ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹದಗೆಟ್ಟ ಆಹಾರ ಪದ್ಧತಿಯ ಈ ದಿನಗಳಲ್ಲಿ ಆರೋಗ್ಯದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಅವಶ್ಯಕ. ಈ ನಿಟ್ಟಿನಲ್ಲಿ ಪತ್ರಕರ್ತರು ಹಾಗೂ ಕುಟುಂಭವರ್ಗಕ್ಕೆ ಆಯೋಜಿಸಿರುವ ಬೃಹತ್ ಆರೋಗ್ಯ ಶಿಬಿರ ಅರ್ಥಪೂರ್ಣವಾಗಿ ಜರುಗಿದೆ ಎಂದು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು. ನಗರದ ಗಾಂಧಿ ಭವನದಲ್ಲಿ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಜಿಯವರ ಸಾನ್ನಿಧ್ಯದೊಂದಿಗೆ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ ಅವರ ಸಹಕಾರದೊಂದಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಅವರು ಆದಿಚುಂಚನಗಿರಿ ಮಹಾವಿದ್ಯಾಲಯದಿಂದ ಇಂದು ಪತ್ರಕರ್ತರು, ಏಜೆಂಟರ ಕುಟುಂಬ ವರ್ಗಕ್ಕೆ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪತ್ರಕರ್ತರ ಸಂಘದಿಂದ ಇದೇ ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದೆ. ಆಯೋಜಕರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ ಅವರು ಸಹಕಾರ ನೀಡಿದ್ದಾರೆ. ಶಿಬಿರದಲ್ಲಿ ಬೆಂಗಳೂರಿನ ಕಿದ್ವಾಯಿ, ನಿಮಾನ್ಸ್, ಜಯದೇವ ಸೇರಿದಂತೆ ಹಲವು ಆಸ್ಪತ್ರೆಗಳು ಸಹಕಾರ ನೀಡಿದ್ದು ಇಂದು ಮನುಷ್ಯರಿಗೆ ಆರೋಗ್ಯ ಅತಿ ಮುಖ್ಯವಾಗಿದ್ದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ಪ್ರಾರಂಭಿಸಿ ಇಂದು ಹಾಸನ, ತುಮಕೂರು, ಕುಣಿಗಲ್,ಮಂಡ್ಯ ಸೇರಿದಂತೆ ನಾನಾ ಜಿಲ್ಲೆಗಳ ಬಡ ಹಾಗೂ ಮಧ್ಯಮ, ರೈತಾಪಿ ವರ್ಗದ ಜನರಿಗೆ ಆಸ್ಪತ್ರೆಗಳ ಮೂಲಕ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಸೇವೆಯೇ ಪೂಜೆ ಎಂಬ ಭಾವನೆಯಂತೆ ಶ್ರೀಮಠದಿಂದ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದ್ದು, ನುರಿತ ವೈದ್ಯರ ಸಹಕಾರದೊಂದಿಗೆ ಇಂದು ಯಶಸ್ವಿಯಾಗಿ ಆರೋಗ್ಯ ಶಿಬಿರ ನಡೆದಿದೆ ಎಂದರು.ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ೧೨ನೇ ವರ್ಷದ ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಯಲ್ಲಿ ೧೦೦ ಮಂದಿಗೆ ಉಚಿತವಾಗಿ ಹೃದ್ರೋಗ ಶಸ್ತ್ರಚಿಕಿತ್ಸೆ ಒದಗಿಸಲಾಗುತ್ತಿದೆ. ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠಕ್ಕೂ ಪತ್ರಕರ್ತರಿಗೂ ಅವಿನಾಭಾವ ಸಂಬಂಧವಿದ್ದು ಶಿಬಿರದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಿದ್ದು ಆರೋಗ್ಯ ಶಿಬಿರ ಉತ್ತಮವಾಗಿ ಆಯೋಜನೆಗೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಶಿಬಿರದ ವೀಕ್ಷಣೆ ಬಳಿಕ ಮಾತನಾಡಿ, ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ಅತ್ಯವಶ್ಯಕವಾಗಿದ್ದು ಇಂತಹ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಶ್ಲಾಘನೀಯ ಎಂದು ಹೇಳಿದರು. ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗಕ್ಕೆ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಮಾಡಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೇಣುಕುಮಾರ್ ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು ಈ ರೀತಿಯ ಆರೋಗ್ಯ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಆರೋಗ್ಯ ಶಿಬಿರ ವೀಕ್ಷಣೆ ಬಳಿಕ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ, ಇಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಬೃಹತ್ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸ್ವಾಮೀಜಿಗಳು ಸಹಕಾರ ನೀಡಿದ್ದು, ತುಮಕೂರು ಹಾಸನ ಕುಣಿಗಲ್ ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ತೆರೆದು ಶ್ರೀ ಮಠವು ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದ್ದು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಹಾಗೂ ಶ್ರೀ ಕಾಲಭೈರವೇಶ್ವರ ದೇವರ ಕೃಪೆ, ಆಶೀರ್ವಾದವು ಇರುವುದರಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದ ಎಂದು ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಮಾತನಾಡಿ, ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ಜಿಲ್ಲೆಯ ಪತ್ರಕರ್ತರು ಹಾಗೂ ಕುಟುಂಬ ವರ್ಗ ಹುಮ್ಮಸ್ಸಿನಿಂದ ಭಾಗವಹಿಸಿದ್ದು ಸಂತಸ ತಂದಿದೆ. ಹಲವು ತಿಂಗಳಿನಿಂದ ಪತ್ರಕರ್ತರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ಶಿಬಿರ ಆಯೋಜನೆ ಮಾಡಬೇಕು ಎಂಬ ಉದ್ದೇಶಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರ ಸಹಕಾರದೊಂದಿಗೆ ಹಾಗೂ ಬೆಂಗಳೂರು, ಮೈಸೂರಿನ ಪ್ರಮುಖ ಆಸ್ಪತ್ರೆಗಳ ಸಹಯೋಗದೊಂದಿಗೆ ಶಿಬಿರ ಯಶಸ್ವಿಯಾಗಿದ್ದು, ಸಹಕರಿಸಿದ ಹಿರಿಯಾ ಪತ್ರಕರ್ತರು ಸಂಘದ ಸದಸ್ಯರು ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಆರೋಗ್ಯ ಶಿಬಿರದಲ್ಲಿ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ , ಬೆಂಗಳೂರಿನ ನಿಮಾನ್ಸ್, ಕಿದ್ವಾಯಿ ಮಂಗಳೂರಿನ ಯನಪೋಯ ಹಾಗೂ ಹಾಸನದ ಪ್ರಸೋತಿ ಮತ್ತು ಸ್ತ್ರಿ ರೋಗ ತಜ್ಞರ ಸಂಘದ ಸಹಕಾರದೊಂದಿಗೆ ನಡೆಯಿತು. ೧೨ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ, ೨೦ ಮಂದಿ ರಕ್ತದಾನ, ಪಬ್ಲಿಕ್ ಎಕ್ಸ್ಪ್ರೆಸ್ ದೃಶ್ಯ ಮಾಧ್ಯಮದ ವರದಿಗಾರ ನಾಗರಾಜ್, ಸುನಿತಾ, ಲೋಕೇಶ್ ಸೇರಿದಂತೆ ಸುಮಾರು ೧೨ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದರು. ಸುಮಾರು ೨೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಶನಿವಾರ ಬೆಳಗ್ಗೆ ೯ ಗಂಟೆಯಿಂದ ಆರಂಭವಾದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜಿಲ್ಲೆಯ ನಾನಾ ತಾಲೂಕುಗಳಿಂದ ಆಗಮಿಸಿದ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರು ರಕ್ತ ಪರೀಕ್ಷೆ, ಅಧಿಕ ರಕ್ತದೊತ್ತಡ, ಕಣ್ಣು, ಮೂಗು ,ಕಿವಿ ಸೇರಿದಂತೆ ನಾನಾ ಚಿಕಿತ್ಸೆಗೆ ಒಳಗಾದರು. ಸುಮಾರು ೧೦೦೦ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದು ಎಲ್ಲರಿಗೂ ವೈದ್ಯರು ಸೂಕ್ತ ತಪಾಸಣೆ ನಡೆಸಿ ಸಲಹೆ ನೀಡಿದರು ಹಾಗೂ ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿಯನ್ನು ವಿತರಿಸಿದರು. ಮಹಿಳೆಯರಿಗೆ ವಿಶೇಷವಾಗಿ ಕ್ಯಾನ್ಸರ್ ತಪಾಸಣೆಯೂ ನಡೆಯಿತು. ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್.ಮಂಜುನಾಥ್, ಬಿ.ಆರ್ ಉದಯಕುಮಾರ್, ಲೀಲಾವತಿ, ತಾಲೂಕು ಘಟಕದ ಅಧ್ಯಕ್ಷರು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಸಿ ಶಶಿಧರ್, ಉಪಾಧ್ಯಕ್ಷರಾದ ಎಚ್.ಟಿ ಮೋಹನ್ ಕುಮಾರ್, ಕೆ.ಎಂ.ಹರೀಶ್, ಖಜಾಂಚಿ ಕುಮಾರ್, ಕಾರ್ಯದರ್ಶಿ ಸಿ.ಬಿ.ಸಂತೋಷ್, ಪಿ.ಎ.ಶ್ರೀನಿವಾಸ್ ಸೇರಿದಂತೆ ಕಾರ್ಯಕಾರಿ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು ಇದ್ದರು.