ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಒತ್ತಡದ ಜೀವನದಲ್ಲಿ ದೇವರು, ಧರ್ಮದ ಮಾರ್ಗದಲ್ಲಿ ನಡೆದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯುವ ಜೊತೆಗೆ ಕೈ ಹಿಡಿದ ಕೆಲಸಗಳಲ್ಲಿ ಯಶಸ್ಸು ಹೊಂದಬಹುದು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.ದೊಡ್ಡರಸಿನಕೆರೆ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ಶ್ರೀಲಕ್ಷ್ಮೀ ದೇವಿ, ಶ್ರೀಮಹಾಗಣಪತಿ, ಶ್ರೀಮಸಣಕಮ್ಮ, ಶ್ರೀಮಡಿವಾಳ ಮಾಚಿದೇವರ ಪುನರ್ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ದೇವರಿಗೆ ಜಾತಿ ಇಲ್ಲ. ಭಕ್ತಿಯಿಂದ ಬೇಡಿದರೆ ಜಾತ್ಯಾತೀತವಾಗಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡುತ್ತಾನೆ. ದೇವರಿಗೆ ಭಕ್ತಿ ಮುಖ್ಯವೇ ಹೊರತು ಆಡಂಬರವಲ್ಲ ಎಂದರು.ಎಲ್ಲೆಂದರಲ್ಲಿ ದೇವಸ್ಥಾನ ಕಟ್ಟಲು ಸಾಧ್ಯವಿಲ್ಲ. ದೇವಸ್ಥಾನವನ್ನು ಕಟ್ಟುವಾಗ ಆ ಸ್ಥಳದ ಪುರಾತನ ಕಾಲದ ಮಹಿಮೆಯನ್ನು ತಿಳಿದು ದೇವಸ್ಥಾನವನ್ನು ಕಟ್ಟಿದ್ದಾರೆ. ಅವುಗಳಿಗೆ ಒಂದು ಇತಿಹಾಸವಿದೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಮಹಾಸಂಸ್ಥಾನ ಮಠದ ಶ್ರೀಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ನಮ್ಮ ತಂದೆ- ತಾಯಿಗಳು ಹಾಗೂ ಗುರು- ಹಿರಿಯರೇ ನಮಗೆ ಪ್ರತ್ಯಕ್ಷ ದೇವರಾಗಿರುವುದರಿಂದ ತಂದೆ- ತಾಯಿಗಳನ್ನು ಭಕ್ತಿ- ಭಾವದಿಂದ ಕಂಡು ಗೌರವಿಸುವ ಮನೋಭಾವನೆ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.ಇದೇ ವೇಳೆ ಶ್ರೀಬಸವ ಮಾಚಿದೇವ ಸ್ವಾಮೀಜಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಲಕ್ಷ್ಮೀದೇವಿಗೆ ಪಂಚಾಮೃತಾಭಿಷೇಕ, ಪೂಜೆ, ಪ್ರಧಾನ ಹೋಮ, ಕಳಸಾಭಿಷೇಕ ಸಹಿತ ವಾದ್ಯ ಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ ಬಸವಪ್ಪ, ಶ್ರೀಸಣ್ಣಕ್ಕಿರಾಯಸ್ವಾಮಿ ಬಸವಪ್ಪಗಳು ಭಾಗವಹಿಸಿದ್ದವು. ಬಸವಪ್ಪನವರ ಸಮ್ಮುಖದಲ್ಲಿ ರಾಶಿಪೂಜೆ ನಂತರ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಜರುಗಿತು.ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಡಿ.ಎಂ.ಮಂಚೇಗೌಡ, ಚಿಕ್ಕಹುಚ್ಚೇಗೌಡ, ಪ್ರದೀಪ್, ಡಿ.ಕೆ.ಆನಂದ್, ಡಿ.ಕೆ.ಲಿಂಗರಾಜು, ಡಿ.ಬಿ.ಬೋರಲಿಂಗ, ಡಿ.ಬಿ.ಶಿವಣ್ಣ, ಚಂದ್ರಶೇಖರ್, ಮಾದರಹಳ್ಳಿ ಸಿದ್ದಶೆಟ್ಟಿ, ಶಿವಾನಂದ್, ಶ್ರೀನಿವಾಸ್, ಸಿದ್ದರಾಜು, ಲಿಂಗಶೆಟ್ಟಿ ಸೇರಿ ಹಲವರಿದ್ದರು.