ಸಾರಾಂಶ
ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ‘ಜನತಾ ನವನೀತ-2024’ ಕಾರ್ಯಕ್ರಮ ಉದ್ಘಾಟಿಸಲಾಯಿತು. ಶಿಕ್ಷಕ, ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ. ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಗೆದ್ದವರ ಕಥೆಗಳಿಗಿಂತಲೂ ಅತೀ ಹೆಚ್ಚು ಸೋತವರ ಕಥೆಗಳನ್ನು ಓದಬೇಕು. ಗೆದ್ದವರ ಕಥೆಗಳು ಅಹಂಕಾರವನ್ನು ಕಲಿಸಿದರೆ ಸೋತವರ ಕಥೆಗಳು ನಮಗೆ ಬದುಕುವುದನ್ನು ಕಲಿಸುತ್ತವೆ. ಯಶೋಗಾಥೆಗಳು ಆರಂಭವಾಗುವುದೇ ಬಡತನ ಹಾಗೂ ಹಸಿವಿನಿಂದ ಎಂದು ಶಿಕ್ಷಕ, ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ. ಹೇಳಿದರು.ಕುಂದಾಪುರದ ಮೊಗವೀರ ಭವನದಲ್ಲಿ ಸೋಮವಾರ ವಿವಿವಿ ಮಂಡಳಿ ಹೆಮ್ಮಾಡಿ, ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ‘ಜನತಾ ನವನೀತ-2024’ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ, ಪರೀಕ್ಷೆಯಲ್ಲಿ, ಬದುಕಿನಲ್ಲಿ ಸೋತವರ ಕಥೆಗಳು ನಮ್ಮನ್ನು ಪ್ರೇರೇಪಿಸುತ್ತಾ ಹೋಗುತ್ತವೆ. ಸೋತವರ ಕಥೆಗಳು ನಮಗೆ ಆದರ್ಶಗಳಾಗುತ್ತವೆ. ಗೆದ್ದಾಗ ಮಾತ್ರ ಸಂಭ್ರಮಿಸುವುದಲ್ಲ. ಸೋತಾಗಲೂ ಸಂಭ್ರಮಿಸಬೇಕು. ಸಣ್ಣ ಸಣ್ಣ ಸೋಲುಗಳನ್ನು ಎದುರಿಸುವುದನ್ನು ಅತ್ಯದ್ಭುತವಾಗಿ ಕಲಿಯಬೇಕು. ಅಂಕಗಳ ಜೊತೆಗೆ ಒಳ್ಳೆಯ ಮೌಲ್ಯ, ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಮನುಷ್ಯರಾಗಲು ಸಾಧ್ಯ. ಸ್ವಾಭಿಮಾನದ ಮೂಲಕ ಬದುಕುವುದು ಹೇಗೆ ಎನ್ನುವುದನ್ನು ಪೋಷಕರಿಂದ ಕಲಿತುಕೊಳ್ಳಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಮೇಶ್ ಪೂಜಾರಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಮುಖ್ಯ ಶಿಕ್ಷಕಿ ಕು. ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.
ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಸಾಧಕ ವಿದ್ಯಾರ್ಥಿಗಳು ಮತ್ತವರ ಪೋಷಕರನ್ನು ಸನ್ಮಾನಿಸಲಾಯಿತು. ಬಳಿಕ ಕಾಲೇಜು ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ‘ಹಿಗ್ಗಿನ-ಬುಗ್ಗೆ’ ಸಾಂಸ್ಕೃತಿಕ ವೈಭವ ಜರುಗಿತು.ಉಪಪ್ರಾಂಶುಪಾಲ ರಮೇಶ್ ಪೂಜಾರಿ ವಂದಿಸಿದರು. ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.