ಸಾರಾಂಶ
ಚಿತ್ರದುರ್ಗ: ಪ್ರಜಾಪ್ರಭುತ್ವದ ಯಶಸ್ವಿಗೆ ಯುವ ಮತದಾರರ ಪಾತ್ರ ಪ್ರಮುಖವಾದುದು. ಪ್ರತಿಯೊಬ್ಬ ಯುವ ಮತದಾರರು ಮತದಾನದಿಂದ ವಂಚಿತರಾಗಬಾರದು. ಪ್ರಜಾಪ್ರಭುತ್ವದ ಯಶಸ್ಸು ಯುವ ಮತದಾರರ ಕೈಯಲ್ಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ: ಪ್ರಜಾಪ್ರಭುತ್ವದ ಯಶಸ್ವಿಗೆ ಯುವ ಮತದಾರರ ಪಾತ್ರ ಪ್ರಮುಖವಾದುದು. ಪ್ರತಿಯೊಬ್ಬ ಯುವ ಮತದಾರರು ಮತದಾನದಿಂದ ವಂಚಿತರಾಗಬಾರದು. ಪ್ರಜಾಪ್ರಭುತ್ವದ ಯಶಸ್ಸು ಯುವ ಮತದಾರರ ಕೈಯಲ್ಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಹೇಳಿದರು. ನಗರದ ಗಾರೆಹಟ್ಟಿ ಬೃಹನ್ಮಠ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸ್ವೀಪ್ ಸ್ಪರ್ಧೆಗಳು 2024-25 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಚುನಾವಣಾ ಆಯೋಗದ ಆಶಯ ಶೇ.100ರಷ್ಟು ಮತದಾನವಾಗಬೇಕು. ಎಲ್ಲಾ ಮತದಾರರು ತಪ್ಪದೆ ಚುನಾವಣೆಯಲ್ಲಿ ಮತದಾನ ಮಾಡಲು ಜಾಗೃತಿಗಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸುಮಾ ಮಾತನಾಡಿ, ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಸ್ಪರ್ಧೆಗಳನ್ನು ಏರ್ಪಡಿಸಿದ್ದು, 2025ರ ಜನವರಿ 25ರಂದು ಜಿಲ್ಲಾಡಳಿತದಿಂದ ಬಹುಮಾನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ಮತ್ತು ನೋಡಲ್ ಅಧಿಕಾರಿ ಕೆ.ಜಿ.ಪ್ರಶಾಂತ್, ವಿಷಯ ಪರಿವೀಕ್ಷಕರಾದ ಚಂದ್ರಣ್ಣ, ಗೋವಿಂದಪ್ಪ, ಮಹಲಿಂಗಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶ್ರೀನಿವಾಸ, ಬೃಹನ್ಮಠ ಶಾಲೆಯ ಮುಖ್ಯ ಶಿಕ್ಷಕಿ ಅಶಾರಾಣಿ, ಆಂಗ್ಲ ಭಾಷಾ ಶಿಕ್ಷಕರಾದ ಸಿದ್ದೇಶ್, ತೀರ್ಪುಗಾರರು ಮತ್ತು ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.