ಹೊಸದುರ್ಗ ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಯಾವುದೇ ಕೆಲಸದಲ್ಲಾಗಲಿ ಅತ್ಯಂತ ಪ್ರಾಮಾಣಿಕತೆಯಿಂದ ಶ್ರದ್ಧೆಯಿಟ್ಟು ಭಗೀರಥ ಪ್ರಯತ್ನ ಮಾಡಿದಾಗ ಯಶಸ್ಸು ಕಾಣಬಹುದು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊಂಡಾಪುರ ಮಂಜುನಾಥ್ ತಿಳಿಸಿದರು.

ಪಟ್ಟಣದ ಬಿಜೆಪಿ ಹೊಸದುರ್ಗ ಮಂಡಲದಿಂದ ನಡೆದ ಶ್ರೀ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗೀರಥ ಮಹರ್ಷಿಗಳು ತಮ್ಮ ಅವಿರತ ಶ್ರಮದಿಂದ ಶಿವನನ್ನು ವರಿಸಿ ಭೂಮಿಗೆ ಗಂಗೆಯನ್ನು ತಂದು ಪಶುಪಕ್ಷಿ, ಪ್ರಾಣಿ ಸೇರಿದಂತೆ ಮಾನವ ಸಂಕುಲಕ್ಕೆ ಗಂಗೆಯನ್ನು ನೀಡಿದ ಪರಿಣಾಮ ಇಂದು ಪ್ರಪಂಚದಲ್ಲಿ ಮನುಜ ಕುಲ ನೀರನ್ನು ಸೇವಿಸಿ ಬದುಕುತ್ತಿದೆ ಎಂದರು.

ತಾಲೂಕಿನ ಬ್ರಹ್ಮ ವಿದ್ಯಾನಗರದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯವರ ನೇತೃತ್ವದಲ್ಲಿ ದೇಶಾದ್ಯಂತ ಉಪ್ಪಾರ ಸಮುದಾಯ ಸಂಘಟನೆಗೊಳ್ಳುತ್ತಿದ್ದು ಪೂಜ್ಯ ಭಗೀರಥ ಸ್ವಾಮೀಜಿಯವರು ವರ್ಷವಿಡೀ ಸಮುದಾಯದ ಸಂಘಟನೆಗಾಗಿ ನಾಡಿನಲ್ಲೇ ಸಂಚರಿಸಿ ಶಿಕ್ಷಣ ಸಾಮಾಜಿಕ ಕ್ರಾಂತಿ ಮಾಡುವುದರ ಮೂಲಕ ಭಗೀರಥ ಸಮುದಾಯಕ್ಕೆ ಕಳಶಪ್ರಾಯವಾಗಿ ಆದರ್ಶವನ್ನು ಮೆರೆಯುತ್ತಿದ್ದಾರೆ ಎಂದರು.

ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಹೇರೂರು ಮಂಜುನಾಥ್‌ ಮಾತನಾಡಿ, ಭಗೀರಥ ಸಮುದಾಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತುಂಬಾ ಹಿಂದೆ ಉಳಿದಿದ್ದು ಉಪ್ಪಾರ ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಯುತ ನೈತಿಕ ಶಿಕ್ಷಣ ಕೊಡಿಸುವುದರ ಮುಖಾಂತರ ಆರ್ಥಿಕ ಪ್ರಗತಿ ಕಾಣಬೇಕಾಗಿದೆ. ಬಿಜೆಪಿಯಲ್ಲಿ ಉಪ್ಪಾರ ಸಮುದಾಯದ ಯುವಕರು ತೊಡಗಿಸಿಕೊಂಡು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಉಪ್ಪಾರ ಸಮುದಾಯದ ಮತಗಳು ಬೇಕಾಗಿದ್ದು ಉಪ್ಪಾರರ ಅಭಿವೃದ್ಧಿಗೆ ಬಿಜೆಪಿ ಮುಂದಿನ ದಿನಗಳಲ್ಲಿ ಕೈಜೋಡಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಅಣ್ಣಪ್ಪಸ್ವಾಮಿ, ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಎಸ್.ಕಲ್ಮಠ, ಜಿಲ್ಲಾ ಉಪಾಧ್ಯಕ್ಷ ರವಿಕುಮಾರ್, ಮಾವಿನಕಟ್ಟೆ ಗುರುಸ್ವಾಮಿ, ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಬೋಕಿಕೆರೆ ನಾಗರಾಜ್, ಚಿತ್ತಪ್ಪ, ಮಂಡಲ ಉಪಾಧ್ಯಕ್ಷ ಲಿಂಗರಾಜು ಕಾರ್ಯದರ್ಶಿ ಜಗದೀಶ್, ಮತ್ತೋಡು ರಾಮಪ್ಪ, ಕೊಂಡಾಪುರ ವಿನಯ್ ರಾಜು, ಚಂದ್ರಪ್ಪ, ಪಾಚಿ, ಹಾಗೂ ಪದಾಧಿಕಾರಿಗಳು ಪಕ್ಷದ ಮುಖಂಡರು ಕಾರ್ಯಕರ್ತರು ಉಪ್ಪಾರ ಸಮಾಜದ ಬಂಧುಗಳು ಉಪಸ್ಥಿತರಿದ್ದರು.