸು ಒಲಿಯುತ್ತದೆ ಎಂದು ಶೈಕ್ಷಣಿಕ ಪ್ರೋತ್ಸಾಹಕ, ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.

ಅವರು ಇಲ್ಲಿನ ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ - ೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಗೀತಾನಂದ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಪ್ರತಿಭಾನ್ವೇಷಣೆ, ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ, ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಂದೆತಾಯಿಗೆ ಹೊರೆಯಾಗದಂತೆ ಶಿಕ್ಷಣ ಪಡೆದು, ಸಾಮಾಜಿಕ ಜವಾಬ್ದಾರಿ ಅರಿತು ಸರ್ವಕ್ಷೇತ್ರದಲ್ಲಿ ಗುರುತಿಸುವಂತಹ ಸಾಧನೆ ಮಾಡಿ ಎಂದರಲ್ಲದೇ, ಶೈಕ್ಷಣಿಕ ಕ್ಷೇತ್ರದಲ್ಲಿ ಪಡುಕರೆ ಎಂಬ ಗ್ರಾಮೀಣ ಪರಿಸರ ಮುಂಚೂಣಿಯಲ್ಲಿದೆ. ಅಲ್ಲದೆ ಸಾಂಸ್ಕೃತಿಕವಾಗಿಯೂ ಬೆಳೆಯುತ್ತಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ನಡೆಸಲಾಯಿತು, ಗೀತಾನಂದ ಫೌಂಡೇಶನ್ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ರಾಜೇಂದ್ರ ಎಸ್. ನಾಯಕ ವಹಿಸಿದ್ದರು. ಅಭ್ಯಾಗತರಾಗಿ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ತಿಮ್ಮ ಪೂಜಾರಿ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಸುರೇಶ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಎಚ್. ಕುಂದರ್, ಐಕ್ಯೂಎಸಿ ಸಂಚಾಲಕ ಡಾ. ಸುಬ್ರಮಣ್ಯ ಎ., ವಿದ್ಯಾರ್ಥಿ ಸಂಘ ಅಧ್ಯಕ್ಷೆ ಪೂಜಾ, ಉಪಾಧ್ಯಕ್ಷೆ ದೀಕ್ಷಾ, ಪದಾಧಿಕಾರಿಗಳಾದ ಸಂಜನಾ ಕಾಮತ್, ಯಶಿಕ, ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಆಚಾರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಮಮತಾ ನಿರೂಪಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ. ಶಂಕರ ನಾಯ್ಕ ಬಿ. ವಂದಿಸಿದರು.