ಕ್ರೀಡೆ, ನ್ಯಾಯಾಂಗದಲ್ಲಿ ತುಡಿತ ಇದ್ದರೆ ಯಶಸ್ಸು: ಕಿರಣ್ ಗಂಗಣ್ಣನವರ್

| Published : Mar 04 2025, 12:36 AM IST

ಕ್ರೀಡೆ, ನ್ಯಾಯಾಂಗದಲ್ಲಿ ತುಡಿತ ಇದ್ದರೆ ಯಶಸ್ಸು: ಕಿರಣ್ ಗಂಗಣ್ಣನವರ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಂಜಿ‌ಎಂ ಕಾಲೇಜಿನ ಮೈದಾನದಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಭಾನುವಾರ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಎಂಜಿ‌ಎಂ ಕಾಲೇಜಿನ ಮೈದಾನದಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟ ಭಾನುವಾರ ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣನವರ್ ಮಾತನಾಡಿ, ಉಡುಪಿ ವಕೀಲರ ಸಂಘವು ನಿತ್ಯದ ಕಾರ್ಯಗಳೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕ್ರೀಡೆ ಹಾಗೂ ನ್ಯಾಯಾಂಗದಲ್ಲಿ ತುಡಿತ ಇದ್ದಾಗ, ಹೊಸ ವಿಚಾರಗಳು ಬರುತ್ತವೆ. ಅಂತಹ ಮನಸ್ಸುಗಳಿಂದ ಇಂತಹ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದರು.ಅನೇಕ ಕಡೆಗಳಲ್ಲಿ ಹಿರಿಯ ವಕೀಲರು ಗ್ರಂಥಾಲಯ, ಕೆಲವು ನ್ಯಾಯವಾದಿಗಳು ಕ್ರೀಡಾಂಗಣದಲ್ಲಿ ಸಮಯ ಕಳೆಯುತ್ತಾರೆ. ಅಂತೆಯೇ ವೈದ್ಯರು, ಎಂಜಿನಿಯರ್‌ಗಳು ಪ್ರತಿದಿನ ದೈಹಿಕ ಚಟುವಟಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಧೂಳು, ಬಿಸಿಲಿನಲ್ಲಿ ಆಟ ಆಡುವುದು ಒಂದು ದಿನದಲ್ಲಿ ಸಾಧ್ಯವಿಲ್ಲ. ಇದಕ್ಕಾಗಿ ದೈಹಿಕ ಹಾಗೂ ಮಾನಸಿಕ ತಯಾರಿ ಅಗತ್ಯ ಇದೆ ಎಂದು ಹೇಳಿದರು.

ಸಾಮಾನ್ಯವಾಗಿ ಹುದ್ದೆಯಿಂದ ವ್ಯಕ್ತಿಗೆ ಗೌರವ ದೊರಕುತ್ತದೆ. ಆದರೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮಾಡುವ ಕಾರ್ಯಗಳಿಂದ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರ ನಾಯಕತ್ವದ ತಂಡವು ಕ್ರೀಡಾಕೂಟವನ್ನು ಅದ್ಭುತವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಗಂಗಣ್ಣನವರ್ ಪ್ರಶಂಸೆ ವ್ಯಕ್ತಪಡಿಸಿದರು.ಮಂಗಳೂರು ವಕೀಲರ ಸಂಘ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಮಾತನಾಡಿ, ಕರಾವಳಿ ಭಾಗದಲ್ಲಿ ಹೈಕೋರ್ಟಿನ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕೆಂಬ ಬೇಡಿಕೆಗೆ ಉಡುಪಿ ವಕೀಲರ ಸಂಘ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ಬೇಡಿಕೆಯೂ ಹೋರಾಟ ಸ್ವರೂಪ ಪಡೆದುಕೊಳ್ಳಲಿದ್ದು, ಇದಕ್ಕೆ ಉಡುಪಿ ನ್ಯಾಯವಾದಿಗಳು ಹಾಗೂ ಸಂಘದ ಬೆಂಬಲವನ್ನು ಯಾಚಿಸಿದರು.ಪೋಕ್ಸೋ ವಿಶೇಷ ನ್ಯಾಯಾಲಯದ ಹೆಚ್ಚುವರಿ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ, ಎಂಐಟಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಮಲ್ಯ, ಉಡುಪಿ ವಕೀಲರ ಸಂಘ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.ಸಂಘ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.